Asianet Suvarna News Asianet Suvarna News

ಮುಗಿಯದ ಕಾಂಗ್ರೆಸ್‌ ಸಂಸದ ಧೀರಜ್‌ ಸಾಹು ಕಪ್ಪು ಹಣ ಎಣಿಕೆ, ಇನ್ನೂ 46 ಚೀಲದ ಹಣ ಬಾಕಿ!

ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡ ಹಣವನ್ನು ಎಣಿಸಲು ಅಧಿಕಾರಿಗಳು ಹೆಚ್ಚುವರಿ ನಗದು ಎಣಿಕೆ ಯಂತ್ರಗಳು ಹಾಗೂ ಇನ್ನಷ್ಟು ಅಧಿಕಾರಿಗಳನ್ನು ನಿಯೋಜಿಸಿದ್ದಾರೆ.
 

176 bags of cash seized in raids at Congress MP dheeraj sahu premises counting to continue san
Author
First Published Dec 10, 2023, 11:11 PM IST

ನವದೆಹಲಿ (ಡಿ.10): ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ನಿವೇಶನಗಳಿಂದ ವಶಪಡಿಸಿಕೊಂಡ ನಗದು ಎಣಿಕೆಯನ್ನು ಭಾನುವಾರದೊಳಗೆ ಮುಗಿಸಲು ಅಧಿಕಾರಿಗಳು ಪ್ರಯತ್ನ ಮಾಡಿದರೂ, ಅದು ಸಾಧ್ಯವಾಗಿಲ್ಲ. ಡಿಸೆಂಬರ್ 6 ರಂದು ನಡೆದ ದಾಳಿಯ ವೇಳೆ ಸಿಕ್ಕಿದ್ದ ಒಟ್ಟು 176 ಬ್ಯಾಗ್‌ಗಳಲ್ಲಿ 140 ಬ್ಯಾಗ್‌ಗಳ ಎಣಿಕೆಯನ್ನು ಈವರೆಗೂ ಪೂರ್ಣ ಮಾಡಲಾಗಿದ್ದು ಇನ್ನೂ 46 ಹಣದ ಚೀಲದ ಎಣಿಕೆ ಬಾಕಿ ಇದೆ. ತೆರಿಗೆ ಅಧಿಕಾರಿಗಳ ಪ್ರಕಾರ, ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಆಸ್ತಿಗಳ ಮೇಲೆ ಮಾಡಿದ ದಾಳಿಯಿಂದ ಸಿಕ್ಕಿರುವ ಹಣದ ಪ್ರಮಾಣ 300 ಕೋಟಿಗೆ ತಲುಪುವ ಸಾಧ್ಯತೆ ಇದೆ. ಇದು ಒಂದೇ ಕಾರ್ಯಾಚರಣೆಯಲ್ಲಿ ಏಜೆನ್ಸಿಯ ಅತಿದೊಡ್ಡ ರೇಡ್‌ ಎನಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ಅವರು ಹೇಳಿರುವ ಪ್ರಕಾರ, ಬ್ಯಾಂಕ್‌ 176 ಬ್ಯಾಗ್‌ಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 140 ಅನ್ನು ಎಣಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮೂರು ಬ್ಯಾಂಕ್ ಗಳ ಐವತ್ತು ಅಧಿಕಾರಿಗಳು ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದು, 40 ಯಂತ್ರಗಳನ್ನು ನಿಯೋಜಿಸಲಾಗಿದೆ.

ಸೋಮವಾರದಿಂದ ಸಾಮಾನ್ಯ ಬ್ಯಾಂಕಿಂಗ್ ಸಮಯ ಪ್ರಾರಂಭವಾಗಲಿದ್ದು, ಯಂತ್ರಗಳನ್ನು ಬ್ಯಾಂಕ್‌ಗಳಿಗೆ ಹಿಂತಿರುಗಿಸಬೇಕಾಗಿರುವುದರಿಂದ ಭಾನುವಾರದ ಅಂತ್ಯದ ವೇಳೆಗೆ ಎಣಿಕೆಯನ್ನು ಮುಗಿಸಲು ಅಧಿಕಾರಿಗಳು ಪ್ರಯತ್ನ ಮಾಡಿದ್ದರಾದರೂ ಅದು ಸಾಧ್ಯವಾಗಿಲ್ಲ. ಎಣಿಕೆಗೆ ಇನ್ನೂ ಗಮನಾರ್ಹ ಪ್ರಮಾಣದ ನಗದು ಉಳಿದಿರುವ ಕಾರಣ, ಪ್ರಕ್ರಿಯೆಯನ್ನು ವೇಗಗೊಳಿಸಲು ಹೆಚ್ಚುವರಿ ನಗದು-ಎಣಿಕೆ ಯಂತ್ರಗಳು ಹಾಗೂ ಇನ್ನಷ್ಟು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಭಗತ್ ಬೆಹೆರಾ ಪ್ರಕಾರ, ಎಣಿಕೆ ಯಂತ್ರಗಳು ಎದುರಿಸಬಹುದಾದ ಯಾವುದೇ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಇಂಜಿನಿಯರ್‌ಗಳು ಕೂಡ ಸ್ಥಳದಲ್ಲಿದ್ದರು.

ಭಾನುವಾರ ಹೊರಬಂದ ಹಲವಾರು ದೃಶ್ಯಗಳು ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಆಸ್ತಿಯಿಂದ ವಶಪಡಿಸಿಕೊಂಡ ಹಣದ ಬಂಡಲ್‌ಗಳನ್ನು ಅಧಿಕಾರಿಗಳು ಎಣಿಸುತ್ತಿರುವುದನ್ನು ತೋರಿಸಿದೆ. ಒಡಿಶಾದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ಗೆ ಸಂಪರ್ಕ ಹೊಂದಿದ ನಿವೇಶನಗಳಿಂದ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಧೀರಜ್ ಸಾಹು ಅವರ ಕುಟುಂಬವು ಪ್ರಮುಖ ಮದ್ಯ ತಯಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಮತ್ತು ಅವರು ಒಡಿಶಾದಲ್ಲಿ ಅಂತಹ ಹಲವಾರು ಕಾರ್ಖಾನೆಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಅಪಾರ ಪ್ರಮಾಣದ ನಗದು ವಸೂಲಿಯಾದ ನಂತರ ಕಾಂಗ್ರೆಸ್, ಧೀರಜ್ ಸಾಹು ವಿಚಾರದಿಂದ ದೂರ ಉಳಿದಿದೆ.

ಕಂತೆ ಕಂತೆ ನೋಟು ಸಿಕ್ಕಿದ್ದೇ ತಡ, ಧೀರಜ್‌ ಸಾಹು ಬ್ಯುಸಿನೆಸ್‌ ಗೊತ್ತೇ ಇಲ್ಲ ಎಂದ ಕಾಂಗ್ರೆಸ್‌!

"ಕಾಂಗ್ರೆಸ್ ಪಕ್ಷ ಸಂಸದ ಧೀರಜ್ ಸಾಹು ಅವರ ವ್ಯವಹಾರಗಳೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ. ಅವರ ಆಸ್ತಿಗಳಿಂದ ಆದಾಯ ತೆರಿಗೆ ಅಧಿಕಾರಿಗಳು ಹೇಗೆ ಅಪಾರ ಪ್ರಮಾಣದ ಹಣವನ್ನು ಪತ್ತೆ ಮಾಡಿದ್ದಾರೆ ಎಂದು ಅವರು ಮಾತ್ರ ವಿವರಿಸಬಹುದು ಮತ್ತು ವಿವರಿಸಬೇಕು," ಎಐಸಿಸಿ ಜನರಲ್ ಸೆಕ್ರೆಟರಿ ಕಮ್ಯುನಿಕೇಷನ್ಸ್ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಈ ನಡುವೆ ಆದಾಯ ತೆರಿಗೆ ಇಲಾಖೆ ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಕಂಪನಿ ಅಧಿಕಾರಿಗಳು ಮತ್ತು ಇತರರ ಹೇಳಿಕೆಗಳನ್ನು ದಾಖಲಿಸಿದ್ದಾರೆ.\

ಅದು ಸಂಸದನ ಮನೆ ಅಲ್ಲ..ಕೋಟಿ ನೋಟಿನ ಕೋಟೆ..! ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಕಾಂಗ್ರೆಸ್ ಮುಖಂಡ..?

Latest Videos
Follow Us:
Download App:
  • android
  • ios