ಲೋಕಸಭೆಯಲ್ಲಿ ಅನುಚಿತ ವರ್ತನೆ ಹಾಗೂ ಸ್ಪೀಕರ್ ಪೀಠಕ್ಕೆ ಕಾಗದ ಎಸೆದ ಆರೋಪದ ಮೇಲೆ ಕಾಂಗ್ರೆಸ್‌ನ ಏಳು ಸದಸ್ಯರು ಸೇರಿದಂತೆ ಒಟ್ಟು ಎಂಟು ಸಂಸದರನ್ನು ಬಜೆಟ್ ಅಧಿವೇಶನದಿಂದ ಅಮಾನತು ಮಾಡಲಾಗಿದೆ. ಭಾರತ-ಚೀನಾ ಸಂಘರ್ಷದ ಕುರಿತು ಮಾತನಾಡಲು ರಾಹುಲ್ ಗಾಂಧಿಯವರಿಗೆ ಅವಕಾಶ ನಿರಾಕರಿಸಿದ ನಂತರ ಈ ಘಟನೆ ನಡೆದಿದೆ.

ನವದೆಹಲಿ (ಜ.4): ಬಜೆಟ್‌ ಅಧಿವೇಶನದಲ್ಲಿ ಅನುಚಿತ ವರ್ತನೆ ಹಾಗೂ ಸ್ಪೀಕರ್‌ ಪೀಠದೆಡೆಗೆ ಪೇಪರ್‌ ಹರಿದೆಸೆಯುವ ಮೂಲಕ ಅಗೌರವ ತೋರಿದ ಆರೋಪ ಮೇರೆಗೆ ಕಾಂಗ್ರೆಸ್‌ನ ಏಳು ಮಂದಿ ಸೇರಿ ಒಟ್ಟು ಎಂಟು ಲೋಕಸಭಾ ಸದಸ್ಯರನ್ನು ಮಂಗಳವಾರ ಅಮಾನತು ಮಾಡಲಾಗಿದೆ.

ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಕೆಲ ಸಾಲುಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಅವಕಾಶ ನಿರಾಕರಿಸಿದ ಬಳಿಕ ಭಾರೀ ಗದ್ದಲ ಏರ್ಪಟ್ಟು, ಈ ಘಟನೆ ನಡೆದಿದೆ.

ಕಾಂಗ್ರೆಸ್‌ನ ಹಿಬಿ ಏಡನ್‌, ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌, ಮಾಣಿಕ್ಯಂ ಟ್ಯಾಗೋರ್‌, ಗುರ್ಜೀತ್‌ ಸಿಂಗ್‌ ಔಜ್ಲಾ, ಕಿರಣ್‌ ಕುಮಾರ್‌ ರೆಡ್ಡಿ, ಪ್ರಶಾಂತ್‌ ಪಡೋಲೆ, ಡಿಯನ್‌ ಕುರಿಯಾಕೋಸೆ ಮತ್ತು ಸಿಪಿಎಂನ ಎಸ್‌.ವೆಂಕಟೇಶನ್‌ ಅಮಾನತಾದ ಸದಸ್ಯರು. ಇವರಿಗೆ ಏ.2ರ ವರೆಗೆ ನಡೆಯಲಿರುವ ಬಜೆಟ್‌ ಅಧಿವೇಶನದ ಕಲಾಪದಿಂದ ಅಮಾನತುಗೊಳಿಸಲಾಗಿದೆ.

ಆಗಿದ್ದೇನು?:

ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ, ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಬೆಳಗ್ಗೆಯಿಂದಲೇ ಲೋಕಸಭೆಯಲ್ಲಿ ತೀವ್ರ ಗದ್ದಲ ನಡೆದಿತ್ತು. ಈ ಮಧ್ಯೆ, ರಾಹುಲ್‌ ಗಾಂಧಿ ಅವರು ನರವಣೆ ಅವರ ಅಪ್ರಕಟಿತ ಆತ್ಮಕತೆಯಲ್ಲಿ ಉಲ್ಲೇಖಿಸಿರುವ 2020ರ ಭಾರತ-ಚೀನಾ ಸಂಘರ್ಷದ ಕುರಿತ ಸಾಲು ಪ್ರಸ್ತಾಪಿಸಲು ಮುಂದಾದರು. ಆದರೆ ಅಪ್ರಕಟಿತ ಆತ್ಮಕತೆಯಲ್ಲಿರುವ ವಿಚಾರ ಸಂಸತ್ತಿನಲ್ಲಿ ಪ್ರಸ್ತಾಪಕ್ಕೆ ಸರ್ಕಾರ ವಿರೋಧಿಸಿದಾಗ ರಾಹುಲ್‌ ಅವರಿಗೆ ರಾಷ್ಟ್ರಪತಿಗಳ ಭಾಷಣ ಮೇಲಿನ ವಂದನಾ ನಿರ್ಣಯದ ಮಾತು ಮುಂದುವರಿಸಲು ಸ್ಪೀಕರ್‌ ಸೂಚಿಸಿದರು. ಆದರೆ ರಾಹುಲ್‌ ಮತ್ತೆ ಮತ್ತೆ ಪಟ್ಟು ಹಿಡಿದಾಗ, ಸ್ಪೀಕರ್‌ ಅವರು ಇತರೆ ಸದಸ್ಯರಿಗೆ ಮಾತನಾಡಲು ಸೂಚಿಸಿದರು.

ತೀವ್ರ ವಾಗ್ವಾದ:

ಆಗ ಪ್ರತಿಪಕ್ಷ ಸದಸ್ಯರು ಸರ್ಕಾರ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕೆಲವರು ಪ್ರಧಾನ ಕಾರ್ಯದರ್ಶಿ ಅವರ ಟೇಬಲ್‌ ಮೇಲೆ ಹತ್ತಲೆತ್ನಿಸಿದ್ದು, ತರುವಾಯ ಕಾಗದ ಪತ್ರಗಳನ್ನು ಹರಿದು ಸ್ಪೀಕರ್‌ ಅವರತ್ತ ಎಸೆದರು. ಇದರಿಂದಾಗಿ ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಕಲಾಪವನ್ನ ಮಧ್ಯಾಹ್ನ 3 ಗಂಟೆಗೆ ಮತ್ತೆ ಮುಂದೂಡಲಾಯಿತು.

ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್‌ ಖುರ್ಚಿಯಲ್ಲಿದ್ದ ದಿಲೀಪ್‌ ಸೈಕಿಯಾ ಎಂಟು ಸದಸ್ಯರ ದುರ್ನಡತೆ ಕುರಿತು ಪ್ರಸ್ತಾಪಿಸಿದರು. ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು 8 ಸದಸ್ಯರ ಅಮಾನತು ನಿರ್ಣಯ ಮಂಡಿಸಿದ್ದು, ಅದಕ್ಕೆ ಧ್ವನಿಮತದ ಅಂಗೀಕಾರ ನೀಡಲಾಯಿತು. ಬಳಿಕ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ರಾಹುಲ್‌ ಪ್ರತಿಭಟನೆ:

ಸದಸ್ಯರ ಅಮಾನತಿಗೆ ರಾಹುಲ್‌ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು. ಅಮಾನತಾದ ಸಂಸದರು ಸಂಸತ್ತಿನ ಹೊರಗೆ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.