ಜೂ.12ರಂದು ನಡೆದ ಭೀಕರ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಅದರ ಎರಡೂ ಎಂಜಿನ್‌ಗಳ ವೈಫಲ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿರುವ ನಡುವೆಯೇ, ನಿಖರ ಕಾರಣ ತಿಳಿಯಲು ಸಿಮ್ಯುಲೇಶನ್‌ ಪರೀಕ್ಷೆ ನಡೆಸಲಾಗಿದೆ.

ಅಹಮದಾಬಾದ್‌: ಜೂ.12ರಂದು ನಡೆದ ಭೀಕರ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಅದರ ಎರಡೂ ಎಂಜಿನ್‌ಗಳ ವೈಫಲ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿರುವ ನಡುವೆಯೇ, ನಿಖರ ಕಾರಣ ತಿಳಿಯಲು ಸಿಮ್ಯುಲೇಶನ್‌ ಪರೀಕ್ಷೆ ನಡೆಸಲಾಗಿದೆ.

ಈ ಪರೀಕ್ಷೆ ವೇಳೆ ಅಪಘಾತಕ್ಕೂ ಮುನ್ನ ವಿಮಾನದಲ್ಲಿ ಎಂಜಿನ್‌ ವೈಫಲ್ಯದ ಜತೆಗೆ ತಾಂತ್ರಿಕ ದೋಷವೂ ಕಾಣಿಸಿಕೊಂಡಿತ್ತು. ಇದೂ ಕೂಡ ದುರಂತಕ್ಕೆ ಕಾರಣವಾಗಿರಬಹುದು ಎಂದು ಗೊತ್ತಾಗಿದ್ದು, ಆ ತಾಂತ್ರಿಕ ದೋಷವೇನು ಎಂಬ ಪತ್ತೆಗೆ ತನಿಖೆಯನ್ನು ಕೇಂದ್ರೀಕರಿಸಲು ನಿರ್ಧರಿಸಲಾಗಿದೆ.

ದುರ್ಘಟನೆಯ ತನಿಖೆಯನ್ನು ನಡೆಸುತ್ತಿರುವ ವಿಮಾನ ಅಪಘಾತ ತನಿಖಾ ಬ್ಯೂರೋ(ಎಎಐಬಿ) ಈ ಬಗೆಗಿನ ವರದಿಯನ್ನು ಮುಂದಿನ ವಾರದೊಳಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಏನಿದು ಪರೀಕ್ಷೆ?:

ಸಿಮ್ಯುಲೇಶನ್‌ ಪರೀಕ್ಷೆಯಲ್ಲಿ, ಅಪಘಾತಕ್ಕೆ ತುತ್ತಾಗುವ ಮುನ್ನ ವಿಮಾನ ಯಾವ ಸ್ಥಿತಿಯಲ್ಲಿತ್ತೋ, ಆ ರೀತಿಯೇ ಪರಿಸ್ಥಿತಿಯನ್ನು ಮರುಸೃಷ್ಟಿಸಲಾಗುತ್ತದೆ. ಇದರಿಂದ ಅವಘಡಕ್ಕೆ ಕಾರಣವೇನು ಎಂಬುದನ್ನು ಅಂದಾಜಿಸಲು ಸುಲಭವಾಗುತ್ತದೆ. ಏರಿಂಡಿಯಾ ವಿಷಯದಲ್ಲಿ, ಲ್ಯಾಂಡಿಂಗ್‌ ಗೇರ್‌ (ವಿಮಾನದ ಚಕ್ರ) ಹೊರಗೆ ಚಾಚಿದ್ದು, ರೆಕ್ಕೆಯ ತುದಿಗಿರುವ ಮಡಿಕೆ ಸರಿಯಾಗಿ ಹಿಂದೆ ಚಾಚಿದಂತೆ ಇಟ್ಟುಕೊಂಡು ಪರೀಕ್ಷೆ ನಡೆಸಲಾಯಿತು. ಈ ವೇಳೆ, ಅಪಘಾತಕ್ಕೆ ತಾಂತ್ರಿಕ ದೋಷವೂ ಕಾರಣ ಇರಬಹುದು ಎಂದು ಅನುಮಾನಿಸಲಾಗಿದೆ.

ತಾಂತ್ರಿಕ ದೋಷ: ಹಠಾತ್‌ 26 ಸಾವಿರ ಅಡಿ ಕುಸಿದ ಜಪಾನ್‌ ವಿಮಾನ

ಟೋಕಿಯೋ : 36,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಜಪಾನ್‌ ಏರ್‌ಲೈನ್ಸ್‌ನ ಬೋಯಿಂಗ್‌ ವಿಮಾನವೊಂದು ಕೇವಲ 10 ನಿಮಿಷದಲ್ಲಿ 26,000 ಅಡಿಯಷ್ಟು ಕುಸಿದ ಘಟನೆ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಹಾನಿಯಿಲ್ಲದೆ ಅದು ಒಸಾಕಾದಲ್ಲಿ ಲ್ಯಾಂಡ್‌ ಆಗಿದ್ದು, ಭಾರೀ ದುರಂತವೊಂದು ತಪ್ಪಿದೆ.

191 ಪ್ರಯಾಣಿಕರನ್ನು ಹೊತ್ತು ಜೂ.30ರಂದು ಚೀನಾದ ಶಾಂಘೈನಿಂದ ಜಪಾನ್‌ನ ಟೋಕಿಯೋಗೆ ಹೊರಟಿದ್ದ ಬೋಯಿಂಗ್‌ 737 ವಿಮಾನದಲ್ಲಿ ಮಾರ್ಗಮಧ್ಯದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಇದರಿಂದಾಗಿ ಅದು ಹಠಾತ್ತನೆ 36 ಸಾವಿರ ಅಡಿಯಿಂದ 10,500 ಅಡಿಗೆ ಕುಸಿಯಿತು..

ಕೂಡಲೇ ತುರ್ತು ಸ್ಥಿತಿ ಘೋಷಿಸಿದ ಪೈಲಟ್‌, ಅದನ್ನು ಒಸಾಕಾದ ಕನ್ಸಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿ ಸುರಕ್ಷಿತ ಲ್ಯಾಂಡ್‌ ಮಾಡಿದರು.ಈ ಹೊಯ್ದಾಟದಿಂದ ಬೆಚ್ಚಿದ ಪ್ರಯಾಣಿಕರಿಗೆ ಆಕ್ಸಿಜನ್‌ ಮಾಸ್ಕ್‌ ನೀಡಲಾಯಿತು ಹಾಗೂ ಧೈರ್ಯ ತುಂಬಲಾಯಿತು. ತಾವು ಸತ್ತೇ ಹೋದೆವು ಎಂದು ಭಾವಿಸಿದ ಕೆಲವರು ತಮ್ಮವರಿಗೆ ಮೊಬೈಲಲ್ಲಿ ಸಂದೇಶವನ್ನು ಕಳಿಸುತ್ತಿದ್ದುದು ಕಂಡುಬಂದಿದೆ.275 ಜನರನ್ನು ಬಲಿಪಡೆದ ಅಹಮದಾಬಾದ್‌ ದುರಂತದ ಬಳಿಕ ಬೋಯಿಂಗ್‌ ವಿಮಾನಗಳಲ್ಲಿ ಮೇಲಿಂದಮೇಲೆ ಇಂತಹ ದೋಷಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.

ಆಗಸದಲ್ಲೇ ಕುಸಿದ ಸ್ಪೈಸ್‌ ಜೆಟ್‌ ಕಿಟಕಿ: ತಪ್ಪಿದ ಅನಾಹುತ

ನವದೆಹಲಿ: ಗೋವಾದಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಸ್ಟೈಸ್‌ ಜೆಟ್‌ ವಿಮಾನ ಆಗಸದಲ್ಲಿ ಹಾರಾಡುತ್ತಿದ್ದಾಗಲೇ ಕಿಟಕಿ ವಿಮಾನದೊಳಗೆ ಕುಸಿದ ಘಟನೆ ನಡೆದಿದೆ. ಈ ವೇಳೆ ಪ್ರಯಾಣಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

ಜು.1ರಂದು ಘಟನೆ ನಡೆದಿದ್ದು, ಸ್ಪೈಸ್‌ಜೆಟ್‌ ಎಸ್‌ಜಿ 1080 ವಿಮಾನವು ಗೋವಾದಿಂದ ಪುಣೆಗೆ ತೆರಳುತ್ತಿದ್ದಾಗ ಕಿಟಕಿ ಆಗಸದಲ್ಲಿಯೇ ಕಳಚಿಕೊಂಡಿದೆ. ಆದರೆ ಅದೃಷ್ಟವಶಾತ್ ಕಿಟಕಿಯ ಹೊರ ಪದರಗಳು ಸಡಿಲಗೊಳ್ಳದೇ ಹಾಗೆಯೇ ಉಳಿದಿರುವುದರಿಂದ ಕ್ಯಾಬಿನ್‌ನಲ್ಲಿ ಒತ್ತಡ ಕಡಿಮೆಯಾಗಿರಲಿಲ್ಲ. ಹೀಗಾಗಿ ಯಾವುದೇ ಅನಾಹುತವಿರದೇ ಪ್ರಯಾಣಿಕರು ಪಾರಾಗಿದ್ದಾರೆ.