Asianet Suvarna News Asianet Suvarna News

Assam Mizoram Border Dispute ಇತ್ಯರ್ಥ : ಅಮಿತ್‌ ಶಾ ಸಂಧಾನ ಯಶಸ್ವಿ!

*ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿಯಲ್ಲಿನ ವ್ಯತ್ಯಾಸ
*ತಾರಕಕ್ಕೇರಿದ್ದ ಉಭಯ ರಾಜ್ಯಗಳ ಗಡಿ ವಿವಾದ 
*ಪರಸ್ಪರ ರಾಜ್ಯದ ಅಧಿಕಾರಿಗಳ ಮೇಲೆ ಕೇಸು ದಾಖಲು
*ಬಿಕ್ಕಟ್ಟು ಇತ್ಯರ್ಥಕ್ಕೆ ಸಚಿವ ಅಮಿತ್‌ ಸಂಧಾನ ಯಶಸ್ವಿ!

After meeting Amit Shah Assam Mizoram to form panels to solve border row mnj
Author
Bengaluru, First Published Nov 27, 2021, 12:14 PM IST

ನವದೆಹಲಿ(ನ.27): ಅಸ್ಸಾಂ (Assam) ಮತ್ತು ಮಿಜೋರಂ (Mizoram) ನಡುವಿನ ಶತಮಾನಗಳ ಹಳೆಯ ಗಡಿ ಬಿಕ್ಕಟ್ಟು ಇತ್ಯರ್ಥಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shash) ನಡೆಸಿದ ಎರಡು ದಿನಗಳ ಸಂಧಾನ ಸಭೆ ಯಶಸ್ವಿಯಾಗಿದೆ. ಮಾತುಕತೆ ಅನ್ವಯ ಉಭಯ ರಾಜ್ಯಗಳು ತಮ್ಮ ಗಡಿಯಲ್ಲಿ (Border) ಶಾಂತಿ, ಸಾಮರಸ್ಯ ಕಾಪಾಡಿಕೊಂಡು, ಮಾತುಕತೆ ಮತ್ತು ಸಂಧಾನ ಮೂಲಕವೇ ವಿವಾದ ಇತ್ಯರ್ಥಕ್ಕೆ ನಿರ್ಧರಿಸಿವೆ. ಉಭಯ ರಾಜ್ಯಗಳ ಗಡಿ ವಿವಾದ ಕಳೆದ ಜುಲೈನಲ್ಲಿ ತಾರಕ್ಕೇರಿತ್ತು. ಈ ವೇಳೆ ಮಿಜೋರಂ ಪೊಲೀಸರು ಹಾರಿಸಿದ ಗುಂಡಿಗೆ ಅಸ್ಸಾಂನ 5 ಪೊಲೀಸರು ಮತ್ತು ಓರ್ವ ನಾಗರಿಕ ಸಾವನ್ನಪ್ಪಿದ್ದ. ಬಳಿಕ ಉಭಯ ರಾಜ್ಯಗಳು ಪರಸ್ಪರ ರಾಜ್ಯದ ಅಧಿಕಾರಿಗಳ ಮೇಲೆ ಕೇಸು ದಾಖಲಿಸಿದ್ದರು. 

ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್‌ ಶಾ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himant Biswa Sharma) ಮತ್ತು ಮಿಜೋರಂ ಮುಖ್ಯಮಂತ್ರಿ ಝೋರಂಥಂಗಾ (Zoramthanga) ಅವರನ್ನು ದೆಹಲಿಗೆ ಕರೆಸಿ, ಸತತ 2 ದಿನಗಳ ಕಾಲ ಮುಖಾಮುಖಿ ಸಭೆ ನಡೆಸಿದ್ದರು. ಆ ಸಭೆ ಫಲಕೊಟ್ಟಿದ್ದು, ಉಭಯ ರಾಜ್ಯಗಳ ನಡುವಿನ 164 ಕಿ.ಮೀ ಉದ್ದದ ಗಡಿ ಪೈಕಿ ವಿವಾದಿತ ಪ್ರದೇಶವನ್ನು ಇತ್ಯರ್ಥಪಡಿಸಿಕೊಳ್ಳಲು ಅಧಿಕಾರಿಗಳ ಮಟ್ಟದ ಸಮಿತಿಗೆ ರಚಿಸಲು ನಿರ್ಧರಿಸಲಾಗಿದೆ. ಜೊತೆಗೆ ಕಾಲಕಾಲಕ್ಕೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕೂಡಾ ಸಭೆ ನೀಡಿ ವಿವಾದವನ್ನು ಅಂತ್ಯಗಾಣಿಸಲು ನಿರ್ಧರಿಸಿದ್ದಾರೆ.

ಕಾಲಕಾಲಕ್ಕೆ ಮುಖ್ಯಮಂತ್ರಿ ಮಟ್ಟದಲ್ಲಿಯೂ ಚರ್ಚೆ!

"ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಮತ್ತು ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇವೆ. ಸಭೆಯಲ್ಲಿ ಎಲ್ಲವನ್ನೂ ಚರ್ಚಿಸಲಾಗಿದೆ. ಅಸ್ಸಾಂ-ಮಿಜೋರಾಂ ಗಡಿಯಲ್ಲಿ ನಾವು ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಎರಡೂ ರಾಜ್ಯ ಸರ್ಕಾರಗಳು ನಿರ್ಧರಿಸಿವೆ. ನಾವು ಇದನ್ನು ಅತ್ಯಂತ ಸೂಕ್ಷ್ಮವಾಗಿ ಎದುರಿಸುತ್ತೇವೆ" ಎಂದು ಬಿಸ್ವ ಶರ್ಮಾ ಹೇಳಿದ್ದಾರೆ.
"ಎರಡೂ ಸರ್ಕಾರಗಳು ರಾಜಕೀಯ ಮಟ್ಟದಲ್ಲಿ ಎರಡು ತಂಡಗಳನ್ನು ರಚಿಸುತ್ತವೆ ಮತ್ತು ಶಾಶ್ವತ ಪರಿಹಾರಕ್ಕಾಗಿ ಎರಡೂ ತಂಡಗಳು ಮಾತುಕತೆ ಪ್ರಾರಂಭಿಸುತ್ತವೆ. ಈ ಬಗ್ಗೆ ಕಾಲಕಾಲಕ್ಕೆ ಮುಖ್ಯಮಂತ್ರಿ ಮಟ್ಟದಲ್ಲಿಯೂ ಚರ್ಚಿಸಲಾಗುವುದು. ಈ ಬಗ್ಗೆ ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ ನಿರ್ಧರಿಸಲಾಯಿತು," ಎಂದು ಬಿಸ್ವಾ ಶರ್ಮಾ ತಿಳಿಸಿದ್ದಾರೆ.

 

 

ಕನಿಷ್ಠ ಐದು ಕಡೆಗಳಲ್ಲಿ ಎರಡು ರಾಜ್ಯಗಳ ನಡುವೆ ಗಡಿ ವಿವಾದ!

ಕಳೆದ ಕೆಲವು ತಿಂಗಳುಗಳಲ್ಲಿ ಅಸ್ಸಾಂ (Assam) ಮತ್ತು ಮಿಜೋರಾಂ (Mizoram) ನಡುವಿನ ಗಡಿಯಲ್ಲಿನ ವ್ಯತ್ಯಾಸಗಳು ಉದ್ವಿಗ್ನತೆಗೆ ಕಾರಣವಾಗಿವೆ. ಅಸ್ಸಾಂನ ಬರಾಕ್ ಕಣಿವೆ ಪ್ರದೇಶದ ಮೂರು ಜಿಲ್ಲೆಗಳು ಹೈಲಕಂಡಿ (Hailakandi), ಕರೀಮ್‌ಗಂಜ್ (Karimganj) ಮತ್ತು ಕ್ಯಾಚಾರ್ (Cachar) ಮಿಜೋರಾಂನೊಂದಿಗೆ 165 ಕಿಮೀ ಗಡಿಯನ್ನು ಹಂಚಿಕೊಳ್ಳುತ್ತವೆ. ಕನಿಷ್ಠ ಐದು ಕಡೆಗಳಲ್ಲಿ ಎರಡು ರಾಜ್ಯಗಳ ನಡುವೆ ಗಡಿ ವಿವಾದಗಳಿವೆ. ಜುಲೈ 26 ರಂದು ನಡೆದ ಗಡಿಯಲ್ಲಿನ ಇತ್ತೀಚಿನ ಕಲಹದಲ್ಲಿ  5 ಪೊಲೀಸರು ಮತ್ತು ಓರ್ವ ನಾಗರಿಕ ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮಿಜೋರಾಂ ಭಾಗದ ಜನರು ಕಲ್ಲು ಎಸೆದು ದಾಳಿ ನಡೆಸಿದ್ದಾರೆ ಎಂದು ಅಸ್ಸಾಂ ಪೊಲೀಸರು ಆರೋಪಿಸಿದ್ದರು. ಮತ್ತೊಂದೆಡೆ, ಮಿಜೋರಾಂ ಸರ್ಕಾರವು ಅಸ್ಸಾಂ ಪೊಲೀಸ್ ಅಧಿಕಾರಿಗಳು ಕೇಂದ್ರೀಯ ಮೀಸಲು ಪೊಲೀಸ್ ಪಡೆ ನಿರ್ವಹಿಸುತ್ತಿದ್ದ ಪೋಸ್ಟ್ ಅನ್ನು "ಬಲವಂತವಾಗಿ ದಾಟಿದ" ನಂತರ ರಾಜ್ಯ ಪೊಲೀಸರು ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿತ್ತು. ಕೇಂದ್ರ ಮಧ್ಯ ಪ್ರವೇಶಿಸಿದ ನಂತರವೇ ಉಭಯ ರಾಜ್ಯಗಳ ನಡುವಿನ ಉದ್ವಿಗ್ನತೆ ತಗ್ಗಿದೆ. 

Follow Us:
Download App:
  • android
  • ios