ಸೂಪರ್ಸ್ಟಾರ್ ರಜನೀಕಾಂತ್ ಕನಸು ಭಗ್ನ? ಕಾಡಿದೆ ತೀವ್ರ ಅನಾರೋಗ್ಯ
ರಾಜಕೀಯದಲ್ಲಿ ಸಾಧಿಸ ಹೊರಟಿದ್ದ ರಜನಿಕಾಂತ್ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಈ ಮೂಲಕ ಅವರ ಕನಸು ಭಗ್ನವಾಗಿದೆ.
ಚೆನ್ನೈ (ಅ.30): ಅಪಾರ ಅಭಿಮಾನಿ ವರ್ಗವನ್ನು ಹೊಂದಿರುವ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನೀಕಾಂತ್ ಅವರು ಸಕ್ರಿಯ ರಾಜಕಾರಣದ ಕನಸು ಭಗ್ನವಾಗುವ ಸಾಧ್ಯತೆಗಳು ಕಾಣಿಸಿಕೊಂಡಿವೆ. ಕಾರಣ, ಮೂತ್ರಪಿಂಡ ಕಸಿ ಆಗಿರುವುದರಿಂದ ಹಾಗೂ ಕೊರೋನಾ ವೈರಸ್ ಅಬ್ಬರ ಇರುವುದರಿಂದ ರಾಜಕೀಯಕ್ಕೆ ಪ್ರವೇಶಿಸುವುದು ಬೇಡ ಎಂದು ವೈದ್ಯರು ತಮಗೆ ಸಲಹೆ ಮಾಡಿದ್ದಾರೆ ಎಂದು ಸ್ವತಃ ರಜನೀಕಾಂತ್ ಅವರೇ ಘೋಷಿಸಿಕೊಂಡಿದ್ದಾರೆ.
ಆದಾಗ್ಯೂ, ರಾಜಕೀಯ ಪ್ರವೇಶದ ಸಲುವಾಗಿ ಮೂರು ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದ ರಜಿನಿ ಮಕ್ಕಳ್ ಮಂದ್ರಮ್ ಸಂಘಟನೆಯ ಪದಾಧಿಕಾರಿಗಳ ಜತೆ ಚರ್ಚಿಸಿ ರಾಜಕೀಯ ಪ್ರವೇಶಿಸಬೇಕೆ ಅಥವಾ ಬೇಡವೆ ಎಂಬ ನಿಲುವು ತಿಳಿಸುವುದಾಗಿ ಹೇಳಿದ್ದಾರೆ. ಈ ಬೆಳವಣಿಗೆಯೊಂದಿಗೆ, ಇನ್ನು 7 ತಿಂಗಳಲ್ಲಿ ನಡೆಯಲಿರುವ 2021ರ ತಮಿಳುನಾಡು ವಿಧಾನಸಭೆ ಚುನಾವಣೆ ಅಖಾಡಕ್ಕೆ ಹೊಸ ರಾಜಕೀಯ ಪಕ್ಷದೊಂದಿಗೆ ರಜನೀಕಾಂತ್ ಇಳಿಯುವುದು ಬಹುತೇಕ ಮರೀಚಿಕೆಯಾದಂತಾಗಿದೆ.
ರಜನಿಕಾಂತ್ರ 4 ಸಿನಿಮಾ ರಿಜೆಕ್ಟ್ ಮಾಡಿದ ಐಶ್ವರ್ಯಾ ರೈ! ...
ರಜನೀಕಾಂತ್ ಅವರು ರಾಜಕೀಯ ಪ್ರವೇಶ ಕುರಿತು ಇದೀಗ ಸ್ಪಷ್ಟನೆ ನೀಡಲು ಬಹುಮುಖ್ಯ ಕಾರಣ- ಜಾಲತಾಣಗಳಲ್ಲಿ ಓಡಾಡುತ್ತಿರುವ ಒಂದು ಪತ್ರ. ರಜನೀಕಾಂತ್ ಅವರು ತಮ್ಮ ಆಪ್ತೇಷ್ಟರಿಗೆ ಪತ್ರ ಬರೆದಿದ್ದಾರೆ. ಕಿಡ್ನಿ ಸಮಸ್ಯೆ ಇದೆ, ಕೊರೋನಾ ವ್ಯಾಪಿಸುತ್ತಿದೆ. ಹೀಗಾಗಿ ರಾಜಕೀಯ ಪ್ರವೇಶಿಸಬೇಡಿ ಎಂದು ವೈದ್ಯರು ನೀಡಿರುವ ಸಲಹೆಯನ್ನು ಗಮನಕ್ಕೆ ತಂದಿದ್ದಾರೆ ಎಂಬ ಪತ್ರ ವೈರಲ್ ಆಗಿತ್ತು.
ಆ ಪತ್ರಕ್ಕೆ ತಮ್ಮ ಅಧಿಕೃತ ಟ್ವೀಟರ್ ಖಾತೆ ಮೂಲಕ ಸ್ಪಷ್ಟನೆ ನೀಡಿರುವ ನಟ, ಆ ಪತ್ರ ಹಾಗೂ ಅದರಲ್ಲಿನ ಹೇಳಿಕೆ ನನ್ನದಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅದರಲ್ಲಿ ನನ್ನ ಆರೋಗ್ಯ ಸ್ಥಿತಿ ಹಾಗೂ ವೈದ್ಯರ ಸಲಹೆ ಕುರಿತಂತೆ ಇರುವ ಮಾಹಿತಿ ಸಂಂಪೂರ್ಣ ಸತ್ಯವಾಗಿದೆ ಎಂದು ಹೇಳಿದ್ದಾರೆ.
2011ರಲ್ಲಿ ರಜನೀಕಾಂತ್ ಅವರು ಸಿಂಗಾಪುರ ಆಸ್ಪತ್ರೆಯಲ್ಲಿ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. 2016ರ ಮೇನಲ್ಲಿ ಅಮೆರಿಕದ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು ಎಂದು ಆ ಪತ್ರದಲ್ಲಿ ಬರೆಯಲಾಗಿತ್ತು.
ತಮಿಳುನಾಡಿನ ರಾಜಕೀಯದಲ್ಲಿ ಹೊಸ ಬದಲಾವಣೆ ತರಲು ರಜನೀಕಾಂತ್ ಅವರು ಸಕ್ರಿಯ ರಾಜಕಾರಣಕ್ಕೆ ಧುಮುಕಲಿದ್ದಾರೆ ಎಂಬ ವರದಿಗಳು ನಾಲ್ಕೈದು ವರ್ಷಗಳಿಂದ ಹೆಚ್ಚಾಗಿ ಬರುತ್ತಿದ್ದವು. ಇದಕ್ಕೆ ಪೂರಕವಾಗಿ ರಾಜಕೀಯ ಪ್ರವೇಶ ಕುರಿತಂತೆ ತಮ್ಮ ಇಂಗಿತವನ್ನು ರಜನೀಕಾಂತ್ ಕೂಡ ತೋಡಿಕೊಂಡಿದ್ದರು. ಇದಕ್ಕಾಗಿ ರಜಿನಿ ಮಕ್ಕಳ್ ಮಂದ್ರಮ್ ಎಂಬ ಸಂಘಟನೆಯನ್ನೂ ಸ್ಥಾಪಿಸಿದ್ದರು. ಅವರು ಶೀಘ್ರದಲ್ಲೇ ಹೊಸ ರಾಜಕೀಯ ಪಕ್ಷ ಘೋಷಿಸಬಹುದು, 2021ರ ಚುನಾವಣಾ ಅಖಾಡಕ್ಕೆ ಇಳಿಯಬಹುದು ಎಂದು ಹೇಳಲಾಗಿತ್ತು.