ಕಡಿಮೆ ಸಮಯದಲ್ಲಿ 20 ಕೋಟಿಗಿಂತ ಹೆಚ್ಚು ತ್ರಿವರ್ಣ ಧ್ವಜ ಖಾದಿ ಬಟ್ಟೆಯಲ್ಲಿ ನಿರ್ಮಿಸಲು ಸಾಧ್ಯವಿಲ್ಲ: ಗೋವಿಂದ್‌ ಮೋಹನ್‌ 

ಬೆಂಗಳೂರು(ಜು.27): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್‌ 13 ರಿಂದ 15ರವರೆಗೆ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸುವ ‘ಹರ್‌ ಘರ್‌ ತಿರಂಗಾ’ ಅಭಿಯಾನದಲ್ಲಿ ಪಾಲಿಸ್ಟರ್‌ ಧ್ವಜಗಳನ್ನು ಹಾರಿಸಲು ಅವಕಾಶ ನೀಡಿರುವುದನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಅಭಿಯಾನದ ಬಗ್ಗೆ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್‌ ಮೋಹನ್‌, ಕಡಿಮೆ ಸಮಯದಲ್ಲಿ 20 ಕೋಟಿಗಿಂತ ಹೆಚ್ಚು ತ್ರಿವರ್ಣ ಧ್ವಜವನ್ನು ಖಾದಿ ಬಟ್ಟೆಯಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಖಾದಿ ಬಟ್ಟೆಯ ಧ್ವಜ ದುಬಾರಿಯೂ ಆಗಿರುವುದರಿಂದ ಪಾಲಿಸ್ಟರ್‌ ಸೇರಿದಂತೆ ಹತ್ತಿ, ರೇಷ್ಮೆ, ಉಣ್ಣೆ ಮುಂತಾದವುಗಳಿಂದ ತಯಾರಿಸಿದ ಧ್ವಜಕ್ಕೆ ಅವಕಾಶ ನೀಡಿದ್ದೇವೆ. ಜನಸಾಮಾನ್ಯರಿಗೆ ಸುಲಭವಾಗಿ ಧ್ವಜ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಲೇವಾರಿಗೂ ಕ್ರಮ:

ಪಾಲಿಸ್ಟರ್‌ ಧ್ವಜಗಳ ನಿರ್ಮಾಣಕ್ಕೆ ಅವಕಾಶ ನೀಡುವುದರ ಜೊತೆಗೆ ಧ್ವಜಾರೋಹಣದ ಬಳಿಕ ಅದರ ವಿಲೇವಾರಿಗೂ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಮರು ಬಳಕೆಯ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.

ಹುಬ್ಬಳ್ಳಿ: ಬೆಂಗೇರಿ ಖಾದಿ ಕೇಂದ್ರಕ್ಕೆ ರಾಹುಲ್‌ ಗಾಂಧಿ ಶೀಘ್ರ ಭೇಟಿ, ಡಿಕೆಶಿ

ಉದ್ದಿಮೆಗಳಿಗೆ ಲಾಭ:

ಕೇಂದ್ರದ ನಡೆಯಿಂದ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ ಹೆಚ್ಚು ಪ್ರಯೋಜವನಾಗಲಿದೆ. ಹರ್‌ ಘರ್‌ ತಿರಂಗಾದ ವೆಬ್‌ಸೈಟ್‌ನಲ್ಲಿ ಧ್ವಜ ನಿರ್ಮಿಸುವ ಕಂಪೆನಿಗಳ ಮಾಹಿತಿ ನೀಡಿದ್ದೇವೆ. ಯಂತ್ರ ನಿರ್ಮಿತ ಧ್ವಜಗಳಿಗೂ ಅವಕಾಶವಿದೆ. ಧ್ವಜದ ಉದ್ದ ಮತ್ತು ಅಗಲ 3:2 ಅನುಪಾತದಲ್ಲಿ ಇರುವುದು ಕಡ್ಡಾಯ. ಉಳಿದಂತೆ ಧ್ವಜಸ್ತಂಭದ ಮೇಲೆ ಹಾರಿಸುವ ಧ್ವಜಗಳನ್ನು ಸಂಜೆ ಅವರೋಹಣ ಮಾಡಬೇಕು. ಬೇರೆಡೆ ಹಾರಿಸುವ ಧ್ವಜಗಳು 24 ಗಂಟೆಯೂ ಹಾರಾಟ ನಡೆಸಬಹುದು. ಗಿನ್ನೆಸ್‌ ಬುಕ್‌ ಆಫ್‌ ರೆಕಾರ್ಡ್ಸ್ ಅನ್ನು ಸಂಪರ್ಕಿಸಿದ್ದು ಈ ಅಭಿಯಾನ ವಿಶ್ವದಾಖಲೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಆ. 1ರಿಂದ ಪೋಸ್ಟ್‌ ಆಫೀಸಲ್ಲೂ ಧ್ವಜ ಲಭ್ಯ

ಬೆಂಗಳೂರು: ಆಗಸ್ಟ್‌ 1ರಿಂದ ರಾಷ್ಟ್ರಧ್ವಜ ವಿತರಣೆ ನಡೆಯಲಿದೆ. ಪೋಸ್ಟ್‌ ಅಫೀಸ್‌ಗಳಲ್ಲಿಯೂ ಧ್ವಜ ಲಭಿಸಲಿದೆ. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿಯೂ ಕಂಪೆನಿಗಳು ಧ್ವಜ ವಿತರಣೆ ನಡೆಸಬಹುದು ಎಂದು ಕೇಂದ್ರ ಸಂಸ್ಕೃತಿ ಕಾರ್ಯದರ್ಶಿ ಗೋವಿಂದ ಮೋಹನ್‌ ಹೇಳಿದರು.

ಆ.1 ರಂದು 500ಕ್ಕೂ ಹೆಚ್ಚು ಸೆಲೆಬ್ರೆಟಿಗಳು ಟ್ವೀಟ್‌ ಮಾಡುವ ಮೂಲಕ ಅಭಿಯಾನದ ಜೊತೆ ಕೈಜೋಡಿಸಲಿದ್ದಾರೆ. ಮಾಧ್ಯಮಗಳು ಕೂಡ ವಿವಿಧ ಕಾರ್ಯಕ್ರಮಗಳನ್ನು ಕೈಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.