ಆಧಾರ್ ಇಲ್ಲವೆಂದರೆ ಏನೂ ಇಲ್ಲ... ಒಂದೊಂದು ರೂಪಾಯಿಗೂ ಲೆಕ್ಕ ಕೊಡ್ಲೇಬೇಕು!
ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಮಸೂದೆ/ ವಿದೇಶದಿಂದ ಹಣ ಪಡೆದುಕೊಳ್ಳುವ ಎನ್ಜಿಒಗಳ ಮೇಲೆ ಕಣ್ಣು/ ಪರ-ವಿರೋಧದ ಅಭಿಪ್ರಾಯ/ ನಿರ್ಬಂಧ ಇಲ್ಲ ಎಂದ ಕೇಂದ್ರ ಸರ್ಕಾರ
ನವದೆಹಲಿ(ಸೆ. 22) ಕೇಂದ್ರ ಸರ್ಕಾರ ಮತ್ತೊಂದು ಪ್ರಮುಖ ಮಸೂದೆ ಪಾಸ್ ಮಾಡಿದೆ. ಫಾರಿನ್ ಕಾಂಟ್ರಿಬ್ಯೂಶನ್ ಆಕ್ಟ್ ನಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ.
ಎನ್ ಜಿಒ ಗಳಿಗೆ ಈ ನಿಯಮ ಅನ್ವಯವಾಗಲಿದ್ದು ಯಾವುದೇ ಧರ್ಮದ ವಿರೋಧಿ ಅಲ್ಲ ಎಂದು ಕೇಂದ್ರ ತಿಳಿಸಿದೆ. ದೇಶದಲ್ಲಿ ವಿದೇಶಿ ಹೂಡಿಕೆ ಮೇಲೆ ಈ ಕಾನೂನು ನಿರ್ಭಂದ ಹೇರುವುದಿಲ್ಲ ಎಂದು ತಿಳಿಸಿದೆ. ಎನ್ಜಿಒ ನೋಂದಣಿ ಮಾಡಿಕೊಳ್ಳಬೇಕಿದ್ದರೆ ಎಲ್ಲ ಸಿಬ್ಬಂದಿ ಮತ್ತು ಸಂಬಂಧಿಸಿದವರ ಆಧಾರ್ ನಂಬರ್ ಕಡ್ಡಾಯ ಎಂದು ಬಿಲ್ ಹೇಳುತ್ತದೆ.
ಆತ್ಮನಿರ್ಭರ ಭಾರತದ ಒಂದು ಹೆಜ್ಜೆಯಾಗಿದ್ದು ವಿದೇಶಿ ಮೂಲದಿಂದ ಪಡೆದುಕೊಳ್ಳುವ ಪ್ರತಿಯೊಂದು ರೂಪಾಯಿಗೂ ಲೆಕ್ಕ ಬೇಕಿದ್ದು ಆಧಾರ್ ಕಡ್ಡಾಯ ಮಾಡಲಾಗುತ್ತಿದೆ.
ಹಣದ ದುರ್ಬಳಕೆಗೆ ತಡೆ ಹಾಕಬೇಕಾಗಿದೆ. ಆಧಾರ್ ಕಡ್ಡಾಯ ಮಾಡಿಕೊಂಡರೆ ಹಣ ವರ್ಗಾವಣೆ ಮತ್ತು ಸ್ವೀಕಾರದ ಮಾಹಿತಿ ಸಿಗುತ್ತದೆ ಎಂಬುದು ಕೇಂದ್ರ ಸರ್ಕಾರದ ವಾದ.
ಸಹಜವಾಗಿಯೇ ಇದನ್ನು ವಿರೋಧಿಸಿರುವ ಕಾಂಗ್ರೆಸ್, ಇದರ ಹಿಂದೆ ರಾಜಕಾರಣವಿದೆ. ಪಿಒಎಂ ಕೇರ್ ಸಂರಕ್ಷಣೆ ಮಾಡಲು ಈ ನೀತಿ ಜಾರಿ ಮಾಡಲಾಗಿದೆ ಎಂದು ಆರೋಪಿಸಿದೆ.
ಆದರೆ ಶಿವಸೇನೆ ಮಾತ್ರ ಇದನ್ನು ಸ್ವಾಗತ ಮಾಡಿದ್ದು ಧಾರ್ಮಿಕ ಸಂಘಟನೆಗಳಲ್ಲಿ ಹಣ ಹೂಡಿಕೆ ಮಾಡುವವರ ಸಂಪೂರ್ಣವಿವರ ಬೇಕಾಗುತ್ತದೆ ಎಂದಿದೆ. ಸಂಘಟನೆಗಳು ವಿದೇಶದಿಂದ ಹಣ ಪಡೆದು ಸಾರ್ವಜನಿಕ ಕೆಲಸದಲ್ಲಿ ತೊಡಗಲು ಈ ಕಾನೂನು ಅಡ್ಡಗಾಲಾಗುತ್ತದೆ ಎಂದು ಟಿಎಂಸಿ ವಿಶ್ಲೇಷಣೆ ಮಾಡಿದೆ. ಇನ್ನೊಂದೆಡೆ ಜೆಡಿಯು ಮತ್ತು ವೈಎಸ್ಆರ್ ಕಾಂಗ್ರೆಸ್ ಈ ಕಾನೂನನ್ನು ಸ್ವಾಗತ ಮಾಡಿವೆ.