ಅಂತೂ ಶಿವು ಅಮ್ಮನನ್ನ ನೋಡೋ ಕಾಲ ಕೂಡಿಬಂತು, ವೀರಭದ್ರನಿಗೆ ಮುಂದೆ ಐತೆ ಮಾರಿಹಬ್ಬ!
Shiva mother reunion: ಶಿವು ಮತ್ತು ಅವರ ಅಮ್ಮ ಒಂದಾಗಬೇಕೆಂಬುದು ವೀಕ್ಷಕರ ಬಹುದಿನದ ಬಹುದೊಡ್ಡ ಆಸೆ. ಅದೀಗ ಈಡೇರುವ ಸಮಯ ಕೊನೆಗೂ ಬಂದಿದೆ ಅನಿಸುತ್ತಿದೆ. ಧಾರಾವಾಹಿ ಪ್ರೊಮೊ ನೋಡಿದ ಪ್ರತಿಯೊಬ್ಬರು ಶಿವು, ಮಾದಪ್ಪಣ್ಣನಿಗೆ ಪ್ರಂಶಸಿಸುತ್ತಿದ್ದಾರೆ. ಯಾಕೆ ಅಂತೀರಾ?, ಮುಂದೆ ಓದಿ..

ಹೆಸರು ಕೇಳಿದರೇನೇ ಕೆಂಡಾಮಂಡಲವಾಗುವ ಶಿವು
ಪ್ರತಿ ದಿನ 'ಅಣ್ಣಯ್ಯ' ಧಾರಾವಾಹಿ ವೀಕ್ಷಿಸುವವರಿಗೆ ಶಿವು ಮತ್ತು ಅವರ ಅಮ್ಮ ಒಂದಾಗಬೇಕು ಎಂಬುದೇ ಆಸೆ. ಆದರೆ ಅಣ್ಣಯ್ಯನಿಗೆ ಮಾವ ವೀರಭದ್ರನ ಮೇಲೆ ಅತಿಯಾದ ನಂಬಿಕೆ, ಗೌರವ. ಮಾವ ಹೇಳಿದ ಮಾತನ್ನೇ ನಂಬಿ ಅಮ್ಮನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿರುವ ಶಿವು ಅಮ್ಮನ ಹೆಸರು ಕೇಳಿದರೇನೇ ಕೆಂಡಾಮಂಡಲವಾಗುತ್ತಾನೆ. ಹಾಗಾಗಿ ಅಮ್ಮನನ್ನು ನೋಡುವ ತವಕವಾಗಲೀ, ಹುಡುಕಾಡುವುದಾಗಲೀ ಮಾಡುತ್ತಿಲ್ಲ.
ಮಾಂಕಳಮ್ಮ ದೇವಿ ನೀಡಿದ ಸೂಚನೆ
ಆದರೆ ಪಾರ್ವತಿ ಶಿವುನನ್ನು ಮದುವೆಯಾದ ಮೇಲೆ ಶಿವು ಅಮ್ಮ, ಅಂದರೆ ತನ್ನ ಅತ್ತೆ ಶಾರದಮ್ಮನ ಬಗ್ಗೆ ಒಂದೊಂದೇ ವಿಷಯ ತಿಳಿದುಕೊಳ್ಳುತ್ತಾ ಹೋಗುತ್ತಿದ್ದಾಳೆ. ಈ ಹಿಂದೆ ಮಾಂಕಳಮ್ಮ ದೇವಿ ಕೂಡ ಶಾರದಮ್ಮನ ಬಗ್ಗೆ ಸುಳಿವು ನೀಡಿತ್ತು. ಶಾರದಮ್ಮ ಕೂಡ ತಾನು ನಿನ್ನ ಅತ್ತೆ ಎಂದು ಹೇಳಿಕೊಳ್ಳದೆ ಪಾರ್ವತಿಗೆ ಒಳ್ಳೆಯದನ್ನೇ ಬಯಸುತ್ತಿದ್ದಾಳೆ.
ಪಾರ್ವತಿಗೆ ಗೊತ್ತಾಯ್ತು
ಈಗ ಶಾರದಮ್ಮನನ್ನು ವೀರಭದ್ರ ತೋಟದ ಮನೆಯಲ್ಲಿ ಕೂಡಿಹಾಕಿರುವ ವಿಷಯ ಪಾರ್ವತಿಗೆ ತಿಳಿದಾಗಿದೆ. ಅದು ಶಿವು ತಾಯಿ ಎಂಬುದು ಪಾರ್ವತಿಗೆ ಸೀನನ ಅಪ್ಪ ಮಾದಪ್ಪನ ಮೂಲಕ ತಿಳಿದುಕೊಂಡಾಗಿದೆ. ಶಿವುಗೆ ನೇರವಾಗಿ ಈ ವಿಷಯವನ್ನ ಹೇಳದ ಪಾರ್ವತಿ, "ತೋಟದ ಮನೆಯಲ್ಲಿ ಒಬ್ಬರನ್ನೂ ಕೂಡಿಹಾಕಲಾಗಿದೆ, ಅವರನ್ನ ಬಿಡಿಸಬೇಕು. ಅಲ್ಲಿ ತುಂಬಾ ಜನರನ್ನು ಕಾವಲಿಡಲಾಗಿದೆ" ಎಂದು ಹೇಳಿದ್ದಾಳೆ.
ಶಿಫ್ಟ್ ಮಾಡುವಂತೆ ಹೇಳಿದ ವೀರಭದ್ರ
ಪಾರ್ವತಿಯ ಮಾತನ್ನ ಗಂಭೀರವಾಗಿ ತೆಗೆದುಕೊಂಡ ಶಿವು ಅವರನ್ನು ಅಲ್ಲಿಂದ ಬಿಡಿಸಬೇಕು ಎಂದು ಪಾರ್ವತಿ ಜೊತೆಗೆ ತೋಟದ ಮನೆಗೆ ಬಂದಿದ್ದಾನೆ. ತಾನಲ್ಲಿಗೆ ಬಂದಿರುವ ವಿಷಯವನ್ನು ಮಾವ ವೀರಭದ್ರನಿಗೂ ತಿಳಿಸುತ್ತಾನೆ. ಇದರಿಂದ ವೀರಭದ್ರನಿಗೆ ತಳಮಳ ಶುರುವಾಗಿದೆ. ಶಿವುಗೆ ಎಲ್ಲಿ ತನ್ನಮ್ಮ ಶಾರದಮ್ಮನ ಬಗ್ಗೆ ತಿಳಿಯುತ್ತದೆಯೋ ಎಂದು ಆತಂಕದಿಂದ ಅಲ್ಲಿದ್ದ ಅವರ ಕಡೆ ಹುಡುಗರಿಗೆ ಶಿವು ಅಮ್ಮನನ್ನು ಅಲ್ಲಿಂದ ಬೇಗನೇ ಶಿಫ್ಟ್ ಮಾಡುವಂತೆ ಹೇಳಿದ್ದಾನೆ.
ಅಮ್ಮನನ್ನು ನೋಡುವುದೊಂದೇ ಬಾಕಿ
ಟ್ವಿಸ್ಟ್ ಇರುವುದೇ ಇಲ್ಲಿ. ಶಾರದಮ್ಮನ ಕಾವಲಿಗಿದ್ದ ರೌಡಿಗಳು ಶಾರದಮ್ಮನನ್ನು ಎಳೆದುಕೊಂಡು ಹೋಗುತ್ತಿರುವಾಗ ಅಲ್ಲಿಗೆ ಪಾರ್ವತಿ, ಶಿವು ಬರುತ್ತಾರೆ. ಆದರೆ ರೌಡಿಗಳು ಶಿವು ಅವರ ಅಮ್ಮನನ್ನು ನೋಡದಂತೆ ತಡೆಯುವ ವೇಳೆಗಾಗಲೇ ಸೀನನ ಅಪ್ಪ ಮಾದಪ್ಪ ಬರುತ್ತಾನೆ. ಪಾರ್ವತಿ-ಶಾರದಮ್ಮ ಮುಖಾಮುಖಿಯಾಗಿದ್ದಾರೆ. ಆದರೆ ಶಿವು ಈಗ ಅಮ್ಮನನ್ನು ನೋಡುವುದೊಂದೇ ಬಾಕಿ.
ವೀಕ್ಷಕರಿಂದ ಮಿಶ್ರಪ್ರತಿಕ್ರಿಯೆ
ಸದ್ಯ ವೀಕ್ಷಕರು ಈಗಲಾದರೂ ಶಿವು ಅವರ ಅಮ್ಮನನ್ನು ಭೇಟಿ ಮಾಡಲಿ. ಅವನಿಗೆ ಮತ್ತು ತಂಗಿಯರಿಗೆ ಅವರ ತಾಯಿ ಪ್ರೀತಿ ಸಿಗಲಿ. ವೀರಭದ್ರನ ಕುತಂತ್ರ ಬಯಲಾಗಲೀ ಎಂದು ಆಶಿಸುತ್ತಿದ್ದಾರೆ. ಮುಂದಿನ ಸಂಚಿಕೆ ನೋಡಿದರೆ ಬಹುಶಃ ಈ ಬಾರಿ ಶಿವುನನ್ನ ತಾಯಿ ಭೇಟಿಯಾಗಬಹುದು ಎಂದನಿಸುತ್ತದೆ. ವೀಕ್ಷಕರು ಕೂಡ ಈ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.