ಹನುಮಾನ್ ಚಾಲೀಸಾ ಸಾರ್ವಜನಿಕ ಪಠಣಕ್ಕೆ ಲೌಡ್ಸ್ಪೀಕರ್ ಎಬಿವಿಪಿಯಿಂದ ಆಲಿಗಢ ಜಿಲ್ಲಾಡಳಿತಕ್ಕೆ ಅರ್ಜಿ 21 ರಸ್ತೆಗಳಲ್ಲಿ ಧ್ವನಿವರ್ಧಕ ಅಳವಡಿಕೆಗೆ ಅನುಮತಿ ಕೋರಿ ಅರ್ಜಿ
ಆಲಿಗಢ: ಉತ್ತರಪ್ರದೇಶದ ಆಲಿಗಢ ಜಿಲ್ಲೆಯಲ್ಲಿ ಸಾರ್ವಜನಿಕ ಹನುಮಾನ್ ಚಾಲೀಸಾ (Hanuman Chalisa) ಪಠಣಕ್ಕಾಗಿ ಪ್ರಮುಖ 21 ರಸ್ತೆಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲು ಅನುಮತಿ ನೀಡಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದೆ. ಮಸೀದಿಗಳಲ್ಲಿ ಮೈಕ್ಗಳ ಮೂಲಕ ಆಜಾನ್ ಮೊಳಗಿಸುವುದಕ್ಕೆ ಪ್ರತಿಯಾಗಿ ಎಬಿವಿಪಿ ಈ ನಿರ್ಧಾರ ಕೈಗೊಂಡಿದೆ. ಎಬಿವಿಪಿ ರಾಜ್ಯ ಕಾರ್ಯದರ್ಶಿ ಬಲ್ದೇವ್ ಚೌಧರಿ (Baladev Choudhari) ಈ ಕುರಿತು ಪ್ರತಿಕ್ರಿಯಿಸಿ, ಸಾರ್ವಜನಿಕ ಹನುಮಾನ್ ಚಾಲಿಸ ಪಠಣಕ್ಕಾಗಿ ಧ್ವನಿ ವರ್ಧಕ ಅಳವಡಿಸುವ ಕುರಿತು ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಪೂರಕವಾದ ಸಮ್ಮತಿ ದೊರೆಯದಿದ್ದಲ್ಲಿ ನಾವು ಮುಂದಿನ ಕಾರ್ಯದ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
ರಂಜಾನ್ ತಿಂಗಳು ಆರಂಭವಾಗುತ್ತಿದ್ದಂತೆ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಗಟ್ಟಿ ಧ್ವನಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿತ್ತು. ಕೆಲ ದಿನಗಲ ಹಿಂದೆ ಮಹಾರಾಷ್ಟ್ರ (Maharastra Navanirman Sene) ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಇದರ ವಿರುದ್ಧ ಧ್ವನಿ ಎತ್ತಿದ್ದರು. ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಹಾಕುವಂತೆ ಅವರು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರವನ್ನು ಒತ್ತಾಯಿಸಿದ್ದರು. ಮುಂಬೈನ ಮುಸ್ಲಿಂ ಕೊಳೆಗೇರಿಗಳ ಮದರಸಾಗಳಲ್ಲಿ ಪಾಕಿಸ್ತಾನಿ ಬೆಂಬಲಿಗರು ಇರುವ ಬಗ್ಗೆ ರಾಜ್ ಠಾಕ್ರೆ ಮಾತನಾಡಿದ್ದು, ಈ ಮದರಸಾಗಳ (Mosque) ಮೇಲೆ ದಾಳಿ ನಡೆಸುವಂತೆ ಠಾಕ್ರೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಮಸೀದಿ ಧ್ವನಿವರ್ಧಕ ತೆಗೆಸಿ ಎಂದಿದ್ದ ರಾಜ್ ಠಾಕ್ರೆಗೆ ಬಿಗ್ ಶಾಕ್, ಪಕ್ಷಕ್ಕೆ ಭಾರೀ ಹಿನ್ನಡೆ!
ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಡೆದ ಸಮಾವೇಶದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಏಕೆ ಜೋರಾಗಿ ನುಡಿಸಲಾಗುತ್ತದೆ? ಇದನ್ನು ನಿಲ್ಲಿಸದಿದ್ದರೆ ಮಸೀದಿಗಳ ಹೊರಗೆ ಧ್ವನಿವರ್ಧಕಗಳನ್ನು ಅಳವಡಿಸಿ ಜೋರಾಗಿ ಹನುಮಾನ್ ಚಾಲೀಸಾ ನುಡಿಸಲು ಪ್ರಾರಂಭಿಸುತ್ತೇವೆ ಎಂದು ಉದ್ಧವ್ ಠಾಕ್ರೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನಾನು ಪ್ರಾರ್ಥನೆ ಅಥವಾ ಯಾವುದೇ ನಿರ್ದಿಷ್ಟ ಧರ್ಮದ ವಿರೋಧಿಯಲ್ಲ. ನನ್ನ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಇದೇ ವೇಳೆ ತಮ್ಮ ಸೋದರ ಸಂಬಂಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವ್ಯಂಗ್ಯವಾಡಿದ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಚುನಾವಣಾ ಸಮಯದಲ್ಲಿ ತಮ್ಮನ್ನು ವಿರೋಧಿಸಿದ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡು ಸಿಎಂ ಸರ್ಕಾರ ರಚಿಸಿದ್ದಾರೆ. ಈ ಮೂಲಕ ಮತದಾರರಿಗೆ ದ್ರೋಹ ಬಗೆದಿದ್ದಾರೆ ಎಂದಿದ್ದಾರೆ.
'ಮಸೀದಿಗಳ ಧ್ವನಿವರ್ಧಕ ತೆಗೆಸಿ, ಇಲ್ಲದಿದ್ದರೆ ಮಸೀದಿ ಗೇಟ್ ಬಳಿ ಹನುಮಾನ್ ಚಾಲೀಸಾ ಪಠಿಸುತ್ತೇವೆ'
