ಪ್ರವಾಹ ಮಧ್ಯೆಯೂ ನೂರು ದಿನಗಳಲ್ಲಿ ಸಾಕಷ್ಟುಅಭಿವೃದ್ಧಿ| ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಚಾಲನೆ|ಜಿಲ್ಲೆಗೆ ಹಸಿಮೆಣಸಿನಕಾಯಿ ಬೆಳೆಗೆ ವಿಮಾ ಪರಿಹಾರ 702 ಜನ ರೈತರಿಗೆ 2.01 ಕೋಟಿ ಪರಿಹಾರ ಮಂಜೂರು| ತಾಲೂಕಿನ 60 ರೈತರಿಗೆ 11.28 ಲಕ್ಷ ರೂ ವಿಮಾ ಪರಿಹಾರ|

ಹಾನಗಲ್ಲ[ನ.4]: ಭೀಕರ ಮಳೆ- ನೆರೆ ಹಾವಳಿಯ ಸಂತ್ರಸ್ತರಿಗೆ ಪರಿಹಾರ ನೀಡುವುದರ ನಡುವೆಯೂ ರಾಜ್ಯದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ನೂರು ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದು, ಹಾವೇರಿ ಲೋಕಸಭಾ ವ್ಯಾಪ್ತಿಗೆ ನೀರಾವರಿ ಯೋಜನೆಗೆ ಸಾವಿರ ಕೋಟಿ ರು ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ತಾಲೂಕಿನ ಹಲವು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಹಾವೇರಿ ಜಿಲ್ಲೆಗೆ ಹಸಿಮೆಣಸಿನಕಾಯಿ ಬೆಳೆಗೆ ವಿಮಾ ಪರಿಹಾರ 702 ಜನ ರೈತರಿಗೆ 2.01 ಕೋಟಿ ಪರಿಹಾರ ಮಂಜೂರಾಗಿದ್ದು, ತಾಲೂಕಿನ 60 ರೈತರಿಗೆ 11.28 ಲಕ್ಷರೂ ವಿಮಾ ಪರಿಹಾರ ಸಿಗಲಿದೆ. ಇದರೊಂದಿಗೆ ಮಾವಿಗೆ ವಿಮಾ ಯೋಜನೆಯಲ್ಲಿ ಜಿಲ್ಲೆಗೆ 9 ಕೋಟಿ, ತಾಲೂಕಿನ 1699 ರೈತರಿಗೆ 8 ಕೋಟಿ ರೂ ಪರಿಹಾರ ಘೋಷಣೆಯಾಗಿದೆ. ಪ್ರಕೃತಿ ವಿಕೋಪ ಪರಿಹಾರದಲ್ಲಿ ಹಿಂದಿನ ಯಾವ ಅತಿವೃಷ್ಟಿಯ ಅವಧಿಯಲ್ಲೂ ಇಷ್ಟೊಂದು ದೊಡ್ಡ ಪ್ರಮಾಣದ ಪರಿಹಾರವನ್ನು ಬೇರಾವ ರಾಜ್ಯದಲ್ಲೂ ಘೋಷಿಸಿಲ್ಲ. ಈಗ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ನೀಡುತ್ತಿರುವುದು ಸರ್ವಕಾಲಿಕ ದಾಖಲೆಯಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಯೋಜನೆಗಳನ್ನು ನೀಡಿದ್ದಾರೆ. ತಾಲೂಕಿಗೆ ಅತ್ಯಂತ ಅವಶ್ಯವಾಗಿರುವ 2 ನೀರಾವರಿ ಯೋಜನೆಗಳು ಮಂಜೂರಾಗಿದ್ದು, ಇದಕ್ಕಾಗಿ ಮೊದಲ ಕಂತು ಬಿಡುಗಡೆಯಾಗಿದೆ. ಕೆಲವೇ ದಿನಗಳಲ್ಲಿ ಸಿಎಂ ಬಿಎಸ್‌ವೈ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯಿಂದ ಬೊಮ್ಮನಹಳ್ಳಿ ಜಿಪಂ ಕ್ಷೇತ್ರದ ಎಲ್ಲ ಗ್ರಾಮಗಳ ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದರು.

ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪುರ, ಗ್ರಾಪಂ ಅಧ್ಯಕ್ಷೆ ಕವಿತಾ ಹಾವಣಗಿ, ಉಪಾಧ್ಯಕ್ಷೆ ಗೀತಾ ಚಿಕ್ಕಣಗಿ, ಎಪಿಎಂಸಿ ಅಧ್ಯಕ್ಷೆ ಶೇಖಣ್ಣ ಮಹರಾಜಪೇಟೆ, ಅಜ್ಜಪ್ಪ ಮಲ್ಲಮ್ಮನವರ, ಬಸನಗೌಡ ಪಾಟೀಲ, ಫಕ್ಕೀರಪ್ಪ ಜಿಗಳಿಕೊಪ್ಪ, ಪ್ರಶಾಂತ ಸುಕಾಲಿ, ರೇಣವ್ವ ಸವಣೂರ, ಅಂಜಕ್ಕ ರಜಪೂತ, ಸರೋಜಾ ಕಮ್ಮಾರ, ಸಿದ್ದನಗೌಡ ಪಾಟೀಲ, ಸಿದ್ದಪ್ಪ ಜೋಗಿ ಮೊದಲಾದವರು ಕಾರ್ಯಕ್ರಮದಲ್ಲಿದ್ದರು.

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ:

ತಾಲೂಕಿನ ನೆಲ್ಲಿಕೊಪ್ಪ ಗ್ರಾಮದಲ್ಲಿ 12 ಲಕ್ಷ ವೆಚ್ಚದ ಅಂಬೇಡ್ಕರ್‌ ಭವನ ಕಾಮಗಾರಿ, ಬಮ್ಮನಹಳ್ಳಿಯ ಎಸ್‌ಸಿ ಕಾಲೋನಿಯಲ್ಲಿ 28 ಲಕ್ಷ ವೆಚ್ಚದ ಕಾಂಕ್ರೀಟ್‌ ರಸ್ತೆ, ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ 15.75 ಲಕ್ಷ ಕೊಠಡಿ ನಿರ್ಮಾಣ ಕಾಮಗಾರಿ, ಗುಡಗುಡಿ ಗ್ರಾಮದಲ್ಲಿ 35 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಬೈಚವಳ್ಳಿ ಗ್ರಾಮದಲ್ಲಿ 35 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ, ಹಿರೇಕಾಂಶಿ ಗ್ರಾಮದಲ್ಲಿ 46.43 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಅಲೆಮಾರಿ ಜನಾಂಗಗಳ ಕಾಲೋನಿ ಅಭಿವೃದ್ಧಿಯಡಿ 5 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಗೊಂದಿ ಗ್ರಾಮದಲ್ಲಿ 14 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಹೊಂಕಣ ಗ್ರಾಮದಲ್ಲಿ 20 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ತಿಳವಳ್ಳಿ ಗ್ರಾಮದಲ್ಲಿ 28 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ, ಬೈಚವಳ್ಳಿ, ಹಿರೇಕಾಂಶಿ, ಗೊಂದಿ ಹಾಗೂ ಹೊಂಕಣ ಗ್ರಾಮಗಳಲ್ಲಿ ತಲಾ 10.75 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ, ಗೊಂದಿಯಲ್ಲಿ ರೈತ ಸಂಪರ್ಕ ಕೇಂದ್ರ, ತಿಳವಳ್ಳಿಯಲ್ಲಿ 12 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ, 17.50 ಲಕ್ಷ ವೆಚ್ಚದಲ್ಲಿ ನಿರ್ಮಿರುವ ಪಂಚಾಯತಿ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.