ಹಾರಿಕಟ್ಟೆ ತಾಂಡಾಕ್ಕೆ ನೂತನ ಬಸ್‌ ಸಂಚಾರ| ಉತ್ತರ ಕರ್ನಾಟಕ ರೈತ ಸಂಘದಿಂದ ಬಸ್‌ ಸಂಚಾರಕ್ಕೆ ಚಾಲನೆ| ತಾಲೂಕಿನ ಹಾರಿಕಟ್ಟೆ ತಾಂಡಾದಲ್ಲಿ ನೂರಾರು ಕುಟುಂಬಗಳು ಪಟ್ಟಣಕ್ಕೆ ತೆರಳಲು 3 ಕಿ.ಮೀ ನಡೆದುಕೊಂಡು ಬರಬೇಕಿತ್ತು| ರಟ್ಟೀಹಳ್ಳಿಯಿಂದ ಹಿರೇಕೆರೂರ ನಡುವಿನ ಅಂತರ 16 ಕಿಮೀ ಇದ್ದು 22 ರು. ನಿಗದಿ| ಪ್ರಯಾಣಿಕರಿಗೆ ಹೊರೆ| ಹೀಗಾಗಿ 22ರಿಂದ 20 ನಿಗದಿ| 

ರಟ್ಟೀಹಳ್ಳಿ(ಅ.19): ನಮಗೆ ಸ್ವಾತಂತ್ರ ಸಿಕ್ಕು ಏಳು ದಶಕ ಕಂಡರೂ ಇನ್ನೂ ಕೆಲವು ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಅದರಲ್ಲಿ ಹಾರಿಕಟ್ಟೆ ತಾಂಡಾ ಕೂಡ ಒಂದಾಗಿದೆ. ಶುಕ್ರವಾರದಿಂದ ನೂತನ ಮಾರ್ಗವಾಗಿ ರಟ್ಟೀಹಳ್ಳಿ ವಾಯಾ ಅಣಜಿ, ನಾಗವಂದ ಹಾರಿಕಟ್ಟೆ ಗ್ರಾಮಕ್ಕೆ ಬಸ್‌ ಬಿಡಲಾಗುತ್ತಿದೆ ಎಂದು ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಹೇಳಿದರು.

Add Asianetnews Kannada as a Preferred SourcegooglePreferred

ರಟ್ಟೀಹಳ್ಳಿ ಬಸ್‌ ನಿಲ್ದಾಣದಲ್ಲಿ ಉತ್ತರ ಕರ್ನಾಟಕ ರೈತ ಸಂಘದ ಹೋರಾಟದ ಫಲವಾಗಿ ತಾಲೂಕಿನ ಹಾರಿಕಟ್ಟೆ ತಾಂಡಾಕ್ಕೆ ನೂತನ ಬಸ್‌ಗೆ ರೈತ ಸಂಘದಿಂದ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಹಾರಿಕಟ್ಟೆ ತಾಂಡಾದಲ್ಲಿ ನೂರಾರು ಕುಟುಂಬಗಳು ಪಟ್ಟಣಕ್ಕೆ ತೆರಳಲು 3 ಕಿ.ಮೀ ನಡೆದುಕೊಂಡು ಬರಬೇಕಿತ್ತು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿರಲಿಲ್ಲ. ನಮ್ಮ ಸಂಘಟನೆಯವರ ನಿರಂತರ ಹೋರಾಟದ ಫಲವಾಗಿ ನೂತನ ಬಸ್‌ ಸಂಚಾರ ಆರಂಭವಾಗುತ್ತಿದೆ. ಅಲ್ಲದೆ ರಟ್ಟೀಹಳ್ಳಿಯಿಂದ ಹಿರೇಕೆರೂರ ನಡುವಿನ ಅಂತರ 16 ಕಿಮೀ ಇದ್ದು 22 ರು. ನಿಗದಿಮಾಡಿದ್ದು ಅದು ಪ್ರಯಾಣಿಕರಿಗೆ ಹೊರೆಯಾಗಲಿದೆ. ಹೀಗಾಗಿ 22ರಿಂದ 20 ನಿಗದಿ ಮಾಡಲಾಗಿದೆ.

ರಟ್ಟೀಹಳ್ಳಿ ಬಸ್‌ ನಿಲ್ದಾಣದಲ್ಲಿ ಈ ಮೊದಲು ಒಬ್ಬ ಸಾರಿಗೆ ನಿಯಂತ್ರಕರಿದ್ದು ಹಲವು ತೊಂದರೆಗಳಾಗುತ್ತಿದ್ದು, ಅದನ್ನು ಮನಗಂಡು ಇನ್ನೊಬ್ಬ ಸಾರಿಗೆ ನಿಯಂತ್ರಕರ ನೇಮಕಕ್ಕೆ ಒತ್ತಾಯಿಸಿದ್ದರಿಂದ ಇಬ್ಬರು ಸಾರಿಗೆ ನಿಯಂತ್ರಕರ ಸೇವೆ ನಮಗೆ ದೊರೆಯುತ್ತದೆ. ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಿದ ವ್ಯವಸ್ಥಾಪಕ ನಿರ್ದೇಶಕರಿಗೆ, ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಚಂದ್ರಶೇಖರ ಉಪ್ಪಿನ, ತಾಲೂಕು ಅಧ್ಯಕ್ಷ ಜಗದೀಶ ಕುಸಗೂರು, ಮುಖಂಡರಾದ ವಿಜಯಕುಮಾರ ಎನ್‌. ಕೊಣನತೆಲೆ, ತೇಜಪ್ಪ ಬಸರಿಹಳ್ಳಿ, ಸುರೇಶ ಯರಳ್ಳಿ, ಕಾಳೇಪ್ಪ ಸಿ. ಯರಳ್ಳಿ, ರೇವಣೆಪ್ಪ ದು. ಸರವಂದ್‌, ವಿಠಲನಾಯ್ಕ ಲಮಾಣಿ, ಪೀರಪ್ಪ ಲಮಾಣಿ, ನಾಗರಾಜ ತಾ. ಆರೀಕಟ್ಟಿ, ನಾಗರಾಜ ಕು. ಆರೀಕಟ್ಟಿ, ಭೀಮಾ ನಾಯ್ಕ. ರಾ. ಆರೀಕಟ್ಟಿ, ಷರೀಪಸಾಹೇಬ್‌, ಉಕ್ಕಡಗಾತ್ರಿ, ಅಖೀಲೇಶ ಹ. ದಿವಿಗಿಹಳ್ಳಿ, ಆಂಜನೇಯ ಗಾಳೇರ, ಇತರರು ಉಪಸ್ಥಿತರಿದ್ದರು.