ಆರ್‌ಎಸ್‌ಎಸ್‌ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಖರ್ಗೆಯವರನ್ನು '21ನೇ ಶತಮಾನದ ಮಹಮ್ಮದ್ ಅಲಿ ಜಿನ್ನಾ' ಎಂದು ಕರೆದಿರುವ ಸಿಂಹ, ಅವರ ಹೇಳಿಕೆಯು ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ. ಈ ರಾಜಕೀಯ ವಾಕ್ಸಮರವು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಮೈಸೂರು: ಆರ್‌ಎಸ್‌ಎಸ್‌ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಕುರಿತು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರತಾಪ್ ಸಿಂಹ ಅವರು ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ಮಲ್ಲಿಕಾರ್ಜುನ ಖರ್ಗೆ 21ನೇ ಶತಮಾನದ ಮಹಮ್ಮದ್ ಅಲಿ ಜಿನ್ನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವತ್ತಿನ ಮುಸ್ಲಿಂ ಲೀಗ್ ಅಧ್ಯಕ್ಷ ಜಿನ್ನಾ ಹೇಗೆ ಮಾತನಾಡಿದರೋ, ಅದೇ ಶೈಲಿಯಲ್ಲಿ ಖರ್ಗೆ ಮಾತನಾಡುತ್ತಿದ್ದಾರೆ. ಇಂದು ಕಾಂಗ್ರೆಸ್‌ನಲ್ಲಿ ಖರ್ಗೆಯೇ ಮುಸ್ಲಿಂ ಲೀಗ್ ಮನೋಭಾವವನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದಾಗಿ ಅವರು ಟೀಕಿಸಿದರು.

ಅಪ್ಪ-ಮಗನಿಗೆ ಆರ್ ಎಸ್ ಎಸ್ ಹುಚ್ಚು ಹಿಡಿದಿದೆ

ಮರಿ ಖರ್ಗೆಗೆ ಆರ್ ಎಸ್ ಎಸ್ ಹುಚ್ಚು ಹಿಡಿದಿದೆ. ಮಗನಿಗೆ ಹಿಡಿದ ಹುಚ್ಚು ಈಗ ಅಪ್ಪನಿಗೆ ಬಂದಿದೆ. ಆರ್ ಎಸ್ ಎಸ್ ಬಗ್ಗೆ ಮಾತಾಡದೆ ಇದ್ದರೆ ಅಪ್ಪ - ಮಗನಿಗೆ ತಿಂದಿದ್ದು ಕರಗಲ್ಲ . ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳುವ ಉದ್ದೇಶದಿಂದಲೇ ಖರ್ಗೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರಬಹುದು ಎಂದು ಪ್ರತಾಪ್ ಸಿಂಹ ಎಂದು ವ್ಯಂಗ್ಯವಾಡಿದರು.

ದೇಶಾದ್ಯಂತ ಕೋಮು ದ್ವೇಷವನ್ನು ಉಂಟುಮಾಡುವ ರೀತಿಯಲ್ಲಿ ಖರ್ಗೆ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ಅನ್ನು ಬೆಳೆಸಿರುವುದು ಹಿಂದೂಗಳು. ಹೀಗಾಗಿ, ಅವರ ಹೇಳಿಕೆಗಳಿಂದ ಹಿಂದೂ ಸಮುದಾಯವನ್ನು ಅವಮಾನಿಸಿದಂತಾಗಿದೆ ಎಂದು ಅವರು ಆರೋಪಿಸಿದರು.

ಖರ್ಗೆ ಅವರ ಕುಟುಂಬವೇ ಹಿಂದೆ ಕೋಮು ಹಿಂಸಾಚಾರದ ನೋವು ಅನುಭವಿಸಿದೆ

ಖರ್ಗೆ ಅವರ ಹಿನ್ನಲೆ ಕುರಿತು ಮಾತನಾಡಿದ ಪ್ರತಾಪ್ ಸಿಂಹ, ಖರ್ಗೆ ಅವರ ಕುಟುಂಬವೇ ಹಿಂದೆ ಕೋಮು ಹಿಂಸಾಚಾರದ ನೋವು ಅನುಭವಿಸಿದೆ. ಆದರೂ ಅವರು ಇಂದು ಅದೇ ಸಮುದಾಯದ ಓಲೈಕೆಯಲ್ಲಿ ಮಾತನಾಡುತ್ತಿರುವುದು ವಿಷಾದನೀಯ ಎಂದು ಹೇಳಿದರು. ಮುಸ್ಲಿಂ ಸಮುದಾಯದ ಓಲೈಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗಿಂತಲೂ ಖರ್ಗೆ ಮುಂದೆ ಹೋಗಿದ್ದಾರೆ. ಖರ್ಗೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.

ಇದೇ ವೇಳೆ, ಅಸ್ಸಾಂ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಖರ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ಮಾತನಾಡಿದ ಅವರು, “ಕುರಾನ್‌ನಲ್ಲಿ ನಮಾಜ್ ಮಾಡುವಾಗಲೂ ವಿಷಕಾರಿ ಹಾವನ್ನು ಕಂಡರೆ ಕೊಲ್ಲಬೇಕು ಎಂದು ಹೇಳಲಾಗಿದೆ. ಆರ್‌ಎಸ್‌ಎಸ್‌ ಅಥವಾ ಬಿಜೆಪಿ ಕೂಡ ಅದೇ ರೀತಿಯ ಹಾವುಗಳಂತೆ. ಅವುಗಳನ್ನು ಎದುರಿಸದಿದ್ದರೆ ಬದುಕಲು ಸಾಧ್ಯವಿಲ್ಲ” ಎಂಬ ಹೇಳಿಕೆ ನೀಡಿದ್ದರು ಎಂದು ವರದಿಯಾಗಿದೆ.

ಈ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಖರ್ಗೆ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣವು ಇನ್ನಷ್ಟು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಒಟ್ಟಾರೆ, ಖರ್ಗೆ ಅವರ ಹೇಳಿಕೆಗಳು ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳು ರಾಜ್ಯ ಹಾಗೂ ದೇಶದ ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ದಾರಿ ಮಾಡಿಕೊಟ್ಟಿವೆ.