ಹಳೆ ಹೆಸರನ್ನಿಟ್ಟುಕೊಂಡು ಮತ್ತೆ ಬಂತು ‘ನಂದಗೋಕುಲ’.... ಇಲ್ಲಿ ಯಶ್ - ರಾಧಿಕಾ ಇಲ್ಲ
ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಭರ್ಜರಿ ಎಂಟರ್ಟೇನ್ಮೆಂಟ್ ನೀಡೋದಕ್ಕೆ ರೆಡಿಯಾಗಿದ್ದು, ಶೀಘ್ರದಲ್ಲಿ ಹೊಸ ಧಾರಾವಾಹಿ ನಂದಗೋಕುಲ ಪ್ರಸಾರವಾಗಲಿದೆ.

ಹೊಸ ಹೊಸ ಕಥೆಗಳನ್ನು ನೀಡಿ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುವಲ್ಲಿ ಯಶಸ್ವಿಯಾದ ವಾಹಿನಿ ಕಲರ್ಸ್ ಕನ್ನಡ (Colors Kannada). ಈಗಾಗಲೇ ವಾಹಿನಿಯಲ್ಲಿ ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀ, ಕರಿಮಣಿ, ರಾಮಾಚಾರಿ, ಭಾರ್ಗವಿ ಎಲ್ ಎಲ್ ಬಿ, ದೃಷ್ಟಿ ಬೊಟ್ಟು, ನಿನಗಾಗಿ, ಯಜಮಾನ, ವಧು ಸೀರಿಯಲ್ ಗಳು ಪ್ರಸಾರವಾಗುತ್ತಿವೆ.
ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯ ಕೊನೆಯ ಸಂಚಿಕೆಗಳು ಪ್ರಸಾರವಾಗುತ್ತಿವೆ. ಇನ್ನೊಂದೆಡೆ, ತ್ರಿವಿಕ್ರಮ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಮುದ್ದು ಸೊಸೆ ಸೀರಿಯಲ್ ಏಪ್ರಿಲ್ 14 ರಿಂದ ಪ್ರಸಾರವಾಗಲಿದೆ. ಅಷ್ಟರಲ್ಲೇ ಮತ್ತೊಂದು ಸೀರಿಯಲ್ ಆರಂಭವಾಗುವ ಸುದ್ದಿ ನೀಡಿದೆ ಕಲರ್ಸ್ ಕನ್ನಡ.
ಹೌದು, ಕಲರ್ಸ್ ಕನ್ನಡದಲ್ಲಿ ನಂದ ಗೋಕುಲ ಹೆಸರಿನ ತುಂಬು ಸಂಸಾರದ ಕಥೆಯೊಂದು ಶುರುವಾಗಲಿದೆ. ತನ್ನ ಮೂರು ಜನ ಗಂಡು ಮಕ್ಕಳನ್ನು ಜೀವನದಲ್ಲಿ ಹೀರೊಗಳನ್ನಾಗಿ ಮಾಡಲು ಹೊರಟ ಅಪ್ಪನ ಕಥೆ ಇದು. ಗಂಡು ಮಕ್ಕಳ ಮೇಲೆ ದೊಡ್ಡ ಕನಸುಗಳನ್ನು ಇಟ್ಟು ಬೆಳೆಸುವ ಅಪ್ಪ, ಮಕ್ಕಳು ಅಪ್ಪನ ಮಾತಿನಂತೆ ನಡೆಯುತ್ತಾರೆಯೆ? ಗೊತ್ತಿಲ್ಲ. ಅದಕ್ಕೆ ಸೀರಿಯಲ್ ನೊಡಬೇಕು.
ಈ ಹಿಂದೆ ‘ನಂದಗೋಕುಲ’ (Nandagokula) ಹೆಸರಿನ ಸೀರಿಯಲ್ ಪ್ರಸಾರವಾಗುತ್ತಿತ್ತು.. ಈ ಸೀರಿಯಲ್ ಅಂದು ಬಹಳ ಜನಮನ್ನಣೆ ಪಡೆದಿದ್ದು. ಯಶ್ ಹಾಗೂ ರಾಧಿಕಾ ಈ ಸೀರಿಯಲ್ ಮೂಲಕವೇ ನಟನೆಗೆ ಕಾಲಿಟ್ಟಿದ್ದರು. ಇದೀಗ ಹೊಸದಾಗಿ ಪ್ರಸಾರವಾಗುತ್ತಿರುವ ನಂದಗೋಕುಲ ಧಾರಾವಾಹಿಯಲ್ಲಿ ಯಶ್ ರಾಧಿಕಾ ಇಲ್ಲ. ಆದರೆ ಯಶ್ ನಂತೆ ಸ್ಟೈಲಿಶ್ ಆಗಬೇಂದು ಕನಸು ಕಾಣುವ ಹುಡುಗ ಇದ್ದಾರೆ.
ಅಂದ ಹಾಗೆ ಈ ಧಾರಾವಾಹಿಯನ್ನು ರಾಮಾಚಾರಿ, ದೃಷ್ಟಿ ಬೊಟ್ಟು, ನೂರು ಜನ್ಮಕೂ ಕಥೆಯನ್ನು ನಿರ್ಮಾಣ ಮಾಡಿದ್ದ ನಿರ್ದೇಶಕ ಶ್ರವಂತ್ ಅವರ ಜಾಹ್ನವಿ ಫಿಲಂ ಎಂಫೈರ್ ಎನ್ನುವ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ಈ ಧಾರಾವಾಹಿಯಲ್ಲಿ ಬಹುತಾರಾಗಣವಿದ್ದು, ಝೀ ಕನ್ನಡದ ಗಟ್ಟಿಮೇಳ ಸೀರಿಯಲ್ ವಿಕ್ರಾಂತ್ ಖ್ಯಾತಿಯ ಅಭಿದಾಸ್ (Abhidas) ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ, ಇವರಲ್ಲದೇ ಗಂಡ ಹೆಂಡತಿ ಮತ್ತು ಈಗ ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್ ಪಾತ್ರದಲ್ಲಿ ನಟಿಸುತ್ತಿರುವ ಯಶವಂತ್ ಕೂಡ ನಟಿಸುತ್ತಿದ್ದಾರೆ. ಜೊತೆಗೆ ಅರವಿಂದ್, ವಿಜಯಚಂದ್ರ, ಅಮೃತ ಮೊದಲಾದವರು ಬಣ್ಣ ಹಚ್ಚಿದ್ದಾರೆ.
ಇನ್ನು ಈ ಸೀರಿಯಲ್ ತಮಿಳಿನ ಪಾಂಡಿಯನ್ ಸ್ಟೋರ್ 2 (Pandian Store 2) ರಿಮೇಕ್ ಆಗಿದ್ದು, ಇದು ತೆಲುಗಿನಲ್ಲೂ ಕೂಡ ಪ್ರಸಾರವಾಗಲಿದೆ. ಮಕ್ಕಳನ್ನ ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ತಂದೆಯ ಕತೆ! ಶೀಘ್ರದಲ್ಲೇ ಪ್ರಸಾರವಾಗಲಿದೆ. ಇದಕ್ಕಾಗಿ ಯಾವ ಧಾರಾವಾಹಿ ಅಂತ್ಯ ಕಾಣಲಿದೆ ಅನ್ನೋದು ಮಾತ್ರ ಗೊತ್ತಿಲ್ಲ.