ಮೋದಿಜೀ ನೀವು ನನ್ನ ಮಾತನ್ನು ಕೇಳಿ, ನಮ್ಮ ಶಾಲೆಗೆ ಉತ್ತಮ ಸೌಲಭ್ಯ ನೀಡಿ ಎಂದು 3ನೇ ತರಗತಿ ವಿದ್ಯಾರ್ಥಿನಿ ಕೇಳಿಕೊಂಡಿದ್ದಳು. ಈ ವಿಡಿಯೋ ವೈರಲ್‌ ಆಗಿದ್ದು, ಈ ಶಾಲೆಗೆ ಹೊಸ ರೂಪ ನೀಡಲು ಸರ್ಕಾರ ಮುಂದಾಗಿದೆ. 

ಕಥುವಾ, ಜಮ್ಮು ಮತ್ತು ಕಾಶ್ಮೀರ: (ಏಪ್ರಿಲ್ 20, 2023): ಜಮ್ಮು ಕಾಶ್ಮೀರದ ಸರ್ಕಾರಿ ಶಾಲೆ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ಪುಟ್ಟ ಬಾಲಕಿಯ ವಿಡಿಯೋ ವೈರಲ್‌ ಬೆನ್ನಲ್ಲೇ ಆಕೆಯ ಶಾಲೆಯಲ್ಲಿ ಭಾರಿ ಬದಲಾವಣೆ ಕಾಣುತ್ತಿದೆಯಂತೆ. ಯಾಕಪ್ಪಾ ಅಂತೀರಾ? 

Add Asianetnews Kannada as a Preferred SourcegooglePreferred

ಈ ಪುಟ್ಟ ಬಾಲಕಿ ಮೋದಿಜೀ ನೀವು ನನ್ನ ಮಾತನ್ನು ಕೇಳಿ, ನಮ್ಮ ಶಾಲೆಗೆ ಉತ್ತಮ ಸೌಲಭ್ಯ ನೀಡಿ ಎಂದು ಕೇಳಿಕೊಂಡಿದ್ದಳು. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ತನ್ನ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಖಾತ್ರಿಪಡಿಸುವಂತೆ 3 ನೇ ತರಗತಿಯ ವಿದ್ಯಾರ್ಥಿನಿ ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದಳು. ಈ ವಿಡಿಯೋ ವೈರಲ್‌ ಆದ ಕೆಲ ದಿನಗಳಲ್ಲೇ ಜಮ್ಮು ಮತ್ತು ಕಾಶ್ಮೀರ ಆಡಳಿತವು ಆ ಶಾಲೆಯ ಸ್ಥಿತಿಯನ್ನು ಬದಲಾಯಿಸುವ ಕೆಲಸವನ್ನು ಪ್ರಾರಂಭಿಸಿದೆ.

ಇದನ್ನು ಓದಿ: ಮೊಟ್ಟೆ ಕಳ್ಳಿಯರ ಮೇಲೆ ನವಿಲಿನ ರೋಷಾವೇಷ: ಈ ಜನ್ಮದಲ್ಲಿ ಅವ್ರು ಮೊಟ್ಟೆ ತಿನ್ನಲ್ಲ!

Scroll to load tweet…

ಕಳೆದ ವಾರ ಪ್ರಧಾನಿಗೆ ಸೀರತ್ ನಾಜ್ ಎಂಬ ವಿದ್ಯಾರ್ಥಿನಿ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿಕೊಂಡಿದ್ದು, ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ. ಈ ಹಿನ್ನೆಲೆ ಜಮ್ಮುವಿನ ಶಾಲಾ ಶಿಕ್ಷಣ ನಿರ್ದೇಶಕ ರವಿಶಂಕರ್ ಶರ್ಮಾ ಅವರು ಲೋಹೈ-ಮಲ್ಹಾರ್ ಬ್ಲಾಕ್‌ನಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದು, ಇದಕ್ಕೆ ಹೊಸ ರೂಪ ಕೊಡಲು ಆದೇಶ ನೀಡಿದ್ದಾರೆ.

ಹಲೋ, ಮೋದಿಜಿ. ಹೇಗಿದ್ದೀರಿ? ನೀವು ಎಲ್ಲರ ಮಾತನ್ನು ಕೇಳುತ್ತೀರಿ, ದಯವಿಟ್ಟು ನನ್ನ ಮಾತನ್ನೂ ಕೇಳಿ)" ಎಂದು ಸೀರತ್‌ ನಾಜ್ ತನ್ನ ನಾಲ್ಕು ನಿಮಿಷಗಳಿಗೂ ಹೆಚ್ಚು ಸಮಯದ ವಿಡಿಯೋದಲ್ಲಿ ಮನವಿ ಮಾಡಿದ್ದಳು. ಶಾಲೆಯ ಶಿಥಿಲಾವಸ್ಥೆಯ ಬಗ್ಗೆ ಮಾತನಾಡಿದ್ದ ಬಾಲಕಿ, ವಿದ್ಯಾರ್ಥಿಗಳಿಗೆ ಕೊಳಕು ಮಹಡಿಗಳಲ್ಲಿ ಕುಳಿತುಕೊಳ್ಳಲು ಒತ್ತಾಯಿಸಲಾಗುತ್ತದೆ. ಇದರಿಂದ ನಮ್ಮ ಯೂನಿಫಾರ್ಮ್‌ ಕಲೆ ಆಗುತ್ತದೆ ಎಂದು ಹೇಳಿದ್ದರು. ಹಾಗೆ, ಶೌಚಾಲಯಗಳ ದುರವಸ್ಥೆ, ಬಯಲು ಶೌಚ ಸಮಸ್ಯೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ಅಪೂರ್ಣವಾಗಿರುವ ಬಗ್ಗೆಯೂ ಗಮನ ಸೆಳೆದಿದ್ದರು. 

ಇದನ್ನೂ ಓದಿ: ಕಸದ ವಿಚಾರಕ್ಕೆ ಜಗಳ: ಪಿಸ್ತೂಲು ಹಿಡಿದು ಬೆದರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ಉದ್ಯಮಿ!

"ನೀವು ಇಡೀ ದೇಶದ ಮಾತನ್ನು ಕೇಳುತ್ತೀರಿ. ದಯವಿಟ್ಟು ನನ್ನ ಮಾತನ್ನು ಆಲಿಸಿ ಮತ್ತು ನಮಗಾಗಿ ಉತ್ತಮ ಶಾಲೆಯನ್ನು ನಿರ್ಮಿಸಿ. ಇದರಿಂದ ನಾವು ನಮ್ಮ ಶಿಕ್ಷಣವನ್ನು ಮುಂದುವರಿಸಬಹುದು ಮತ್ತು ನಮ್ಮ ಸಮವಸ್ತ್ರವನ್ನು ಕೊಳಕು ಮಾಡಿಕೊಂಡಿದ್ದಕ್ಕಾಗಿ ನಮ್ಮ ತಾಯಂದಿರು ನಮ್ಮನ್ನು ಬೈಯುವುದಿಲ್ಲ" ಎಂದು ಹುಡುಗಿ ಪ್ರಧಾನ ಮಂತ್ರಿಗೆ 
ಭಾವೋದ್ರಿಕ್ತವಾಗಿ ಮನವಿ ಮಾಡಿದ್ದರು. ಈ ವೀಡಿಯೋ ಕ್ಲಿಪ್ ಅನ್ನು ಗಮನಿಸಿದ ಜಮ್ಮು ಮತ್ತು ಕಾಶ್ಮೀರ ಆಡಳಿತವು ತಕ್ಷಣವೇ ಶಾಲೆಗೆ ಹೊಸ ರೂಪ ನೀಡಲು ಕ್ರಮ ಕೈಗೊಂಡಿತು.

‘ಶಾಲೆಯನ್ನು ಆಧುನಿಕ ರೀತಿಯಲ್ಲಿ ಮೇಲ್ದರ್ಜೆಗೇರಿಸಲು ₹ 91 ಲಕ್ಷ ಮೊತ್ತದ ಯೋಜನೆ ಮಂಜೂರಾಗಿದ್ದು, ಆಡಳಿತಾತ್ಮಕ ಮಂಜೂರಾತಿಗೆ ಸಂಬಂಧಿಸಿದ ಕೆಲ ಸಮಸ್ಯೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈಗ ಅದನ್ನು ಇತ್ಯರ್ಥ ಪಡಿಸಲಾಗಿದ್ದು, ಕಾಮಗಾರಿ ನಡೆಯುತ್ತಿದೆ’ ಎಂದು ಶಾಲೆಗೆ ಭೇಟಿ ನೀಡಿದ ಬಳಿಕ ರವಿಶಂಕರ್ ಶರ್ಮಾ ತಿಳಿಸಿದರು.

ಇದನ್ನೂ ಓದಿ: ತುಟಿಗೆ ಚುಂಬನ, ನಾಲಿಗೆ ನೆಕ್ಕೆಂದು ಮಗುವಿಗೆ ಹೇಳಿದ ದಲೈ ಲಾಮಾ: ವಿವಾದ

ಅಲ್ಲದೆ, ಕೇಂದ್ರಾಡಳಿತ ಪ್ರದೇಶದ ಕುಗ್ರಾಮಗಳಲ್ಲಿರೋ ನೂರಾರು ಶಾಲೆಗಳು ನಡೆಯುತ್ತಿವೆ ಮತ್ತು ಈ ಎಲ್ಲಾ ಶಾಲೆಗಳಲ್ಲಿ ಸರಿಯಾದ ಮತ್ತು ಆಧುನಿಕ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಈಗಾಗಲೇ ವಿವರವಾದ ಯೋಜನೆಯನ್ನು ರೂಪಿಸಿದೆ ಎಂದೂ ಸರ್ಕಾರಿ ಅಧಿಕಾರಿ ಹೇಳಿದರು. ಇನ್ನು, ಐಎಎಸ್‌ ಅಧಿಕಾರಿಯಾಗೋ ಇಚ್ಛೆ ಹೊಂದಿರೋ ಪುಟ್ಟ ಬಾಲಕಿ ತನ್ನ ವಿಡಿಯೋ ಸಂದೇಶಕ್ಕೆ ನಮ್ಮ ಶಾಲೆಯು ಹೊಸ ರೂಪ ಪಡೆಯುತ್ತಿದೆ ಎಂದು ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾಳೆ.

ಗ್ರಾಮಸ್ಥರು ಕೂಡ ಶಾಲೆಯ ನವೀಕರಣದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ನಗರ ಪ್ರದೇಶದ ಶಾಲೆಗಳಂತೆ ಆಧುನಿಕ ಮಾದರಿಯಲ್ಲಿ ಅಭಿವೃದ್ಧಿ ಹೊಂದುವ ಭರವಸೆ ವ್ಯಕ್ತಪಡಿದ್ದಾರೆ..