ಗುಜರಾತಿಗಳ ಕುರಿತ ತಮ್ಮ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧದ ಆರೋಪ ಪ್ರಕರಣದಲ್ಲಿ, ಕಾಂಗ್ರೆಸ್ ನಾಯಕ ಪವನ್ ಖೇರಾ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅವರ ಭಾವನೆ ನೋಯಿಸೋ ಉದ್ದೇಶ ಇರ್ಲಿಲ್ಲ ಖರ್ಗೆ

ನವದೆಹಲಿ (ಏ.9) :‘ಗುಜರಾತಿಗಳು ಅನಕ್ಷರಸ್ಥರು. ಅದಕ್ಕೆಂದೇ ಮೋದಿ ಅವರನ್ನು ಗೆಲ್ಲಿಸಿದ್ದಾರೆ’ ಎಂದು ಕೇರಳ ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆ ಬಗ್ಗೆ ಸ್ಪಷ್ಟನೆ ನೀಡುವ ಯತ್ನವನ್ನು ಮಾಡಿದ್ದು, ‘ಗುಜರಾತ್‌ ಜನರ ಭಾವನೆಗಳನ್ನು ನೋಯಿಸುವ ಉದ್ದೇಶ ಇರಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಅವರು, ‘ಇತ್ತೀಚೆಗೆ ಕೇರಳದಲ್ಲಿ ನಾನು ನೀಡಿದ ಕೆಲ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಹಾಗಿರುವ ಹೊರತಾಗಿಯೂ ನಾನು ಆ ಬಗ್ಗೆ ವಿಷಾದಿಸುತ್ತೇನೆ. ನಾನು ಅತಿ ಹೆಚ್ಚು ಗೌರವಿಸುವ ಗುಜರಾತಿಗಳಿಗೆ ಭಾವನೆಗೆ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಖೇರಾ ಅರ್ಜಿ

ಹೈದರಾಬಾದ್‌: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹಲವು ಪಾಸ್‌ಪೋರ್ಟ್‌ ಹೊಂದಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್‌ ನಾಯಕ ಪವನ್‌ ಖೇರಾ ವಿರುದ್ಧ ಅಸ್ಸಾಂ ಸರ್ಕಾರ ಪ್ರಕರಣ ದಾಖಲಿಸಿರುವ ಹಿನ್ನೆಲೆ ನಿರೀಕ್ಷಣಾ ಜಾಮೀನು ಕೋರಿ ಖೇರಾ ತೆಲಂಗಾಣ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಏ.7ರಂದೇ ಪವನ್‌ ಖೇರಾ ಅರ್ಜಿ ಸಲ್ಲಿಸಿದ್ದಾರೆ. ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದ ವಿಳಾಸದ ದಾಖಲೆ ಸಲ್ಲಿಸಿ ಕಾಂಗ್ರೆಸ್‌ ನಾಯಕ ನಿರೀಕ್ಷಣಾ ಜಾಮೀನಿಗೆ ಮನವಿ ಮಾಡಿದ್ದಾರೆ. ‘ಅಸ್ಸಾ ಸಿಎಂ ಪತ್ನಿ ರಿನಿಕಾ ಭೂಯಾನ್‌ ಶರ್ಮಾ ಹಲವು ಪಾಸ್‌ಪೋರ್ಟ್‌ ಹೊಂದಿದ್ದಾರೆ. ಅದನ್ನು ಶರ್ಮಾ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತೋರಿಸಿಲ್ಲ’ ಎಂದು ಪವನ್‌ ಆರೋಪಿಸಿದ್ದರು. ಮಂಗಳವಾರವಷ್ಟೇ ಪ್ರಕರಣದ ವಿಚಾರಣೆಗಾಗಿ ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಖೇರಾ ನಿವಾಸಕ್ಕೆ ತೆರಳಿದ್ದರು.