ಅಬು ಸಲೇಂ ಪ್ರಸ್ತುತ ನಾಸಿಕ್ ಕೇಂದ್ರ ಕಾರಾಗೃಹದಲ್ಲಿದ್ದಾರೆ. ನವೆಂಬರ್‌ನಲ್ಲಿ ಅವರ ಅಣ್ಣನ ಮರಣದ ನಂತರ, ಉತ್ತರ ಪ್ರದೇಶದ ಅಜಂಗಢದಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಉಳಿದ ಆಚರಣೆಗಳನ್ನು ನಿರ್ವಹಿಸಲು ಸಲೇಂ ಪೆರೋಲ್ ಕೋರಿದ್ದರು. 

ಮುಂಬೈ (ಫೆ.3): 1993 ರ ಸರಣಿ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಗ್ಯಾಂಗ್‌ಸ್ಟರ್‌ ಅಬು ಸಲೇಂ ಒಬ್ಬ "ಅಂತರರಾಷ್ಟ್ರೀಯ ಅಪರಾಧಿ". ನವೆಂಬರ್‌ನಲ್ಲಿ, ಅಬು ಸಲೇಂನ ಹಿರಿಯ ಸಹೋದರ ಅಬು ಹಕೀಮ್ ಅನ್ಸಾರಿ ಸಾವಿನ ಬಗ್ಗೆ ಗೊತ್ತಾಗಿತ್ತು. ಅದಾದ ನಂತರ, ಅಬು ಸಲೇಂ ಜೈಲು ಅಧಿಕಾರಿಗಳಿಂದ 14 ದಿನಗಳ ಪೆರೋಲ್ ಕೋರಿದ್ದ. ಬೇಡಿಕೆ ತಿರಸ್ಕೃತವಾದ ನಂತರ, ಸಲೇಂ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ ಈಗ ಸಲೇಂ ಪೆರೋಲ್ ಮೇಲೆ ಬಿಡುಗಡೆಯಾದರೆ ಪಾವತಿಸಬೇಕಾದ ಭದ್ರತಾ ವೆಚ್ಚಗಳ ಸಮಸ್ಯೆ ಉದ್ಭವಿಸಿದೆ. ತನ್ನ ನಿಲುವಿನಲ್ಲಿ ದೃಢವಾಗಿ ನಿಂತಿರುವ ನ್ಯಾಯಾಲಯವು, ಎಲ್ಲಾ ಭದ್ರತಾ ವೆಚ್ಚಗಳನ್ನು ಸಲೇಂ ಭರಿಸಬೇಕಾಗುತ್ತದೆ ಎಂದು ಹೇಳಿದೆ.

14 ದಿನದ ಪೆರೋಲ್‌ ಕೇಳಿದ್ದ ಅಬು ಸಲೇಂ

ಗ್ಯಾಂಗ್‌ಸ್ಟರ್‌ ಅಬು ಸಲೇಂನನ್ನು ತುರ್ತು ಪೆರೋಲ್ ಮೇಲೆ ಬಿಡುಗಡೆ ಮಾಡಲು ಪೊಲೀಸ್ ಬೆಂಗಾವಲು ತಂಡಕ್ಕೆ 17.60 ಲಕ್ಷ ರೂ. ವೆಚ್ಚವಾಗಲಿದೆ ಎಂದು ಹೇಳಲಾಗಿತ್ತು. ಶುಲ್ಕ ಪಾವತಿಸದೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ಹದಿನಾಲ್ಕು ದಿನಗಳ ಪೆರೋಲ್‌ಗಾಗಿ ಇಬ್ಬರು ವ್ಯಕ್ತಿಗಳ ಪೊಲೀಸ್ ಬೆಂಗಾವಲು ತಂಡಕ್ಕೆ ರಾಜ್ಯ ಸರ್ಕಾರ 17.60 ಲಕ್ಷ ರೂ. ಶುಲ್ಕ ವಿಧಿಸುತ್ತದೆ. ಈ ಮೊತ್ತ ಅಸಮಂಜಸವಾಗಿದ್ದು, 1 ಲಕ್ಷ ರೂ. ಶುಲ್ಕ ಪಾವತಿಸಲು ಸಿದ್ಧರಿದ್ದೇವೆ ಎಂದು ಸಲೇಂ ಪರ ವಕೀಲರು ಹೇಳಿದ್ದಾರೆ. ಶುಲ್ಕದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಮತ್ತು ಶ್ಯಾಮ್ ಚಂದಕ್ ಅವರ ಪೀಠ ಸ್ಪಷ್ಟಪಡಿಸಿದೆ.

ಅಬು ಸಲೇಂ ಪೆರೋಲ್ ಬಯಸಿದರೆ, ಸಂಪೂರ್ಣ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಆದರೆ, ಅಬು ಸಲೇಂ ವಕೀಲರು 1 ಲಕ್ಷದ ವರೆಗೆ ಖರ್ಚು ಮಾಡಲು ನಾವು ಸಿದ್ದರಿದ್ದೇವೆ ಎಂದು ಕೋರ್ಟ್‌ಗೆ ಹೇಳಿದ್ದಾರ. ಕಳೆದ ಬಾರಿ ಪೆರೋಲ್ ನೀಡಿದಾಗ ಕೇವಲ ಹತ್ತರಿಂದ ಹನ್ನೆರಡು ಭದ್ರತಾ ಸಿಬ್ಬಂದಿ ಮಾತ್ರ ಇದ್ದರು ಎಂದು ಸಲೇಂ ವಕೀಲರು ಹೇಳಿದ್ದಾರೆ. ಈ ಬಗ್ಗೆ ನ್ಯಾಯಾಲಯವು, ಭದ್ರತೆಯ ವಿಷಯವನ್ನು ಪೊಲೀಸರು ನಿರ್ಧರಿಸುತ್ತಾರೆ, ನೀವಲ್ಲ ಎಂದು ಹೇಳಿದೆ. ನಾಸಿಕ್ ಪೊಲೀಸರು ನೀಡಿದ ಪತ್ರದಲ್ಲಿ, ಅಬು ಸಲೇಂ ಅವರ ನಾಲ್ಕು ದಿನಗಳ ಭದ್ರತೆಯ ಸಂಪೂರ್ಣ ವೆಚ್ಚ 17 ಲಕ್ಷ 76 ಸಾವಿರ. ಪೆರೋಲ್ ನಂತರ ಅಬು ಸಲೇಂ ತನ್ನ ಸ್ವಂತ ಗ್ರಾಮವಾದ ಅಜಮ್‌ಗಢಕ್ಕೆ ಹೋಗುತ್ತಾನೆ. ಆ ಪ್ರದೇಶವು ಸ್ವಲ್ಪ ಸೂಕ್ಷ್ಮವಾಗಿರುವುದರಿಂದ, ಪೊಲೀಸ್ ರಕ್ಷಣೆ ಬಹಳ ಅಗತ್ಯವೆಂದು ಪರಿಗಣಿಸಲಾಗಿದೆ.

ನಾಳೆ ಪ್ರಕರಣದ ವಿಚಾರಣೆ

ಅಬು ಸಲೇಂ ಪ್ರಸ್ತುತ ನಾಸಿಕ್ ಕೇಂದ್ರ ಜೈಲಿನಲ್ಲಿದ್ದಾನೆ. ನವೆಂಬರ್‌ನಲ್ಲಿ ಅವನ ಅಣ್ಣ ನಿಧನರಾದ ನಂತರ, ಉತ್ತರ ಪ್ರದೇಶದ ಅಜಮ್‌ಗಢದಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮತ್ತು ಉಳಿದ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಲು ಸಲೇಂ ಜೈಲು ಅಧಿಕಾರಿಗಳಿಂದ 14 ದಿನಗಳ ಪೆರೋಲ್ ಕೋರಿದ್ದ. ಈ ಮನವಿಯನ್ನು ತಿರಸ್ಕರಿಸಿದ ನಂತರ, ಸಲೇಂ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ಅರ್ಜಿಯಲ್ಲಿ, ಆತ ತಮ್ಮ ಸಹೋದರನ ಅಂತಿಮ ವಿಧಿವಿಧಾನಗಳು, 40 ದಿನಗಳ ಉಪವಾಸ, ಕುರಾನ್ ಪಠಣ ಮತ್ತು ಇತರ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಲು ಅನುಮತಿ ಕೋರಿದ್ದ.