ಮನೆಯತ್ತ ಬಂದ ಚಿರತೆಯನ್ನು ಬೊಗಳಿ ದೂರ ಓಡಿಸಿದ ಶ್ವಾನ: ವೀಡಿಯೋ ವೈರಲ್
ಇಲ್ಲೊಂದು ಕಡೆ ಆಹಾರ ಅರಸಿ ನಾಡಿನತ್ತ ಬಂದು ಮನೆಗೆ ನುಗ್ಗಲು ಯತ್ನಿಸಿದ ಚಿರತೆಯೊಂದನ್ನು ಮನೆಯ ಸಾಕುನಾಯಿಯೊಂದು ಬೊಗಳಿ ದೂರ ಓಡಿಸಿದೆ. ಈ ದೃಶ್ಯ ಮನೆಯಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಹ್ಮದ್ನಗರ: ಕಾಡಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಇತ್ತೀಚೆಗೆ ಹೆಚ್ಚಾಗಿದ್ದು ನಾಡಿಗೆ ದಾಂಗುಡಿ ಇಟ್ಟು ಜನರ ,ಸಾಕು ಪ್ರಾಣಿಗಳನ್ನು ಹೊತ್ತೊಯ್ಯುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಆಹಾರ ಅರಸಿ ನಾಡಿನತ್ತ ಬಂದು ಮನೆಗೆ ನುಗ್ಗಲು ಯತ್ನಿಸಿದ ಚಿರತೆಯೊಂದನ್ನು ಮನೆಯ ಸಾಕುನಾಯಿಯೊಂದು ಬೊಗಳಿ ದೂರ ಓಡಿಸಿದೆ. ಈ ದೃಶ್ಯ ಮನೆಯಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಅಹ್ಮದ್ನಗರದಲ್ಲಿ ಈ ಘಟನೆ ನಡೆದಿದೆ.
ಈ ವೀಡಿಯೋವನ್ನು ಸುದ್ದಿಸಂಸ್ಥೆ ಎಎನ್ಐ ಟ್ವಿಟ್ಟರ್ನಲ್ಲಿ ಶೇರ್ ಮಾಡಿದೆ. 54 ಸೆಕೆಂಡ್ಗಳ ವೀಡಿಯೋದಲ್ಲಿ ಚಿರತೆಯೊಂದು ಮೆಲ್ಲ ಮೆಲ್ಲನೇ ಮನೆಯತ್ತ ಬಂದು ಸೀದಾ ಮನೆಗೆ ನುಗ್ಗಲು ಯತ್ನಿಸುವುದನ್ನು ಕಾಣಬಹುದಾಗಿದೆ. ಕೂಡಲೇ ಅಲ್ಲಿದ ನಾಯಿ ಜೋರಾಗಿ ಬೊಗಳಿ ಚಿರತೆಯನ್ನು ಹಿಮ್ಮೆಟ್ಟಿಸಲು ನೋಡಿದೆ. ನಾಯಿಯ ಬೊಬ್ಬೆಗೆ ಬೆದರಿದ ಚಿರತೆ ನಂತರ ಬಂದ ದಾರಿಗೆ ಸುಂಕವಿಲ್ಲದಂತೆ ದೂರ ಓಡಿದೆ.
ಚಿರತೆ ಬಾಯಿಯಿಂದ ಮಾಲೀಕ ಹಾಗೂ ಶ್ವಾನವನ್ನು ರಕ್ಷಿಸಿದ ಹಸು
ಕೆಲದಿನಗಳ ಹಿಂದೆ ದಾವಣಗೆರೆಯ ಚನ್ನಗಿರಿ ತಾಲೂಕಿನಲ್ಲಿ ಹಸುವೊಂದು ಮಾಲೀಕ ಹಾಗೂ ಮನೆಯ ಸಾಕುನಾಯಿಯನ್ನು ಚಿರತೆಯಿಂದ ರಕ್ಷಿಸಿದ ಅಪರೂಪದ ಘಟನೆ ನಡೆದಿತ್ತು. ಕೊಡಗೀಕೆರೆ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶ ಉಬ್ರಾಣಿ ಹೋಬಳಿಯಲ್ಲಿ ಬರುವ ತಮ್ಮ ಜಮೀನಿನಲ್ಲಿ ಎಂದಿನಂತೆ ರೈತ ಕರಿಹಾಲಪ್ಪ ಹಸು ಮೇಯಿಸಲು ಹೋಗಿದ್ದಾರೆ ಇವರ ಜೊತೆ ಇವರ ಶ್ವಾನವೂ ಹೋಗಿದೆ. ಈ ಸಂದರ್ಭದಲ್ಲಿ ಏಕಾಏಕಿ ಕಾಡಿನ ಮೂಲೆಯಿಂದ ಬಂದ ಚಿರತೆ, ಕರಿಹಾಲಪ್ಪ ಹಾಗೂ ಆತನ ನಾಯಿಯ ಮೇಲೆ ದಾಳಿ ನಡೆಸಿದೆ. ಧೃತಿಗೆಡದ ಕರಿಹಾಲಪ್ಪ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆತನ ಬೆನ್ನಿನ ಮೇಲೆ ಚಿರತೆ ಉಗರಿನಿಂದ ಪರಚಿದೆ. ಬೊಗಳಿ ಪ್ರತಿರೋಧ ಒಡ್ಡುತ್ತಿದ್ದ ನಾಯಿಯ ಮೇಲೂ ಚಿರತೆ ದಾಳಿ ಮಾಡಿದೆ. ಈ ವೇಳೆ ಅವರ ಹಸು ಗೌರಿ ತನ್ನ ಕೊಂಬಿನಿಂದ ಚಿರತೆಯನ್ನು ಎತ್ತಿ ಎಸೆದಿದೆ.
ತಾಯಿ ಮಮತೆಗೆ ಸಾಟಿಯುಂಟೇ..ಕಳೆದುಹೋದ ಮರಿಗಾಗಿ ಮರಳಿ ಗ್ರಾಮಕ್ಕೆ ಬಂದ ಚಿರತೆ
ಪರಿಣಾಮ ಚಿರತೆ ಅಲ್ಲಿಂದ ಪರಾರಿಯಾಗಿದೆ.ಚಿರತೆ ದಾಳಿಯಿಂದ ಸಂರಕ್ಷಿಸಿಕೊಳ್ಳಲು ತನ್ನ ಮಾಲೀಕನ ನೆರವಿಗೆ ಹಸು ಬಂದಿದ್ದು ಮೂವರ ಸಾಂಘಿಕ ಹೋರಾಟದಿಂದ ಯಾರ ಜೀವಕ್ಕೂ ಹಾನಿಯಾಗಿಲ್ಲ. ಅದೃಷ್ಟವಶಾತ್ ಕರಿಹಾಲಪ್ಪ ಯಾವುದೇ ಗಂಭೀರ ಗಾಯವಾಗದೆ ಬದುಕುಳಿದಿದ್ದಾರೆ . ಹಸುವಿನ ಸಹಾಯದಿಂದ ಕರಿಹಾಲಪ್ಪ ನಿಟ್ಟಿಸಿರು ಬಿಟ್ಟಿದ್ದು ತನ್ನ ಪ್ರಾಣ ಉಳಿಸಿದ ಹಸುವಿಗೆ ಎಷ್ಟೇ ಕೃತಜ್ಞತೆ ಹೇಳಿದ್ರು ಸಾಲದು ಎಂದಿದ್ದಾರೆ.
ನಾಯಿನ ಹೊತ್ತೊಯ್ದ ಚಿರತೆ
ಬಿರು ಬೇಸಿಗೆಯ ಮೇ ತಿಂಗಳಲ್ಲಿ ವ್ಯಕ್ತಿಯೊಬ್ಬರು ಹೊರಗೆ ಮಲಗಿದ್ದ ವೇಳೆ ಚಿರತೆಯೊಂದು ಬಂದು ಅವರ ಶ್ವಾನವನ್ನು ಹೊತ್ತೊಯ್ದ ಘಟನೆ ಪುಣೆಯ ಅಲೆಫಟಾ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಲ್ಯಾಣ ನಗರದಲ್ಲಿ ನಡೆದಿತ್ತು. ಇದರ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿ ವೈರಲ್ ಆಗಿತ್ತು. ಈ ವೀಡಿಯೋದಲ್ಲಿ ಕಾಣಿಸುವಂತೆ ಇದೊಂದು ಗ್ಯಾರೇಜ್ನಂತೆ ಕಾಣಿಸುತ್ತಿದ್ದು, ಬಹುಶಃ ಅಲ್ಲೇ ಕೆಲಸ ಮಾಡುವ ವ್ಯಕ್ತಿಯೋ ಏನೋ ತಿಳಿಯದು ಆತ ಸಾಲಾಗಿ ನಿಲ್ಲಿಸಿರುವ ಲಾರಿಗಳ ಮುಂದೆ ಬೆಂಚೊಂದನ್ನು ಜೋಡಿಸಿ ಅದರ ಮೇಲೆ ಮಲಗಿದ್ದಾನೆ. ಆತನ ಪಕ್ಕದಲ್ಲೇ ನಾಯೊಂದು ಕೆಳಗೆ ಮಲಗಿದೆ. ಮಧ್ಯರಾತ್ರಿ ವೇಳೆ ಇಲ್ಲಿಗೆ ಚಿರತೆಯೊಂದು ಬಂದಿದ್ದು, ಸ್ವಲ್ಪ ಕಾಲ ಸಂದರ್ಭವನ್ನು ಅವಲೋಕಿಸಿದ ಚಿರತೆ ಸ್ವಲ್ಪ ಮುಂದೆ ಬಂದು ನಾಯಿಯನ್ನು ಎಳೆದುಕೊಂಡು ಅಲ್ಲಿಂದ ಕ್ಷಣದಲ್ಲಿ ಮರೆಯಾಗಿದೆ. ಈ ವೇಳೆ ನಾಯಿ ಜೋರಾಗಿ ಬೊಬ್ಬೆ ಹಾಕಿದ್ದು, ಈ ಸದ್ದು ಕೇಳಿ ಎದ್ದ ಮಾಲೀಕನಿಗೆ ಏನಾಗುತ್ತಿದೆ ಎಂಬುದೇ ತಿಳಿಯದಾಗಿದೆ.
ಇಬ್ಬರು ಹೆಣ್ಮಕ್ಕಳನ್ನು ಸಾವಿನ ದವಡೆಯಿಂದ ಕಾಪಾಡಲು ಬರಿಗೈಯಲ್ಲಿ ಚಿರತೆಯೊಂದಿಗೆ ಹೋರಾಡಿದ ಕಾರ್ಮಿಕ