ಚಿಂತನೆ ಮತ್ತು ಅಭ್ಯಾಸ ಬದುಕನ್ನು ಹಗುರ ಮಾಡುತ್ತವೆ. ನಿತ್ಯವೂ ತಲೆ ಮೇಲೆ ಬಂಡೆಯನ್ನು ಹೊತ್ತಂತೆ ದಿನದೂಡುವ ನಾವು ನಮ್ಮನ್ನು ಹಗುರಾಗಿಸಬೇಕಲ್ವಾ.. ನಮ್ಮ ನಡಿಗೆಯಲ್ಲಿ ಪ್ರಯಾಸಕ್ಕಿಂತ ಆಹ್ಲಾದ ಇರಬೇಕಲ್ವಾ.. ಅಂಥಾ ಹತ್ತು ಆಲೋಚನೆಗಳು ಇಲ್ಲಿವೆ. ನೀವೂ ಈ ಬಗ್ಗೆ ಚಿಂತಿಸಿ.

1. ಸಮಯವನ್ನು ನಿಮ್ಮ ಹಿಂಬಾಲಕನನ್ನಾಗಿಸಿ. ನೀವು ಸಮಯದ ಹಿಂದೆ ಬೀಳಬೇಡಿ. ಈ ಟೈಮ್‌ಗೆ ಇಷ್ಟುಕೆಲಸ ಮುಗಿಸಲೇ ಬೇಕು, ಅಯ್ಯೋ, ಲೇಟಾಯ್ತು. ಇಷ್ಟೊತ್ತಿಗೆ ನಾನಲ್ಲಿ ಇರಬೇಕಿತ್ತು. ಮನೆ ಕೆಲಸ, ಆಫೀಸ್‌ ಕೆಲಸ, ಮಕ್ಕಳ ಹೋಮ್‌ ವರ್ಕ್... ಹೀಗೆ ಉದ್ವೇಗಕ್ಕೊಳಗಾಗಬೇಡಿ. ಶಾಂತವಾಗಿ ಒಂದರ ಹಿಂದೊಂದು ಕೆಲಸ ಮುಗಿಸುತ್ತಾ ಬನ್ನಿ.

Add Asianetnews Kannada as a Preferred SourcegooglePreferred

ನಮ್ಮನ್ನು ಸಂತೋಷದಿಂದ ದೂರ ಕೊಂಡೊಯ್ಯುವ ಫೋಮೋ

2. ಗಿಲ್ಟ್‌ ಬೇಡ. ನಿಮ್ಮ ಆತ್ಮವಿಶ್ವಾಸ, ಸಾಮರ್ಥ್ಯವನ್ನು ನಿಮ್ಮ ಕೈಯಾರೆ ಹಿಸುಕಿ ಹಾಕ್ಬೇಕು ಅಂದರೆ ಮಾತ್ರ ಗಿಲ್ಟ್‌ ಅನ್ನು ಪೋಷಿಸಿ. ಉಳಿದಂತೆ ಆ ವಿಷಯ ಗೊತ್ತಿಲ್ಲ ಅಂದರೆ ಕಲಿಯೋ ಪ್ರಯತ್ನ ಮಾಡಿ. ಆದರೂ ಮಾಡಕ್ಕಾಗಲಿಲ್ಲ ಅಂದರೆ ಆಗಲಿಲ್ಲ, ಕ್ಷಮಿಸಿ ಅಂತ ಹೇಳಿ. ಆದರೆ ಈ ಕಾರಣಕ್ಕಾಗಿ ಕೀಳರಿಮೆ ಪಟ್ಟುಕೊಳ್ಳೋದು ಬೇಡ.

3. ವಸ್ತುಸ್ಥಿತಿ ಬೇರೆ ಇರುತ್ತದೆ, ನಾವು ಗ್ರಹಿಸೋ ವಸ್ತು ಸ್ಥಿತಿ ಬೇರೆ ಇರುತ್ತದೆ ಅನ್ನೋದು ಗೊತ್ತಿರಲಿ. ಒಬ್ಬ ವ್ಯಕ್ತಿಯ ಮಾತು, ನಡೆಗಳಿಂದ ಅವು ಹೀಗೆ ಅಂತ ಜಡ್ಜ್‌ ಮಾಡಿ ಮಾತನಾಡಿಸಲು ಹೊರಡುತ್ತೇವೆ. ಆದರೆ ವಾಸ್ತವದಲ್ಲಿ ಆ ವ್ಯಕ್ತಿ ನಿಮ್ಮ ಗ್ರಹಿಕೆಗಿಂತ ಭಿನ್ನವಾಗಿರುತ್ತಾನೆ. ಆದರೆ ನಿಮ್ಮ ಈ ಜಡ್ಜ್‌ಮೆಂಟ್‌ನಿಂದ ನೀವು ಮತ್ತೇನನ್ನೋ ಕಳೆದುಕೊಂಡು ಬಿಡ್ತೀರಿ. ಗ್ರಹಿಕೆಯ ಮೇಲೇ ಎಲ್ಲ ನಿರ್ಧರಿಸಲು ಹೊರಡಬೇಡಿ, ಬೇರೆ ಬೇರೆ ಆ್ಯಂಗಲ್‌ಗಳ ಬಗ್ಗೆ ಯೋಚಿಸಿ.

4. ಬ್ರೇಕ್‌-ಅಪ್‌ ಆಯ್ತು, ಹುಡುಗ ಅಥವಾ ಹುಡುಗಿ ಮೋಸ ಮಾಡಿದ್ರು ಅಂತಾದಾಗ ಸಿಟ್ಟು, ಆಕ್ರೋಶ, ಸೇಡಿನ ಭಾವ ಬರೋದು ಸಹಜ, ಆದರೆ ಈ ನೆಗೆಟಿವ್‌ ವಿಷಯಗಳಿಂದ ಯಾವ ಪ್ರಯೋಜನವೂ ಇಲ್ಲ. ಇವು ಪರಿಸ್ಥಿತಿಯನ್ನು ಮತ್ತಷ್ಟುಹಾಳು ಮಾಡುತ್ತವೆ. ಇಂಥಾ ಟೈಮ್‌ನಲ್ಲಿ ನಿಮ್ಮ ನೋವನ್ನು ಒಪ್ಪಿಕೊಂಡು ಬಿಡಿ. ಅದರಿಂದ ಸಡನ್ನಾಗಿ ಹೊರಬರುವ ಧಾವಂತ ಬೇಡ, ನಿಮ್ಮ ಆಪ್ತರಲ್ಲಿ ನೋವು ಹೇಳಿಕೊಳ್ಳಿ. ತೀವ್ರವಾಗಿ ಯಾವುದಾದರೂ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ.

ಯಬ್ಬೇ! ಜಗತ್ತಿನ ಭಯಾನಕ ಆಹಾರಗಳಿವು

5. ನಮ್ಮ ಬಗ್ಗೆ ನಮಗೆ ಅರಿವಿದ್ದರೆ ನಮ್ಮಲ್ಲೊಂದು ಜೀವಂತಿಕೆ ಇರುತ್ತದೆ. ನಮ್ಮ ತಾಕತ್ತೇನು ಅನ್ನೋದು ಸರಿಯಾಗಿ ಗೊತ್ತಿದ್ದರೆ ಅಥವಾ ನಮ್ಮಲ್ಲಿರುವ ಸಮಸ್ಯೆಗಳೇನು ಅನ್ನೋದರ ಅರಿವಿದ್ದರೆ ನಾವು ಸನ್ನಿವೇಶವನ್ನು ಎದುರಿಸೋದು ಸುಲಭ. ಈ ಖಚಿತತೆ ನಮ್ಮನ್ನು ಗೊಂದಲಗಳಿಂದ ಪಾರು ಮಾಡುತ್ತದೆ.

6. ಸೋಲು ಅನ್ನೋದೆಲ್ಲ ಇರಲ್ಲ. ಗೆಲುವು ಅನ್ನೋದೂ ಸುಳ್ಳು. ಮನಸ್ಸಿಗೆ ಆನಂದ, ಖುಷಿ ಕೊಡುವ, ಇತರರಿಗೆ ಅಥವಾ ನಮಗೆ ಹಾನಿ ಮಾಡದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳೋಣ. ನಾನೊಬ್ಬ ಅಥ್ಲೀಟ್‌ ಅಂತಿಟ್ಟುಕೊಂಡರೆ, ನಾನು ನನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳೋದರತ್ತ ಗಮನ ಕೊಡಬೇಕೇ ಹೊರತು, ಯಾರೋ ಇನ್ನೊಬ್ಬನ ವಿರುದ್ಧ ಗೆಲುವು ಸಾಧಿಸಿಕೊಳ್ಳೋದರಲ್ಲಿ ಅಲ್ಲ.

7. ಇಗೋಗಿಂತ ದೊಡ್ಡ ಕಾಯಿಲೆ ಇಲ್ಲ. ಇದು ಕೊರೋನಾಗಿಂತ ಪ್ರಾಣಾಂತಿಕ. ಕೊರೋನಾ ಬಂದ್ರೂ ಬೇಗ ಚೇತರಿಸಿಕೊಂಡು ಬಿಡಬಹುದು. ಆದರೆ ಈ ಅಹಂ ಅನ್ನೋ ವೈರಸ್‌ ಕೊರೋನಾಗಿಂತ ವೇಗವಾಗಿ ದೇಹದಲ್ಲಿ ಬೆಳೆಯಬಲ್ಲದು. ನಮ್ಮೆಲ್ಲ ವಿವೇಕವನ್ನೂ ಕ್ಷಣಾರ್ಧದಲ್ಲಿ ಬರ್ಖಾಸ್ತು ಮಾಡಬಲ್ಲದು. ನಿಮ್ಮೊಳಗೆ ಈ ವೈರಸ್‌ ಇದ್ರೆ ಧ್ಯಾನ, ಆಧ್ಯಾತ್ಮದ ಮೂಲಕ ನಿವಾರಿಸುವ ಪ್ರಯತ್ನ ಮಾಡಿ.

8. ಹಳೆಯ ನೆನಪುಗಳ ಭಾರ ಹೆಚ್ಚಿದ್ದರೆ ಇಂದಿನ ದಿನದ ನಡಿಗೆ ಪ್ರಯಾಸಕರವಾಗಿರುತ್ತದೆ. ಹಳೆಯ ನೆನಪು, ನೋವು, ಕಸಗಳನ್ನು ಆಗಾಗ ಗುಡಿಸಿ ಮನಸ್ಸನ್ನು ಕ್ಲೀನ್‌ ಮಾಡುತ್ತಾ ಇರಬೇಕು.

ಮಳೆಗಾಲದಲ್ಲಿ ಆರೋಗ್ಯ ಸಂರಕ್ಷಣೆಗೆ ಏನೆಲ್ಲ ಮಾಡ್ಬೇಕು ಗೊತ್ತಾ? 

9. ಅರಣ್ಯದಲ್ಲಿ ಕೆಲವು ಮರಗಳು ಮಾತ್ರ ಬೇರೆ ಮರಗಳ ಮೇಲೆ ಬೀಳೋದಿಲ್ಲ ಅನ್ನುವ ನುಡಿಗಟ್ಟಿದೆ. ಇದು ಸಾಧ್ಯಾನ ಅಂತ ಕೇಳಬೇಡಿ. ಆದರೆ ನಿಮ್ಮಿಂದ ಸಾಧ್ಯವಾದರೆ ಇತರರಿಗೆ ನೋವಾಗದ ಹಾಗೆ ಬದುಕಿ, ಬೀಳುವ ಹೊತ್ತಿಗೂ ನೋವಾಗದ ಹಾಗೆ ನಡೆದುಕೊಳ್ಳಿ.

10. ಹಲ್ಲು ನೋವಾದಾಗ ನಾಲಿಗೆ ನೋವಿನ ಜಾಗದ ಕಡೆಗೇ ಹೆಚ್ಚೆಚ್ಚು ಹೋಗುತ್ತದೆ, ಇದರಿಂದ ನೋವು ಮತ್ತೂ ಹೆಚ್ಚಾಗುತ್ತದೆ. ಇಲ್ಲಿ ನಾಲಿಗೆ ಕಂಟ್ರೋಲ್‌ ಮಾಡೋದು ಕಷ್ಟ, ಹಲ್ಲುನೋವು ಸರಿ ಪಡಿಸೋದೇ ಒಳ್ಳೆಯದು.