ಈದ್ಗಾ ಮೈದಾನದಲ್ಲಿ ಬೆಳಗ್ಗೆ 8ಕ್ಕೆ ಧ್ವಜಾರೋಹಣ: ಸರ್ಕಾರದಿಂದಲೇ ಸ್ವಾತಂತ್ರ್ಯ ದಿನಾಚರಣೆ
ನಗರದ ಚಾಮರಾಜ ಪೇಟೆಯ ಆಟದ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ 8ಕ್ಕೆ ಸರ್ಕಾರದಿಂದಲೇ ಧ್ವಜಾರೋಹಣ ನಡೆಯಲಿದೆ. ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಂಗಳೂರು (ಆ.15): ನಗರದ ಚಾಮರಾಜ ಪೇಟೆಯ ಆಟದ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ 8ಕ್ಕೆ ಸರ್ಕಾರದಿಂದಲೇ ಧ್ವಜಾರೋಹಣ ನಡೆಯಲಿದೆ. ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸ್ಥಳೀಯ ಶಾಸಕ ಜಮೀರ್ ಅಹ್ಮದ್ಖಾನ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಸೇರಿದಂತೆ ಇತರೆ ಗಣ್ಯರು, ಅತಿಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿರಲಿದ್ದಾರೆ.
ಧ್ವಜಾರೋಹಣದ ಹಿನ್ನೆಲೆಯಲ್ಲಿ ಭಾನುವಾರ ತಾತ್ಕಾಲಿಕ ಧ್ವಜ ಸ್ತಂಭ ಸ್ಥಾಪಿಸಿ ಅಲಂಕಾರ ಮಾಡಲಾಗಿದೆ. ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ 300 ಆಸನ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಕಂದಾಯ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಹಿ ವಿತರಣೆ ನಡೆಯಲಿದೆ.
ಗಾಂಧಿ ತಾತನಿಗೆ ಊಟ ಉಪಚಾರ ಮಾಡಿದ್ದ ಪೋರಿ ಈಗ ಶತಾಯುಷಿ ಅಜ್ಜಿ
ಫ್ಲೆಕ್ಸ್ ತೆರವಿಗೆ ಜಟಾಪಟಿ: ಚಾಮರಾಜಪೇಟೆ ಆಟದ ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೈದಾನದ ಸುತ್ತಮುತ್ತ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಶನಿವಾರ ಶುಭಕೋರಿ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಕೆ ಮಾಡಿದ್ದರು. ಆದರೆ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಕೆ ಮಾಡುವುದಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ಬ್ಯಾನರ್ ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಒಕ್ಕೂಟ ಪದಾಧಿಕಾರಿಗಳ ನಡುವೆ ಭಾನುವಾರ ವಾಗ್ವಾದ ನಡೆದಿದೆ. ಪೊಲೀಸ್ ಭದ್ರತೆಯಲ್ಲಿ ಪಾಲಿಕೆ ಅಧಿಕಾರಿಗಳು ಫ್ಲೆಕ್ಸ್ ಬ್ಯಾನರ್ ತೆರವು ಮಾಡಿದರು.
ಸುತ್ತಮುತ್ತ ಬಿಗಿ ಭದ್ರತೆ: ಮುಂಜಾಗ್ರತಾ ಕ್ರಮವಾಗಿ ಚಾಮರಾಜಪೇಟೆ ಮೈದಾನಕ್ಕೆ ಸೋಮವಾರ ಒಂದು ಸಾವಿರಕ್ಕೂ ಅಧಿಕ ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಈದ್ಗಾ ಮೈದಾನಕ್ಕೆ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಮೂವರು ಡಿಸಿಪಿಗಳು, 6 ಎಸಿಪಿ, 15 ಇನ್ಸ್ಪೆಕ್ಟರ್, 50 ಪಿಎಸ್ಐ, 30 ಎಎಸ್ಐ ಹಾಗೂ 300 ಕಾನ್ಸ್ಟೇಬಲ್ಗಳು ಬಂದೋಬಸ್್ತಗೆ ನಿಯೋಜಿತರಾಗಿದ್ದಾರೆ. ಅಲ್ಲದೆ 5 ಕೆಎಸ್ಆರ್ಪಿ ಹಾಗೂ 2 ಸಿಎಆರ್ ತುಕಡಿಗಳು, ಮತ್ತು 1 ಆರ್ಪಿಐ ತುಕಡಿಯನ್ನು ಸಹ ಭದ್ರತೆ ಬಳಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೈದಾನದ ಸುತ್ತಮುತ್ತ 3 ಕಿ.ಮೀ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಆಳವಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಪಾಲ್ಗೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ. ಚಾಮರಾಜಪೇಟೆ ಈದ್ಗಾ ಮೈದಾನ ಭದ್ರತೆ ಕುರಿತು ಪೊಲೀಸರಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ ಪಡೆದರು. ಭಾನುವಾರ ಸಂಜೆ ಮೈದಾನಕ್ಕೆ ಭೇಟಿ ನೀಡಿ ಡಿಜಿಪಿ ಭದ್ರತೆ ಪರಿಶೀಲಿಸಿದರು.
ಈದ್ಗಾ ಮೈದಾನ ನಮ್ಮ ನೆಲ: 75 ವರ್ಷದಿಂದ ಯಾರು ಧ್ವಜ ಹಾರಿಸದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಕಂದಾಯ ಇಲಾಖೆಯಿಂದ ಸೋಮವಾರ ಧ್ವಜಾರೋಹಣ ನೆರವೇರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭಾನುವಾರ ತಿಳಿಸಿದರು. ಚಾಮರಾಜಪೇಟೆ ವಿವಾದ ಕುರಿತು ಸಚಿವ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿ, 75 ವರ್ಷಗಳಿಂದ ಯಾರು ಧ್ವಜಾರೋಹಣ ಮಾಡಿರಲಿಲ್ಲ. ಮಾಡಲು ಯಾರು ಬಿಟ್ಟಿರಲಿಲ್ಲ. ಧ್ವಜಾರೋಹಣ ಮಾಡುವಂತ ಮನಸ್ಸು ಸಹ ಯಾವ ಸರ್ಕಾರಕ್ಕೂ ಇರಲಿಲ್ಲ. ಧ್ವಜಾರೋಹಣ ಮಾಡುವಂತೆ ಅರ್ಜಿ ಬಂದರೆ ಆ ಅರ್ಜಿ ತೆಗೆದು ಮೂಲೆಗೆ ಬಿಸಾಕಿದ್ದರು ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಗುಮ್ಮಟ ನಗರಿಯಲ್ಲಿ ತಿರಂಗಾ ರಂಗು: ಎತ್ತೆತ್ತ ನೋಡಿದರೆತ್ತ ತ್ರಿವರ್ಣ ಧ್ವಜದ ಹಾರಾಟ
ಧ್ವಜಾರೋಹಣಕ್ಕೆ ಎಸಿ ದರ್ಜೆಯ ಅಧಿಕಾರಿಯೊರ್ವರನ್ನು ನೇಮಕ ಮಾಡಲಾಗಿದೆ. ಈ ವಿಚಾರವನ್ನು ಸಿಎಂ ಬಳಿ ಪ್ರಸ್ತಾಪಿಸಿದ್ದೇವೆ. ಮುಂದಿನ ಬದಲಾವಣೆ ಏನೇ ಇದ್ದರೂ ಅದನ್ನು ಮುಖ್ಯಮಂತ್ರಿಗಳು ತಿಳಿಸುತ್ತಾರೆ. ನಾನು ಮಂಡ್ಯದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ ಎಂದರು. ಮೊದಲ ಬಾರಿ ಫ್ಲಾಗ್ಹಾಸ್ಟ್ ಮಾಡಲು ನಾನು ಆದೇಶ ನೀಡಿದ್ದೇನೆ. ಕೇವಲ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗಷ್ಟೇ ಇದು ಸೀಮಿತವಾಗಿರೊಲ್ಲ. ಮುಂಬರುವ ಎಲ್ಲ ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವದಂದು ಧ್ವಜಾರೋಹಣ ನಡೆಯಲಿದೆ ಎಂದರು.