‘ದ್ವೇಷ ಭಾಷಣ ಮಾಡುವವರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಸರಿ, ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಯಾರಾದರೂ ದೂರು ನೀಡಲಿ ಎಂದು ಕಾಯುವಂತಿಲ್ಲ’ ಎಂದೂ ಸುಪ್ರೀಂಕೋರ್ಟ್ನ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠ ತಾಕೀತು ಮಾಡಿದೆ.
ನವದೆಹಲಿ (ಏಪ್ರಿಲ್ 29, 2023): ತಕ್ಷಣದಿಂದಲೇ ಜಾರಿಗೆ ಬರುವಂತೆ ದ್ವೇಷ ಭಾಷಣಗಳ ವಿರುದ್ಧ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಕೇಸು ದಾಖಲಿಸದಿದ್ದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂಬ ಖಡಕ್ ಎಚ್ಚರಿಕೆಯನ್ನೂ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಿತ ಹೇಳಿಕೆ ನೀಡಿದ ಸಮಯದಲ್ಲೇ ಈ ಆದೇಶ ಹೊರಬಿದ್ದಿರುವುದು ಮಹತ್ವ ಪಡೆದಿದೆ. ಅಲ್ಲದೆ ಕರ್ನಾಟಕದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ದ್ವೇಷ ಭಾಷಣ ಮಾಡುವ ಎಲ್ಲ ರಾಜಕಾರಣಿಗಳಿಗೂ ಈ ಆದೇಶದಿಂದ ಬಿಸಿ ಮುಟ್ಟುವ ಸಾಧ್ಯತೆಯಿದೆ.
ಇದನ್ನು ಓದಿ: ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಷ್ಟು ವೇತನಕ್ಕೆ ಅರ್ಹರಲ್ಲ: ಸುಪ್ರೀಂಕೋರ್ಟ್
ಧರ್ಮ ನೋಡಬೇಡಿ, ಕೇಸ್ ಹಾಕಿ:
ಕಳೆದ ವರ್ಷದ ಅಕ್ಟೋಬರ್ನಲ್ಲಿ ದೆಹಲಿ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಆ ರಾಜ್ಯ ಸರ್ಕಾರಗಳಿಗೆ ನಿಮ್ಮ ವ್ಯಾಪ್ತಿಯಲ್ಲಿ ದ್ವೇಷ ಭಾಷಣಗಳ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಬೇಕು ಎಂದ ಆದೇಶ ನೀಡಿತ್ತು. ಅದೇ ಆದೇಶವನ್ನು ಶುಕ್ರವಾರ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ವಿಸ್ತರಿಸಿದೆ.
‘ದ್ವೇಷ ಭಾಷಣ ಮಾಡುವವರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಸರಿ, ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಯಾರಾದರೂ ದೂರು ನೀಡಲಿ ಎಂದು ಕಾಯುವಂತಿಲ್ಲ’ ಎಂದೂ ಸುಪ್ರೀಂಕೋರ್ಟ್ನ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠ ತಾಕೀತು ಮಾಡಿದೆ.
ಇದನ್ನೂ ಓದಿ: ಅರಣ್ಯ ಸುತ್ತ ಸಣ್ಣ ಕಟ್ಟಡ ನಿರ್ಮಾಣಕ್ಕೆ ಸುಪ್ರೀಂ ಅಸ್ತು: 1 ಕಿ.ಮೀ. ಬಫರ್ ವಲಯ ಆದೇಶದಲ್ಲಿ ಮಾರ್ಪಾಡು
ಭಾರತದ ಜಾತ್ಯತೀತತೆ ರಕ್ಷಿಸಲು ಇದು ಅಗತ್ಯ:
ದ್ವೇಷ ಭಾಷಣಗಳು ಅತ್ಯಂತ ಅಪಾಯಕಾರಿ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ಹೇಳಲಾದ ದೇಶದ ಜಾತ್ಯತೀತ ತತ್ವವನ್ನು ರಕ್ಷಿಸಲು ಇಂತಹ ಭಾಷಣಗಳ ವಿರುದ್ಧ ಧರ್ಮಾತೀತವಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ದೇಶದ ವಿವಿಧೆಡೆ ದ್ವೇಷ ಭಾಷಣಗಳು ಹೆಚ್ಚುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಆದೇಶ ಹೊರಡಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳ ವಿಚಾರಣೆಯ ವೇಳೆ ಶುಕ್ರವಾರ ಕೋರ್ಟ್ ಈ ಮೇಲಿನ ಆದೇಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಮೇ 12ಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ:ಸಲಿಂಗ ವಿವಾಹದ ವಿಚಾರಣೆ ಕೈಬಿಡಿ; ನಿರ್ಧಾರದ ಹೊಣೆಯನ್ನು ಸಂಸತ್ತಿಗೆ ಬಿಡಿ: ಬಾರ್ ಕೌನ್ಸಿಲ್ ಮನವಿ
ಇದಕ್ಕೂ ಮುನ್ನ ತನ್ನ ಸೂಚನೆಯ ಹೊರತಾಗಿಯೂ ದ್ವೇಷ ಭಾಷಣದ ವಿರುದ್ಧ ಪ್ರಕರಣ ದಾಖಲಿಸದ ಮಹಾರಾಷ್ಟ್ರ ಸರ್ಕಾರವನ್ನು ತೀವ್ರ ತರಾಟೆ ತೆಗೆದುಕೊಂಡ ನ್ಯಾಯಪೀಠ, ‘ನೀವು ನಮ್ಮ ಆದೇಶವನ್ನು ಹಗುರವಾಗಿ ಪರಿಗಣಿಸಬೇಡಿ’ ಎಂದು ನೇರವಾಗಿ ಎಚ್ಚರಿಕೆ ನೀಡಿತು.
ಯಾವ ಭಾಷಣದ ವಿರುದ್ಧ ಕೇಸ್?
ಭಾರತೀಯ ದಂಡಸಂಹಿತೆ 153ಎ, 153ಬಿ, 295ಎ ಹಾಗೂ 506 ಅಡಿ ಕ್ರಮಕ್ಕೆ ಅರ್ಹವಾದ ಯಾವುದೇ ದ್ವೇಷ ಭಾಷಣ ಹಾಗೂ ಕೃತ್ಯಗಳ ವಿರುದ್ಧ ರಾಜ್ಯ ಸರ್ಕಾರಗಳು ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ: ರಾಜಕೀಯ ಪಕ್ಷಗಳಿಗೆ ಶಾಕ್: ಮೀಸಲಾತಿ ಮಿತಿ ಶೇ. 50 ಮೀರಿಸಲು ಸುಪ್ರೀಂಕೋರ್ಟ್ ನಕಾರ
