ಲಾಹೋರ್ನಲ್ಲಿ ಸರಣಿ ಸ್ಫೋಟ, ಕಂಗೆಟ್ಟ ಪಾಕಿಸ್ತಾನ
ಪಾಕಿಸ್ತಾನದ ಲಾಹೋರ್ನಲ್ಲಿ ಸ್ಫೋಟಗಳು ವರದಿಯಾಗಿವೆ. ಈ ಘಟನೆಯು ಲಾಹೋರ್ನ ವಾಲ್ಟನ್ ವಿಮಾನ ನಿಲ್ದಾಣದ ಬಳಿ ಸಂಭವಿಸಿದೆ ಮತ್ತು ಡ್ರೋನ್ ದಾಳಿ ಎಂದು ಶಂಕಿಸಲಾಗಿದೆ. ಈ ದಾಳಿ ಯಾರು ನಡೆಸಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಭಾರತವು ಸಿಂದೂರ ಎಂಬ ಹೆಸರಿನ ಕಾರ್ಯಾಚರಣೆಯಡಿ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸ್ಥಳಗಳಿಗೆ ನುಗ್ಗಿ ಹೊಡೆದ ಬಳಿಕ ಒಂದು ದಿನದ ನಂತರ ಶತ್ರು ದೇಶದ ಲಾಹೋರ್ ನಗರದಲ್ಲಿ ಭಾರೀ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಒಟ್ಟು ಮೂರು ಸ್ಫೋಟಗಳು ನಡೆದಿದೆ. ಈ ಸ್ಫೋಟಗಳು ಲಾಹೋರ್ನ ವಾಲ್ಟನ್ ವಿಮಾನ ನಿಲ್ದಾಣದ ಹತ್ತಿರದ ಗೋಪಾಲ್ ನಗರ ಮತ್ತು ನಸೀರಾಬಾದ್ ಎಂಬ ಪ್ರದೇಶಗಳಲ್ಲಿ ಸಂಭವಿಸಿದೆ ಎಂದು ಪಾಕ್ ಸ್ಥಳೀಯ ಮಾಧ್ಯಮಗಳು ಮತ್ತು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿವೆ. ದಾಳಿ ಯಾರು ಮಾಡಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಈವರೆಗೆ ತಿಳಿದುಬಂದಿಲ್ಲ.
ಜನರು ಭಯಭೀತರಾಗಿ ಓಡುತ್ತಿರುವ ದೃಶ್ಯಗಳು ಮತ್ತು ದಟ್ಟ ಹೊಗೆಯು ಮೋಡಗಳಂತೆ ಕಂಡು ಬಂದಿರುವ ವಿಡಿಯೋ ವೈರಲ್ ಆಗಿದೆ. ಈ ಪ್ರದೇಶವು ಲಾಹೋರ್ನ ಪ್ರಮುಖ ವ್ಯಾಪಾರ ಸ್ಥಳ ಹಾಗೂ ಪಾಕ್ ಸೇನೆಯ ಸ್ಥಳಕ್ಕೆ ಸಮೀಪದಲ್ಲಿದೆ. ಪೊಲೀಸರ ಮಾಹಿತಿ ಪ್ರಕಾರ, ಈ ಸ್ಫೋಟವು ಸುಮಾರು 5-6 ಅಡಿ ಉದ್ದದ ಡ್ರೋನ್ನಿಂದ ಆಗಿರಬಹುದು. ಆ ಡ್ರೋನ್ ಅನ್ನು ಹೊಡೆದು ಕೆಳಗೆ ಬೀಳಿಸಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಇಷ್ಟರವರೆಗೆ ಯಾವುದೇ ವ್ಯಕ್ತಿಯ ಸಾವಿನ ಅಥವಾ ಸಾರ್ವಜನಿಕ ಆಸ್ತಿಗೆ ಹಾನಿಯ ವರದಿ ಬಂದಿಲ್ಲ.
ಭಾರತದ ಸಿಂದೂರ ಆಪರೇಶನ್ ಬಳಿಕ, ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ಸಿಯಾಲ್ಕೋಟ್ನ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಓಡಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ರಾಯಿಟರ್ಸ್ ಪ್ರಕಾರ, ಪಾಕಿಸ್ತಾನದ ವಿಮಾನಯಾನ ಇಲಾಖೆ, ಲಾಹೋರ್ ಮತ್ತು ಸಿಯಾಲ್ಕೋಟ್ನ ವಿಮಾನ ನಿಲ್ದಾಣಗಳಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಸೇವೆಗಳು ಇರುವುದಿಲ್ಲ ಎಂದು ತಿಳಿಸಿದೆ. ಕರಾಚಿಯ ವಿಮಾನ ನಿಲ್ದಾಣದ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಲಭ್ಯವಿಲ್ಲ.
ಬುಧವಾರ ನಸು ರಾತ್ರಿ ಭಾರತ ನಡೆಸಿದ ‘ಸಿಂದೂರ್’ ಎಂಬ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಮತ್ತು ವಾಯುಪಡೆ (ಐಎಎಫ್) ಒಟ್ಟಾಗಿ ದಾಳಿ ನಡೆಸಿದವು. ಈ ದಾಳಿಯಲ್ಲಿ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಸಂಘಟನೆಗಳ ಒಂಬತ್ತು ಶಿಬಿರಗಳನ್ನು ನಾಶಮಾಡಲಾಯಿತು.ಈ ದಾಳಿಗೆ ರಫೇಲ್ ಯುದ್ಧವಿಮಾನಗಳನ್ನು ಬಳಸಲಾಗಿತ್ತು. ಗಾಳಿಯಿಂದ ಮತ್ತು ನೆಲದಿಂದ ಕ್ಷಿಪಣಿಗಳನ್ನು ಉಡಾಯಿಸಿ ದಾಳಿ ನಡೆಸಲಾಯಿತು. ಇದರಿಂದ 80-90 ಭಯೋತ್ಪಾದಕರು ಸತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಭಾರತ ಈ ದಾಳಿಯನ್ನು ಬಹಳ ಜವಾಬ್ದಾರಿಯುತವಾಗಿ ನಡೆಸಿದ್ದು, ನಾಗರಿಕರ ಮೇಲೆ ಯಾವ ರೀತಿಯ ದಾಳಿಯೂ ಆಗದಂತೆ ಎಚ್ಚರಿಕೆಯಿಂದ ಸ್ಥಳಗಳನ್ನು ಆಯ್ಕೆ ಮಾಡಿದೆ ಎಂದು ಹೇಳಿದೆ.ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇದನ್ನು "ಯುದ್ಧದ ಕೃತ್ಯ" ಎಂದು ಕರೆದಿದ್ದಾರೆ. ಪಾಕಿಸ್ತಾನ ಇದು ನಾಗರಿಕರನ್ನು ಗುರಿಯಾಗಿಸಿಕೊಂಡ ದಾಳಿ ಎಂದು ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನ ಸೇನೆ ಪೂಂಚ್-ರಾಜೌರಿ ಭಾಗದಲ್ಲಿ ಶೆಲ್ಲಿಂಗ್ ಮಾಡಿ 15 ನಾಗರಿಕರನ್ನು ಕೊಂದಿದೆ ಎಂದು ವರದಿಯಾಗಿದೆ.