ghost hostel : ಮಹಾರಾಷ್ಟ್ರದ ಸರ್ಕಾರಿ ಆಶ್ರಮಶಾಲೆ ಈಗ ಭಾರೀ ಸುದ್ದಿಯಲ್ಲಿದೆ. ಹಾಸ್ಟೆಲ್ನಲ್ಲಿ ಭೂತವಿದೆ ಎಂಬ ಸುದ್ದಿ ವಿದ್ಯಾರ್ಥಿಗಳು ಹಾಸ್ಟೇಲ್ ಬಿಡುವಂತೆ ಮಾಡಿದೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸರ್ಕಾರಿ ಆಶ್ರಮ ಶಾಲೆಯೊಂದರ ಹಾಸ್ಟೇಲ್ ಈಗ ಖಾಲಿಯಾಗಿದೆ. ಅಲ್ಲಿದ್ದ ಬಹುತೇಕ ಮಕ್ಕಳು ಹಾಸ್ಟೇಲ್ ಬಿಟ್ಟಿದ್ದಾರೆ. ಇದಕ್ಕೆ ಕಾರಣ ಮಕ್ಕಳಲ್ಲಿ ಕಾಡ್ತಿರುವ ಭೂತದ ಭಯ. ಮಕ್ಕಳ ಹಾಸ್ಟೇಲ್ ಬಿಡ್ತಿದ್ದಂತೆ ಆಡಳಿತಮಂಡಳಿ ತನಿಖೆ ಶುರು ಮಾಡಿದೆ.
ರಾತ್ರಿ ಗಜ್ಜೆ - ನಗು ಶಬ್ಧ !
ಈ ಘಟನೆ ನಡೆದಿರೋದು ಮಹಾರಾಷ್ಟ್ರದ ಚಿಖಲ್ದರಾ ತಾಲೂಕಿನ ಮೇಲ್ಘಾಟ್ ಪ್ರದೇಶದಲ್ಲಿರುವ ಡೋಮಾ ಸರ್ಕಾರಿ ಆಶ್ರಮಶಾಲೆಯಲ್ಲಿ. ಇಲ್ಲಿ ಕೆಲವು ವಿದ್ಯಾರ್ಥಿಗಳಿಗೆ ರಾತ್ರಿ ಗೆಜ್ಜೆ ಸದ್ದು ಕೇಳಿದೆಯಂತೆ. ಮತ್ತೆ ಕೆಲವರು ನಗುವ, ಅಳುವ ಶಬ್ಧ ಕೇಳಿಸಿಕೊಂಡಿದ್ದಾರಂತೆ. ಇದು ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸಿದೆ. ಆಶ್ರಮದಲ್ಲಿ ಈ ಮಾತು ಕೆಲವೇ ಸಮಯದಲ್ಲಿ ಇತರ ವಿದ್ಯಾರ್ಥಿಗಳಿಗೂ ಹರಡಿದೆ. ನಂತರ ಕೆಲವರು ಇದನ್ನು ಭೂತ ಅಥವಾ ಅಲೌಕಿಕ ಶಕ್ತಿಗೆ ಸಂಬಂಧಿಸಿದೆ ಎಂದು ನಂಬಲು ಆರಂಭಿಸಿದ್ದಾರೆ.
ಭಯದ ವಾತಾವರಣ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಅಂದ್ರೆ ಅವರು ಪಾಲಕರಿಗೆ ಕರೆ ಮಾಡಿ ವಿಷ್ಯ ತಿಳಿಸಿದ್ದಾರೆ. ಸುಮಾರು 608 ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ತಮ್ಮ ಮನೆಗಳಿಗೆ ತೆರಳಿದ್ದಾರೆ. ಇವರಲ್ಲಿ 263 ವಿದ್ಯಾರ್ಥಿಗಳು ಹಾಗೂ 345 ವಿದ್ಯಾರ್ಥಿನಿಯರು ಸೇರಿದ್ದಾರೆ.
ವಿಷಯ ಗಂಭೀರವಾಗುತ್ತಿದ್ದಂತೆ ಶಾಲಾ ಆಡಳಿತ ಮತ್ತು ಆರೋಗ್ಯ ಇಲಾಖೆ ಮಧ್ಯಪ್ರವೇಶಿಸಿದೆ. ವಿಚಿತ್ರ ಶಬ್ದಗಳನ್ನು ಕೇಳಿರುವುದಾಗಿ ಹೇಳಿದ ಕೆಲವು ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಕರೆದೊಯ್ದು ಮನೋವೈದ್ಯರಿಂದ ಪರೀಕ್ಷೆ ಮಾಡಿಸಲಾಗಿದೆ. ವೈದ್ಯಕೀಯ ಪರಿಶೀಲನೆಯಲ್ಲಿ ಸೀವಿಯರ್ ಹಿಸ್ಟೀರಿಯಾ ರೀತಿಯ ಕೆಲವು ಲಕ್ಷಣಗಳು ಕಂಡುಬಂದಿವೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ಚಿಖಲ್ದರಾ ತಾಲೂಕು ಆರೋಗ್ಯಾಧಿಕಾರಿ ಅಭಿಷೇಕ್ ನಾಯ್ಡು, ಇದು ಮಾನಸಿಕ ಆರೋಗ್ಯ, ಭಯ ಮತ್ತು ವದಂತಿಗಳ ಪರಿಣಾಮವಾಗಿರಬಹುದು ಎಂದಿದ್ದಾರೆ. ಮಕ್ಕಳಲ್ಲಿ ಉಂಟಾಗಿರುವ ಭಯವನ್ನು ಕಡಿಮೆ ಮಾಡಲು ಕೌನ್ಸೆಲಿಂಗ್ ಕೂಡ ನಡೆಸಲಾಗುತ್ತಿದೆ. ಮಕ್ಕಳ ಮನವೊಲಿಸಿ ಅವರನ್ನು ವಾಪಸ್ ಕರೆತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ.


