ಸರ್ಕಾರ ರಚನೆ ಕಸರತ್ತು, ಪ್ರಮಾಣವಚನ ಸಂಭ್ರಮಗಳ ನಡುವೆ ರಾಜಕೀಯ ಬಿರುಗಾಳಿ ಎದ್ದಿದೆ. ಬರೋಬ್ಬರಿ 100 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಪ್ ಸಚಿವ ಅರೆಸ್ಟ್ ಆಗಿದ್ದಾರೆ.
ನವದೆಹಲಿ (ಮೇ.08) ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತ ತಮಿಳುನಾಡಿನಲ್ಲಿ ಟಿವಿಕೆ ಪಕ್ಷಕ್ಕೆ ಬೆಂಬಲ ಸಿಕ್ಕ ಖುಷಿಯಲ್ಲಿ ಸರ್ಕಾರ ರಜನೆಗೆ ರಾಜ್ಯಪಾಲರ ಅವಕಾಶ ಕೋರಿದ್ದಾರೆ. ದೇಶದ ರಾಜಕೀಯ ಬೆಳವಣಿಗೆ ನಡುವೆ ಸದ್ದಿಲ್ಲದೆ ಮತ್ತೊಂದು ಬಿರುಗಾಳಿ ಎದ್ದಿದೆ. ಬರೋಬ್ಬರಿ 100 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಂಜಾಬ್ನ ಸಚಿವ ಸಂಜೀವ್ ಅರೋರ ಅರೆಸ್ಟ್ ಆಗಿದ್ದಾರೆ.

ಜಿಎಸ್ಟಿ ವ್ಯವಹಾರದಲ್ಲಿ ಅಕ್ರಮ
ಪಂಜಾಬ್ನ ಆಪ್ ನಾಯಕ, ಪಂಜಾಬ್ ಮಿನಿಸ್ಟರ್ ಸಂಜೀವ್ ಆರೋರ ಕಳೆದ ಕೆಲ ದಿನಗಳಿಂದ ಇಡಿ ರೇಡಾರ್ನಲ್ಲಿದ್ದರು. ಜಿಎಸ್ಟಿ ಬಿಲ್ಲಿಂಗ್, ಅಕ್ರಮ ವ್ಯವಹಾರಗಳ ಆರೋಪದಡಿ ಇಡಿ ಅಧಿಕಾರಿಗಳು ಸತತ ತನಿಖೆ ನಡೆಸುತ್ತಿದ್ದರು. ಇಂದು ಇಡಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಸಂಜೀವ್ ಆರೋರಾ ಅವರ ಕಚೇರಿ, ಮನೆ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಇಡಿ ದಾಳಿ ನಡೆಸಿತ್ತು. ಬರೋಬ್ಬರಿ 8 ಗಂಟೆಗಳ ಶೋಧ ಕಾರ್ಯ, ವಿಚಾರಣೆ ಬಳಿಕ ಸಂಜೀವ್ ಅರೋರಾರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಹಾಗೂ ನಕಲಿ ಜಿಎಸ್ಟಿ ಬಿಲ್ಲಿಂಗ್ ಪ್ರಕರಣದಲ್ಲಿ ಇಂದು ಇಡಿ ಅಧಿಕಾರಿಗಳು ಏಕಕಾಲಕ್ಕೆ ದೆಹಲಿ, ಪಂಜಾಬ್, ಗುರುಗ್ರಾಂ ಸೇರಿದಂತೆ ಐದು ಕಡೆ ದಾಳಿ ನಡೆಸಿದ್ದರು. ಎಪ್ರಿಲ್ 17 ರಂದು ಇದೇ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಮತ್ತೆ 2ನೇ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲೇ ಸಂಜೀವ್ ಆರೋರ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಸತತ 8 ಗಂಟೆಗಳ ವಿಚಾರಣೆ ಹಾಗೂ ಶೋಧ ಕಾರ್ಯದ ಬಳಿಕ ಅರೆಸ್ಟ್ ಮಾಡಿದ್ದಾರೆ.
ಪಂಜಾಬ್ನ ಕೈಗಾರಿಕಾ ಸಚಿವ ಸಂಜೀವ್ ಆರೋರಾ, ಮೊಬೈಲ್ ಫೋನ್ ಖರೀದಿಯಲ್ಲಿ ನಕಲಿ ಜಿಎಸ್ಟಿ ಬಿಲ್ ನೀಡಿದ್ದಾರೆ ಅನ್ನೋ ಗಂಭೀರ ಆರೋಪ ಇದೆ. ಇದೇ ವೇಳೆ ಬರೋಬ್ಬರಿ 100 ಕೋಟಿ ರೂಪಾಯಿ ಮೊತ್ತವನ್ನು ಅಕ್ರಮ ವರ್ಗಾವಣೆ ಮಾಡಿದ ಆರೋಪವೂ ಸಂಜೀವ್ ಆರೋರ ಮೇಲಿದೆ. ಕಳೆದ ಒಂದು ತಿಂಗಳಿನಿಂದ ಇಡಿ ಅಧಿಕಾರಿಗಳು ಸತತ ತನಿಖೆ ನಡೆಸಿ ಇದೀಗ ಅರೋರ ಅರೆಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ರಾಘವ್ ಚಡ್ಡಾ ಸೇರಿದಂತೆ 6 ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿಕೊಂಡಿದ್ದರು. ಇತ್ತ ದೆಹಲಿಯಲ್ಲಿ ಆಪ್ ಸರ್ಕಾರ ಪತನ ಗೊಂಡು ಇದೀಗ ಬಣಗುಡುತ್ತಿದೆ. ಉಳಿದಿರುವ ಪಂಜಾಬ್ನಲ್ಲಿ ಆಪ್ ಬುಡ ಅಲುಗಾಡತೊಡಗಿದೆ. ಈ ಬೆಳವಣಿಗೆ ನಡುವೆ ಸಂಜೀವ್ ಅರೋರಾ ಬಂಧನ ಆಪ್ ರಾಜಕೀಯ ಜೀವನದಲ್ಲಿ ತೀವ್ರ ಹೊಡೆತ ನೀಡಿದೆ.


