ಮಾಧುರಿ ದೀಕ್ಷಿತ್ ಜೊತೆನೂ ನಟಿಸಿದ್ದ ಲಕ್ಷ್ಮೀ ಬಾರಮ್ಮ ನಟಿ ಕೀರ್ತೀ ಬಗ್ಗೆ ನಿಮಗೆಷ್ಟು ಗೊತ್ತು?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಮಿಂಚುತ್ತಿರುವ ಕೀರ್ತಿ ಅಂದ್ರೆ ತನ್ವಿ ರಾವ್ ಬಗ್ಗೆ ನಿಮಗೆಷ್ಟು ಗೊತ್ತು? ಸಕಲಾಕಲ ವಲ್ಲಭೆಯಾಗಿರೋ ಇವರ ಬಗ್ಗೆ ಹೇಳಿದಷ್ಟು ಮುಗಿಯೋದಿಲ್ಲ. ಇಲ್ಲಿದೆ ತನ್ವಿ ಬಗ್ಗೆ ಒಂದಿಷ್ಟು ಮಾಹಿತಿ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗಿ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರೋ ಸೀರಿಯಲ್ಗಳಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಕೂಡ ಒಂದು. ಪ್ರತಿಯೊಂದು ಪಾತ್ರವೂ ಅದ್ಭುತವಾಗಿ ಮೂಡಿ ಬರುತ್ತಿದ್ದು, ಅದರಲ್ಲಿ ಕೀರ್ತಿ ಪಾತ್ರವಂತೂ, ಕಣ್ಣಲ್ಲೇ ನಟನೆ ಮಾಡುವ ಮೂಲಕ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.
ವೈಷ್ಣವ್ ನನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದ ಹುಡುಗಿ ಕೀರ್ತಿ, ಮದುವೆ ಸಮಯದಲ್ಲಿ ನಂಗೆ ಮದ್ವೆ ಆಗೋಕೆ ಇಷ್ಟ ಇಲ್ಲ ಎಂದು ಹೇಳಿ ದೂರ ಸರಿದು, ಕತೆಗೆ ಟ್ವಿಸ್ಟ್ ಕೊಟ್ಟ ಕೀರ್ತಿ ಪಾತ್ರಧಾರಿ ನಿಜವಾದ ಹೆಸರು ತನ್ವಿ ರಾವ್ (Tanvi Rao). ತಮ್ಮ ಖಡಕ್ ಮಾತು, ನಟನೆ ಮೂಲಕವೇ ಕೀರ್ತಿ ಜನಪ್ರಿಯತೆ ಪಡೆದಿದ್ದಾರೆ.
ಇನ್ನು ತನ್ವಿ ರಾವ್ ಬಗ್ಗೆ ಹೇಳಬೇಕಾದರೆ ಈಕೆ ಸಕಲಕಲಾ ವಲ್ಲಭೆ. ಒಬ್ಬ ಪರ್ಫಾಮಿಂಗ್ ಆರ್ಟಿಸ್ಟ್ (performing artist). ಇವರು ತಮ್ಮ 4ನೇ ವಯಸ್ಸಿನಲ್ಲಿಯೇ ಮಂಗಳೂರಿನ ಗುರು ಶ್ರೀಮತಿ ಗೀತಾ ಸರಳಾಯ ಮತ್ತು ಶ್ರೀಮತಿ ರಶ್ಮಿ ಚಿದಾನಂದ್ ಅವರ ಬಳಿ ಭರತನಾಟ್ಯ ಕಲಿಯಲು ಪ್ರಾರಂಭಿಸಿದರು. ಕೇವಲ 6ನೇ ವಯಸ್ಸಿನಲ್ಲಿ ಟಧಿನಕ್ ಧಿನ್ ಧಾಟ (ದೆಹಲಿ ದೂರದರ್ಶನ ಆಯೋಜಿಸಿದ, ಪ್ರಸಿದ್ಧ ಪಂಡಿತ್ ಜೈ ಕಿಶನ್ ಮಹಾರಾಜ್ ತೀರ್ಪುಗಾರರಾಗಿದ್ದ ಕಾರ್ಯಕ್ರಮ)ದಲ್ಲಿ ಭಾಗಿಯಾಗಿದ್ದರು. 8ನೇ ವಯಸ್ಸಿನಲ್ಲಿ ಪಾರ್ಲೆ ಜಿ 'ದಮ್ ದಮ್ ದಮ್' (ಮುಂಬೈ ದೂರದರ್ಶನ) ನಂತಹ ವಿವಿಧ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದರು.
ತಮ್ಮ 9 ವಯಸ್ಸಿನಲ್ಲಿ ಪದ್ಮವಿಭೂಷಣ ಡಾ.ವೀರೇಂದ್ರ ಹೆಗ್ಗಡೆ ಅವರಿಂದ 'ಅಪೂರ್ವ ಬಾಲ ಪ್ರತಿಭಾ' ಪ್ರಶಸ್ತಿಯನ್ನು ಪಡೆದರು. 10ನೇ ವಯಸ್ಸಿನಲ್ಲಿ ಕರ್ನಾಟಕದ ರಾಜ್ಯಪಾಲರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು (Karnataka State Award)ನೀಡಿದ್ದರು
ಭರತನಾಟ್ಯ ಕಲಾವಿದೆ, ಜೊತೆಗೆ ಥಿಯೇಟರ್ ಆರ್ಟಿಸ್ಟ್ ಆಗಿರುವ ತನ್ವಿ ರಾವ್ ಇದುವರೆಗೆ ಭಾರತದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಮತ್ತು ಮಲೇಷ್ಯಾ, ಸಿಂಗಾಪುರ್, ಸ್ಕಾಟ್ಲೆಂಡ್ ಮತ್ತು ಯುಎಸ್ಎಯಂತಹ ದೇಶಗಳಲ್ಲಿ ನೃತ್ಯ ಮತ್ತು ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಅದ್ಭುತ ಅಭಿನಯಕ್ಕೆ ಸ್ವತಃ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ಧುಲ್ ಕಲಾಂ ಸಹ ಬೆನ್ನು ತಟ್ಟಿದ್ದರು ಗೊತ್ತಾ?
ಇನ್ನು ತನ್ವಿಗೆ ಲಕ್ಷ್ಮೀ ಬಾರಮ್ಮ (Lakshmi Baramma) ಮೊದಲ ಸೀರಿಯಲ್ ಅಲ್ಲ, ಅವರು ಈಗಾಗಲೇ ಆಕೃತಿ, ರಾಧೆ ಶ್ಯಾಮ ಮತ್ತು ತಮಿಳು ಸೀರಿಯಲ್ ಜಮೀಲದಲ್ಲಿ ನಟಿಸಿದ್ದಾರೆ. ಅಲ್ಲದೇ ಸಿನಿಮಾಗಳಾದ ಕನ್ನಡದ ರಂಗ್ ಬಿರಂಗಿ, ಹಿಂದಿಯ ಗುಲಾಬ್ ಗ್ಯಾಂಗ್, ಗನ್ಸ್ ಆಫ್ ಬನಾರಸ್, ಗುಲ್ ಮೊಹರ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
2014 ರಲ್ಲಿ ಬಿಡುಗಡೆಯಾದ ಸೌಮಿಕ್ ಸೇನ್ ನಿರ್ದೇಶನದ ಭಾರತದಲ್ಲಿನ ಮಹಿಳೆಯರ ಹೋರಾಟದ ಕಥೆಯಾದ ಗುಲಾಬ್ ಗ್ಯಾಂಗ್ (Gulaab Gang) ನಲ್ಲಿ ಜನಪ್ರಿಯ ತಾರೆಯರಾದ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲಾ ಜೊತೆ ತೆರೆ ಹಂಚಿಕೊಂಡಿದ್ದರು ತನ್ವಿ ರಾವ್.
ಇನ್ನು ಸದ್ಯ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ನಟಿಸುತ್ತಿರುವ ಕೀರ್ತಿ, ತನಗೆ ವೈಷ್ಣವ್ ಬೇಕೆ ಬೇಕು, ಆದಷ್ಟು ಬೇಗ ಲಕ್ಷ್ಮೀ ಮತ್ತು ವೈಷ್ಣವ್ ಗೆ ಡೀವೋರ್ಸ್ ಕೊಡಿಸುವಂತೆ ಕಾವೇರಿ ಬೆನ್ನು ಬಿದ್ದಿದ್ದಾಳೆ. ಲಕ್ಷ್ಮೀ - ವೈಷ್ಣವ್ ಬೇರೆಯಾಗ್ತಾರಾ? ಕೀರ್ತಿಗೆ ವೈಷ್ಣವ್ ಮತ್ತೆ ಸಿಗ್ತಾನಾ? ಏನಾಗುತ್ತೆ ಕಾದು ನೋಡಬೇಕು.