ರಾಷ್ಟ್ರ ಲಾಂಛನದ ಸಿಂಹದ ಉಗ್ರಾವತಾರಕ್ಕೆ ಕಾಂಗ್ರೆಸ್ ಕ್ಯಾತೆ, ಕೇಂದ್ರದ ವಿರುದ್ಧ ಮತ್ತೊಂದು ರಣಕಹಳೆ!
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೊಸ ಸಂಸತ್ ಭವನದ ಮೇಲಿರಲಿರುವ ರಾಷ್ಟ್ರ ಲಾಂಛನವನ್ನು ಅನಾವರಣ ಮಾಡಿದರು. ಈ ವೇಳೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಹಾಗೂ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಕಾರ್ಯಕ್ರಮದಲ್ಲಿದ್ದರು. ಆದರೆ, ಈ ರಾಷ್ಟ್ರಲಾಂಛನದಲ್ಲಿ ಸಿಂಹಗಳನ್ನು ತುಂಬಿಕೊಂಡ ಸ್ನಾಯುವುಳ್ಳ, ಆಕ್ರಮಣಕಾರಿ ರೀತಿಯಲ್ಲಿ ಚಿತ್ರಿಸಿದ್ದಕ್ಕೆ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಕ್ಯಾತೆ ತೆಗೆದಿವೆ.
ನವದೆಹಲಿ (ಜುಲೈ 12): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ದೇಶದ ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಿದೆ ಎಂದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಆಪಾದನೆ ಮಾಡಿವೆ. ಸುಂದರ ಮತ್ತು ವಿಶ್ವಾಸದ ಮುಖದಿಂದ ಕೂಡಿರುವ ಅಶೋಕನ ಸಿಂಹದ ಬದಲಿಗೆ ಭಯಾನಕ ಹಾಗೂ ಆಕ್ರಮಣಕಾರಿ ಭಂಗಿ ಹೊಂದಿರುವ ಸಿಂಹಗಳ ರೀತಿಯಲ್ಲಿ ಲಾಂಛನವನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ. ನರೇಂದ್ರ ಮೋದಿ ಅವರೇ ದಯವಿಟ್ಟು ಸಿಂಹದ ಮುಖವನ್ನೊಮ್ಮೆ ಸರಿಯಾಗಿ ಗಮನಿಸಿ. ಇದು ಪ್ರಸಿದ್ಧ ಸಾರಾನಾಥದಲ್ಲಿದ್ದ ಸಿಂಹದ ಲಾಂಛನಗಳೇ ಅಥವಾ ಗಿರ್ ಸಿಂಹದ ವಿಕೃತ ಆವೃತ್ತಿಯೇ? ಇದನ್ನು ಮತ್ತೊಮ್ಮೆ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸರಿಪಡಿಸಿ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ನ ವಿರೋಧ ಪಕ್ಷದ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ನಮ್ಮ ರಾಷ್ಟ್ರೀಯ ಚಿಹ್ನೆ, ಭವ್ಯ ಅಶೋಕನ ಸಿಂಹಗಳಿಗೆ ಅವಮಾನವಾಗಿದೆ. ಮೂಲ ಸಾರಾನಾಥದ ಸಿಂಹದ ಚಿತ್ರ ಎಡಭಾಗದಲ್ಲಿದೆ, ಆಕರ್ಷಕವಾಗಿದೆ, ಪ್ರಾಮಾಣಿಕವಾಗಿ ಆತ್ಮವಿಶ್ವಾಸವಿದೆ. ಬಲಭಾಗದಲ್ಲಿದ್ದು ಮೋದಿಯವರ ಆವೃತ್ತಿಯಾಗಿದೆ, ಹೊಸ ಸಂಸತ್ತಿನ ಕಟ್ಟಡದ ಮೇಲೆ ಇರಿಸಲಾಗಿದೆ . ಗರ್ಜನೆ ಮಾಡುತ್ತಿರುವ, ಅನಗತ್ಯವಾಗಿ ಆಕ್ರಮಣಕಾರಿಯಾಗಿ ಅಸಮಂಜಸವಾಗಿರುವ ನಾಚಿಕೆಗೇಡಿನ ಆವೃತ್ತಿ ಇದಾಗಿದೆ. ಇದನ್ನು ತಕ್ಷಣವೇ ಬದಲಿಸಿ ಎಂದು ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜವಾಹರ್ ಸಿರ್ಕಾರ್ ಟ್ವಿಟರ್ನಲ್ಲಿ ರಾಷ್ಟ್ರೀಯ ಲಾಂಛನದ ಎರಡು ವಿಭಿನ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ (Congress) ಹಿರಿಯ ನಾಯಕ ಜೈರಾಮ್ ರಮೇಶ್, ಇದು ದೇಶದ ರಾಷ್ಟ್ರ ಲಾಂಛನಕ್ಕೆ (national Emblem) ಮಾಡಿರುವ ಅತಿದೊಡ್ಡ ಅವಮಾನ ಎಂದು ಹೇಳಿದ್ದಾರೆ. "ಸಾರನಾಥದಲ್ಲಿರುವ ಅಶೋಕನ ಸ್ತಂಭದ ಮೇಲಿರುವ ಸಿಂಹಗಳ ಸ್ವರೂಪ ಸಂಪೂರ್ಣವಾಗಿ ಬದಲಾಯಿಸುವುದು ಭಾರತದ ರಾಷ್ಟ್ರೀಯ ಚಿಹ್ನೆಗೆ ಮಾಡಿದ ಅವಮಾನ ಎಂದು ಬರೆದುಕೊಂಡಿದ್ದಾರೆ.
ಟ್ವಿಟರ್ನಲ್ಲಿ ಸಾರಾನಾಥ ಸಿಂಹ ಟ್ರೆಂಡ್: ಟ್ವಿಟರ್ನಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದ ವಿಧಾನಸೌಧದ ಮೇಲಿರುವ ರಾಷ್ಟ್ರಲಾಂಛನ ಹಾಗೂ ಹೊಸ ಸಂಸತ್ ಭವನದ ಮೇಲಿರುವ ರಾಷ್ಟ್ರಲಾಂಛನವನ್ನು ಶೇರ್ ಮಾಡಿಕೊಂಡಿದ್ದ ನೆಟಿಜನ್ಸ್ಗಳು ಆಗಿರುವ ಬದಲಾವಣೆಯ ಬಗ್ಗೆ ಗಮನಸೆಳೆದಿದ್ದರು. ಕಳೆದ 70 ವರ್ಷಗಳಲ್ಲಿ ರಾಷ್ಟ್ರಲಾಂಛನದ ಸಿಂಹಗಳು ಈ ರೀತಿ ಇದ್ದರೆ, ಕಳೆದ 8 ವರ್ಷಗಳಲ್ಲಿ ಸಿಂಹ ಈ ರೀತಿ ಇದೆ ಎಂದು ಬರೆದುಕೊಂಡಿದ್ದರು. ಕರ್ನಾಟಕದ ವಿಧಾನಸೌಧದ ಮೇಲಿದ್ದ ಸಿಂಹಗಳು ಬಾಯಿಮುಚ್ಚಿಕೊಂಡಿದ್ದರೆ, ಹೊಸ ಸಂಸತ್ ಭವನದ (New Parliament Building) ಲಾಂಛನದ ಸಿಂಹಗಳು ಘರ್ಜನೆ ಮಾಡುವಂತೆ ಇದ್ದವು. ಆದರೆ, ಹೊಸ ಸಂಸತ್ ಭವನದ ಲಾಂಛನ ಮೂಲ ಸಾರಾನಾಥದ ಸ್ತಂಭದಲ್ಲಿರ ಲಾಂಛನವನ್ನು ಹೋಲುತ್ತಿದೆ.
ಕಲಾವಿದನ ಸ್ಪಷ್ಟನೆ: ಈ ನಡುವೆ ಹೊಸ ಸಂಸತ್ ಭವನದ ಮೇಲಿರುವ ಲಾಂಛನವನ್ನು ನಿರ್ಮಾಣ ಮಾಡಿದ ಕಲಾವಿದ ಸುನೀಲ್ ದಿಯೋರ್ (Sunil Deore) ಮಾತನಾಡಿದ್ದು, ಸಾರಾನಾಥದ ಸ್ತಂಭದ ರೀತಿಯಲ್ಲಿಯೇ ಇದನ್ನು ಚಿತ್ರಿಸಲಾಗಿದೆ. 9 ತಿಂಗಳ ಕಾಲ ಶ್ರಮವಹಿಸಿ ಇದರ ನಿರ್ಮಾಣ ಮಾಡಿದ್ದೇವೆ. ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ. ಸಾರಾನಾಥದಲ್ಲಿರುವ ಸ್ತಂಭದ ಸಿಂಹಗಳನ್ನೇ ಇಲ್ಲಿ ಚಿತ್ರಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಪ್ರಧಾನಿಯಿಂದ ಸಾಂವಿಧಾನಿಕ ನಿಯಮ ಉಲ್ಲಂಘನೆ: ವಿಪಕ್ಷಗಳ ಆಹ್ವಾನಿಸದ್ದಕ್ಕೆ ಆಕ್ರೋಶಕ್ಕೆ ಕಾರಣವೇನು?
ಬಿಜೆಪಿ ಟೀಕೆ: ಇದರ ನಡುವೆ ಸಚಿವೆ ಸ್ಮೃತಿ ಇರಾನಿ (smriti irani) ವಿವಾದದ ಬಗ್ಗೆ ಮಾತನಾಡಿದ್ದು, ಸಂವಿಧಾನವನ್ನು ಬದಲಾಯಿಸಿದ, ಸಂವಿಧಾನವನ್ನು ಮುರಿದ ವ್ಯಕ್ತಿಗಳು ಅಶೋಕ ಸ್ತಂಭದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಳಿ ದೇವಿಗೆ ಗೌರವ ನೀಡಲು ಗೊತ್ತಿಲ್ಲದವರು, ಅಶೋಕ ಸ್ತಂಭದಕ್ಕೆ ಗೌರವ ನೀಡುತ್ತಾರೆಯೇ. ಕಲಾವಿದನ ಕಡೆಯಿಂದಾಗಲಿ ಸರ್ಕಾರದ ಕಡೆಯಿಂದಾಗಲಿ ಯಾವುದೇ ತಪ್ಪುಗಳಾಗಿಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಹೊಸ ಸಂಸತ್ ಭವನದ ಮೇಲೆ ರಾರಾಜಿಸಲಿದೆ ರಾಷ್ಟ್ರೀಯ ಲಾಂಛನ, ಪ್ರಧಾನಿಯಿಂದ ಅನಾವರಣ
ಮೂಲ ಸಾರಾನಾಥದ ಲಾಂಛನವು 1.6 ಮೀಟರ್ ಎತ್ತರವಾಗಿದೆ. ಆದರೆ, ಸಂಸತ್ತಿನ ಕಟ್ಟಡದ ಮೇಲಿನ ಲಾಂಛನವು 6.5 ಮೀಟರ್ ಎತ್ತರದಲ್ಲಿ ದೊಡ್ಡದಾಗಿದೆ. ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಅವಿತಿರುತ್ತದೆ. ಶಾಂತ ಹಾಗೂ ಕೋಪದ ವಿಚಾರ ಕೂಡ ಇದೇ ರೀತಿಯದ್ದಾಗಿದೆ' ಎಂದು ಸಾರಾನಾಥದ ಮೂಲ ಸ್ತಂಭದ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾರೆ.