ಪ್ರಧಾನಿಯಿಂದ ಸಾಂವಿಧಾನಿಕ ನಿಯಮ ಉಲ್ಲಂಘನೆ: ವಿಪಕ್ಷಗಳ ಆಹ್ವಾನಿಸದ್ದಕ್ಕೆ ಆಕ್ರೋಶಕ್ಕೆ ಕಾರಣವೇನು?
* ಸಂಸತ್ ಆವರಣದಲ್ಲಿ ಧಾರ್ಮಿಕ ಆಚರಣೆ ಸರಿಯಲ್ಲ
* ವಿಪಕ್ಷಗಳ ಆಹ್ವಾನಿಸದ್ದಕ್ಕೆ ಆಕ್ರೋಶ
* ಪ್ರಧಾನಿಯಿಂದ ಸಾಂವಿಧಾನಿಕ ನಿಯಮ ಉಲ್ಲಂಘನೆ
ನವದೆಹಲಿ(ಜು.12): ನೂತನ ಸಂಸತ್ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನ ಅನಾವರಣ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕರನ್ನು ಆಹ್ವಾನಿಸದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಸಂಸತ್ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದಕ್ಕೂ ಮತ್ತು ಕಾರ್ಯಾಂಗ ಮುಖ್ಯಸ್ಥನಾಗಿ ಶಾಸಕಾಂಗದ ಕಟ್ಟಡದಲ್ಲಿ ಲಾಂಛನ ಉದ್ಘಾಟಿಸಿದ್ದನ್ನೂ ವಿಪಕ್ಷಗಳು ಟೀಕಿಸಿವೆ.
‘ರಾಷ್ಟ್ರೀಯ ಲಾಂಛನ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಷ್ಟುವಿಪಕ್ಷ ನಾಯಕರನ್ನು ಆಹ್ವಾನಿಸಲಾಗಿದೆ? ಲಾಂಛನದ ಭಾರ 9500 ಕೇಜಿಯಾದರೂ, ಬಿಜೆಪಿ ಅಹಂಕಾರದ ಭಾರ ಇದಕ್ಕಿಂತ ಹೆಚ್ಚಾಗಿದೆ. ಈ ಹೊಸ ಸಂಸತ್ತು ವಿಪಕ್ಷಗಳಿಗೆ ಸೇರಿಲ್ಲವೇ? ಇದು ಸಂಯುಕ್ತ ವ್ಯವಸ್ಥೆಯ ಹತ್ಯೆಯಾಗಿದೆ’ ಎಂದು ಟಿಎಂಸಿ ನಾಯಕ ಜವಾಹರ್ ಸಿರ್ಕಾರ್ ಕಿಡಿಕಾರಿದ್ದಾರೆ.
ಇದೇ ವೇಳೆ ‘ಸಂವಿಧಾನವು ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗವನ್ನು ಪ್ರತ್ಯೇಕಿಸಿದೆ. ಲೋಕಸಭೆ ಸರ್ಕಾರದ ಅಧೀನವಾಗಿಲ್ಲ. ಸ್ಪೀಕರ್ ಲೋಕಸಭೆಯನ್ನು ಪ್ರತಿನಿಧಿಸುತ್ತಾರೆ. ಹೀಗಿರುವಾಗ ಸರ್ಕಾರದ ಮುಖ್ಯಸ್ಥನಾಗಿರುವ ಪ್ರಧಾನಮಂತ್ರಿ ಸಂಸತ್ ಕಟ್ಟಡದ ಮೇಲೆ ರಾಷ್ಟ್ರ ಲಾಂಛನವನ್ನು ಉದ್ಘಾಟಿಸಿ ಸಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಸಿಪಿಐ(ಎಂ) ಕೂಡಾ ಇದು ಸಂವಿಧಾನದ ಸ್ಪಷ್ಟಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ‘ಸಂವಿಧಾನ ಅಧಿಕಾರಗಳನ್ನು 3 ಅಂಗಗಳಲ್ಲಿ ಹಂಚಿಕೆ ಮಾಡಿದ್ದನ್ನು ಕಾರ್ಯಾಂಗದ ಮುಖ್ಯಸ್ಥರು ಬುಡಮೇಲು ಮಾಡಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಅಲ್ಲದೇ ರಾಷ್ಟ್ರೀಯ ಲಾಂಛನ ಉದ್ಘಾಟನೆ ವೇಳೆ ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮಗಳನ್ನು ಕೂಡಾ ಪ್ರಶ್ನಿಸಿದ್ದಾರೆ.