ಕೊಡಗು ಜಿಲ್ಲೆಯಲ್ಲೂ ಒಂದು ಕೋವಿಡ್ ಪ್ರಕರಣ ದಾಖಲು, ಆರೋಗ್ಯ ಇಲಾಖೆ ಹೈ ಅಲರ್ಟ್
ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಕೋವಿಡ್ ವೈರಸ್ ಕೊಡಗು ಜಿಲ್ಲೆಯಲ್ಲೂ ಉಲ್ಭಣಗೊಳ್ಳಲು ಆರಂಭಿಸಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಹರಡುತ್ತಿರುವಂತೆ ಕೊಡಗು ಜಿಲ್ಲೆಯಲ್ಲೂ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
![covid case found at kodagu health department on high alert gow covid case found at kodagu health department on high alert gow](https://static-ai.asianetnews.com/images/01hjjj18ct7v8sz7gtqe451pwm/corona-case-1703577428378_363x203xt.png)
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.26): ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಕೋವಿಡ್ ವೈರಸ್ ಕೊಡಗು ಜಿಲ್ಲೆಯಲ್ಲೂ ಉಲ್ಭಣಗೊಳ್ಳಲು ಆರಂಭಿಸಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಹರಡುತ್ತಿರುವಂತೆ ಕೊಡಗು ಜಿಲ್ಲೆಯಲ್ಲೂ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಒಂದು ಪ್ರಕರಣ ದಾಖಲಾಗಿದ್ದು, ಕೊಡಗು ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ.
ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾ ವೈದ್ಯಾಧಿಕಾರಿ ಸತೀಶ್ ಕುಮಾರ್ ಅವರು ಕೋವಿಡ್ ಆಗಿದ್ದ ವ್ಯಕ್ತಿ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅವರನ್ನು ಇಲಾಖೆಯಿಂದ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದೇವೆ. ಅವರು ಸಹ ಗುಣಮುಖರಾಗಿ ಆರೋಗ್ಯವಾಗಿದ್ದಾರೆ.
ಶತಮಾನದ ಬೆಂಗಳೂರು-ಚಿಕ್ಕಬಳ್ಳಾಪುರ-ಕೋಲಾರ ಮಾರ್ಗದಲ್ಲಿ ಬರುವ ರೈಲ್ವೆ ನಿಲ್ದಾಣಗಳಿಗೆ ಹೊಸ ಜೀವಕಳೆ!
ಎಲ್ಲೆಡೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಎಲ್ಲಾ ಅಂತರರಾಜ್ಯ ಚೆಕ್ ಪೋಸ್ಟ್ ಗಳಲ್ಲಿ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಜಿಲ್ಲಾಸ್ಪತ್ರೆಯಲ್ಲೂ ಪ್ರತ್ಯೇಕ ಜ್ವರದ ಕ್ಲಿನಿಕ್ ತೆರೆಯಲಾಗಿದ್ದು, ಅಲ್ಲಿಯೂ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಒಂದು ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಮತ್ತೊಂದೆಡೆ ಆರೋಗ್ಯ ಇಲಾಖೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿದೆ. ಈ ಕುರಿತು ಜಿಲ್ಲಾಸ್ಪತ್ರೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡೀನ್ ಡಾ. ವಿಶಾಲ್ ಕುಮಾರ್ ಅವರು ಮಾತನಾಡಿದ್ದು, ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ನಾಲ್ಕು ವಾರ್ಡ್ ಸಿದ್ಧತೆ ಮಾಡಲಾಗಿದೆ. 4 ಕೊಠಡಿಗಳಲ್ಲಿ ಒಟ್ಟು 20 ಬೆಡ್ ಗಳನ್ನು ಕಾಯ್ದಿರಿಸಲಾಗಿದೆ.
ಎಲ್ಲಾ 20 ಬೆಡ್ಗಳಿಗೂ ಆಕ್ಸಿಜನ್ ಮತ್ತು ವೆಂಟಿಲೇಟರ್ ಇದ್ದು ಈಗಾಗಲೇ ಒಮ್ಮೆ ಪರಿಶೀಲನೆ ಮಾಡಲಾಗಿದೆ. ಒಂದು ವೇಳೆ ಹೆಚ್ಚಿನ ಸೋಂಕಿತರು ಕಂಡು ಬಂದಲ್ಲಿ ಮತ್ತಷ್ಟು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಕೊರತೆ ಇಲ್ಲದೆ ಚಿಕಿತ್ಸೆಗೆ ಸಿದ್ಧ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಪಿಪಿಇ ಕಿಟ್, ಮಾಸ್ಕ್, ಅಗತ್ಯ ಔಷಧಿಗಳನ್ನು ಶೇಖರಿಸಿಕೊಳ್ಳಲಾಗಿದೆ ಎಂದು ಸುವರ್ಣ ನ್ಯೂಸ್ ಗೆ ಡಾ. ವಿಶಾಲ್ ಕುಮಾರ್ ಹೇಳಿದ್ದಾರೆ.
ಹಿಜಾಬ್ ಪ್ರಸ್ತಾವನೆ ಎಲ್ಲಿದೆ? ನಾವು ಹಿಜಾಬ್ ಬಗ್ಗೆ ಯೋಚನೆಯೇ ಮಾಡಿಲ್ಲ: ಡಿಕೆಶಿ
ಆದರೆ ಕ್ರಿಸ್ಮಸ್ ರಜೆ ಇರುವುದರಿಂದ ಮತ್ತು ವರ್ಷಾಂತ್ಯ ಆಗಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಅಂದರೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಬರುತ್ತಿದ್ದಾರೆ. ಹೀಗೆ ಬರುತ್ತಿರುವ ಪ್ರವಾಸಿಗರಿಂದ ಕೊಡಗಿಗೆ ದೊಡ್ಡ ಕಂಟಕ ಎದುರಾಗುವ ಸಾಧ್ಯತೆ ಇದೆ. ಆದರೆ ಸರ್ಕಾರ ಒಂದು ದಿನಕ್ಕೆ ಕೇವಲ 125 ಜನರಿಗೆ ಕೋವಿಡ್ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆಗೆ ಹೇಳಿದೆ.
ಇದು ಯಾವು ರೀತಿಯ ಲೆಕ್ಕ. ಆಸ್ಪತ್ರೆ ಮತ್ತು ಚೆಕ್ ಪೋಸ್ಟ್ಗಳಲ್ಲಿ ಕೋವಿಡ್ ಚೆಕ್ ಮಾಡಲಾಗುತ್ತಿದ್ದು ಅದು ಕೂಡ ನಾಮಕಾವಸ್ಥೆಗೆ ಕೋವಿಡ್ ಟೆಸ್ಟ್ ಮಾಡಿದಂತೆ ಆಗುತ್ತಿದೆ ಎಂದು ಸ್ಥಳೀಯರು ಆರೋಗ್ಯ ಇಲಾಖೆ ಮತ್ತು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಎರಡನೇ ಅಲೆಯ ಸಂದರ್ಭ ಕೊಡಗು ಜಿಲ್ಲೆಯಲ್ಲಿ ನೂರಾರು ಜನರು ಪ್ರಾಣಬಿಟ್ಟರು.
ಈಗಲೂ ಅಂತಹ ಪರಿಸ್ಥಿತಿ ಬರದಂತೆ ಎಚ್ಚರ ವಹಿಸಬೇಕಾಗಿದೆ. ಇಲ್ಲದಿದ್ದರೆ ಜಿಲ್ಲೆಗೆ ಅಪಾಯ ತಪ್ಪಿದ್ದಲ್ಲ ಎಂದು ಕಾರ್ಮಿಕ ಮುಖಂಡರಾದ ಪಿ.ಆರ್. ಭರತ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಕೋವಿಡ್ ಇಲ್ಲದೆ ನಿರಾತಂಕದಿಂದ ಇದ್ದ ಜನರು ಈಗ ಆತಂಕಕ್ಕೆ ಒಳಗಾಗುವಂತೆ ಆಗಿದೆ.