ಮಕ್ಕಳಿಗೆ ಮಾರಣಾಂತಿಕವಾಗಬಲ್ಲ ಮೆದುಳು ಜ್ವರ ನಿಯಂತ್ರಣಕ್ಕಾಗಿ ದ.ಕ. ಜಿಲ್ಲೆಯಲ್ಲಿ ಡಿ.5ರಿಂದ ಜೆಇ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ಮಂಗಳೂರು (ಡಿ.4) : ಮಕ್ಕಳಿಗೆ ಮಾರಣಾಂತಿಕವಾಗಬಲ್ಲ ಮೆದುಳು ಜ್ವರ ನಿಯಂತ್ರಣಕ್ಕಾಗಿ ದ.ಕ. ಜಿಲ್ಲೆಯಲ್ಲಿ ಡಿ.5ರಿಂದ ಜೆಇ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಮೂಲಕ 1ರಿಂದ 15 ವರ್ಷದ ಮಕ್ಕಳಿಗೆ ಜೆಇ ಲಸಿಕೆ ನೀಡಲಾಗುವುದು. ಮುಂದೆ ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿ 9 ಮತ್ತು 16 ತಿಂಗಳ ವಯಸ್ಸಿನ ಮಕ್ಕಳಿಗೆ ಜೆಇ ಲಸಿಕೆಯನ್ನು ಎರಡು ಡೋಸ್‌ಗಳಾಗಿ ನೀಡಲಾಗುವುದು. ಇದು ಅತ್ಯಂತ ಸೇಫ್‌ ಲಸಿಕೆ ಎಂದರು.

Health: 15 ವರ್ಷದೊಳಗಿನ ಮಕ್ಕಳಿಗೆ ಮೆದುಳು ಜ್ವರ ಬಾಧೆ ಪೋಷಕರೇ ಎಚ್ಚರ

4,73,770 ಮಕ್ಕಳು: ಜಿಲ್ಲೆಯಲ್ಲಿ 3514 ಕೇಂದ್ರಗಳಲ್ಲಿ ಲಸಿಕಾ ಅಭಿಯಾನ ನಡೆಯಲಿದ್ದು, 4,73,770 ಮಕ್ಕಳನ್ನು ಗುರುತಿಸಲಾಗಿದೆ. ಮೊದಲನೇ ವಾರದಲ್ಲಿ ಎಲ್ಲ ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ಆಯೋಜಿಸಿ ಲಸಿಕಾಕರಣ ನಡೆಸಲಾಗುವುದು. ನಂತರದ ಎರಡು ವಾರಗಳಲ್ಲಿ ಎಲ್ಲ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾಕರಣ ನಡೆಸಲಾಗುತ್ತದೆ. ಡಿ. 5ರಂದು ಲೇಡಿಹಿಲ್‌ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಡಾ.ಕಿಶೋರ್‌ ಕುಮಾರ್‌ ಹೇಳಿದರು.

ಮಕ್ಕಳೇ ಟಾರ್ಗೆಟ್‌: ಮೆದುಳು ಜ್ವರವು ವೈರಾಣುವುನಿಂದ ಉಂಟಾಗುವ ರೋಗ. ಸೋಂಕಿರುವ ಹಂದಿಗಳಿಂದ, ಕೊಕ್ಕರೆಗಳು ಮತ್ತು ಕ್ಯುಲೆP್ಸ… ಜಾತಿಯ ಸೊಳ್ಳೆಯ ಮೂಲಕ ಮೆದುಳು ಜ್ವರ ಹರಡುತ್ತದೆ. ಮಾನವನಿಗೆ ಇದು ಆಕಸ್ಮಿಕವಾಗಿ ತಗಲುತ್ತದೆ. ಈ ರೋಗಕ್ಕೆ ಹೆಚ್ಚಾಗಿ ಮಕ್ಕಳೇ ತುತ್ತಾಗುತ್ತಾರೆ. ರೋಗ ತಗುಲಿದ ಶೇ.20ರಿಂದ 30ರಷ್ಟುಮಕ್ಕಳು ಮರಣ ಹೊಂದುವ ಸಂಭವವಿದೆ. ಬದುಕಿ ಉಳಿದ ಶೇ.40ರಿಂದ 50 ಮಂದಿಯಲ್ಲಿ ನರ ದೌರ್ಬಲ್ಯ, ಬುದ್ಧಿಮಾಂದ್ಯತೆ ಮುಂತಾದ ಪರಿಣಾಮಗಳು ಉಂಟಾಗುತ್ತವೆ. ಹಾಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಲಸಿಕೆ ಪಡೆಯುವುದು ಅಗತ್ಯ ಎಂದು ಅವರು ಹೇಳಿದರು.

ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈ ನಡುಕ, ಎಚ್ಚರ ತಪ್ಪುವುದು ರೋಗ ಲಕ್ಷಣಗಳಾಗಿದ್ದು, ಖಾಯಿಲೆ ಉಲ್ಭಣಿಸಿ ಮೆದುಳು ಉತಗೊಂಡು ಸಾವು ಸಂಭವಿಸಬಹುದು ಎಂದು ಡಿಎಚ್‌ಒ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಡಾ. ರಾಜೇಶ್‌ ಇದ್ದರು.

ಜಿಲ್ಲೆಯಲ್ಲಿ ಮೂರು ಪ್ರಕರಣ

ದ.ಕ. ಜಿಲ್ಲೆಯಲ್ಲಿ 2018, 2019, 2020ರಲ್ಲಿ ತಲಾ ಒಂದರಂತೆ ಒಟ್ಟು ಮೂರು ಮೆದುಳು ಜ್ವರ ಪ್ರಕಣಗಳು ಧೃಡಪಟ್ಟಿವೆ. ಆದರೆ ಆ ಮಕ್ಕಳ ಪ್ರಾಣಕ್ಕೆ ಅಪಾಯ ಸಂಭವಿಸಿಲ್ಲ. ಈ ಮೂವರಲ್ಲಿ ಇಬ್ಬರು ದ.ಕ. ಜಿಲ್ಲೆಯವರೇ ಆಗಿದ್ದರೆ, ಇನ್ನೊಂದು ಮಗು ಬೇರೆ ಜಿಲ್ಲೆಯಿಂದ ವಲಸೆ ಬಂದಿದ್ದಾಗಿತ್ತು ಎಂದು ಡಿಎಚ್‌ಒ ತಿಳಿಸಿದರು.

ಮಕ್ಕಳಲ್ಲಿ ಹೆಚ್ಚುತ್ತಿರುವ ಮೆದುಳು ಜ್ವರ: 10 ಜಿಲ್ಲೆಗಳಲ್ಲಿ ಜಪಾನೀಸ್‌ ಎನ್‌ಸೆಫಲೈಟಿಸ್‌ ಲಸಿಕೆ ಅಭಿಯಾನ

ಜಿಲ್ಲೆಯ 12 ಕಡೆ ನಮ್ಮ ಕ್ಲಿನಿಕ್‌

ರಾಜ್ಯ ಸರ್ಕಾರದ ನೂತನ ಯೋಜನೆ ನಮ್ಮ ಕ್ಲಿನಿಕ್‌ ದ.ಕ. ಜಿಲ್ಲೆಯ 12 ಕಡೆಗಳಲ್ಲಿ ಆರಂಭವಾಗಲಿದೆ. ಈಗಾಗಲೇ ಇದಕ್ಕೆ ಬೇಕಾದ ವೈದ್ಯರು, ಇತರ ಸಿಬ್ಬಂದಿಗಳ ನೇಮಕಾತಿ ನಡೆದಿದ್ದು, ಉದ್ಘಾಟನೆಯಷ್ಟೆಬಾಕಿ ಇದೆ. ಮಂಗಳೂರು ನಗರದ ಬೊಕ್ಕಪಟ್ಣ, ಹೊಯ್ಗೆಬಜಾರ್‌, ಸೂಟರ್‌ ಪೇಟೆ, ಕುಂಜತ್‌ ಬೈಲ್‌, ಮೀನಕಳಿಯ, ಪಚ್ಚನಾಡಿ, ಕೋಡಿಕಲ್‌, ಗ್ರಾಮಾಂತರದಲ್ಲಿ ಮೂಡುಬಿದಿರೆಯ ಗಂಟಾಲ್‌ಕಟ್ಟೆ, ಉಳ್ಳಾಲದ ಪೆರ್ಮನ್ನೂರು, ಪುತ್ತೂರು, ಸುಳ್ಯ, ಕಡಬಗಳಲ್ಲಿ ನಮ್ಮ ಕ್ಲಿನಿಕ್‌ ಆರಂಭವಾಗಲಿದೆ ಎಂದರು.