ತಿಪಟೂರಿನಲ್ಲಿ ಮನೆಯೊಳಗೆ ನುಗ್ಗಿದ KSRTC ಬಸ್; 10 ಮಂದಿಗೆ ಗಾಯ
ತಿಪಟೂರು ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಬಸ್ ಟೈರ್ ಬ್ಲಾಸ್ಟ್ ಆಗಿ ಮನೆಯೊಳಗೆ ನುಗ್ಗಿದೆ. 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತುಮಕೂರು (ಜೂ. 29): ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಭಯಾನಕ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಟೈರ್ ಬ್ಲಾಸ್ಟ್ ಆಗಿ ನಿಯಂತ್ರಣ ತಪ್ಪಿದ ಬಸ್ ನೇರವಾಗಿ ರಸ್ತೆಯ ಪಕ್ಕದ ಮನೆಯೊಳಗೆ ನುಗ್ಗಿದೆ.
ಅಪಘಾತದಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 10ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆ ಇಂದು ಮುಂಜಾನೆ ಸಿದ್ದಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 206ರ ಸಮೀಪದಲ್ಲಿ ಸಂಭವಿಸಿದೆ.
ಆಗುಂಬೆಯಿಂದ ಕೋಲಾರ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ (ನಂ. KA57F 2826) ತೀವ್ರ ವೇಗದಲ್ಲಿ ಸಾಗುತ್ತಿತ್ತು. ಈ ವೇಳೆ ಬಸ್ನ ಟೈರ್ ಬ್ಲಾಸ್ಟ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್ ನೇರವಾಗಿ ಪುಟ್ಟಣ್ಣ ಎಂಬುವವರ ಮನೆಗೆ ಡಿಕ್ಕಿ ಹೊಡೆದು ನುಗ್ಗಿದೆ.
ಬಸ್ ನುಗ್ಗಿದ ರಭಸಕ್ಕೆ ಮನೆಯ ಗೋಡೆಯೊಂದು ಸಂಪೂರ್ಣ ಧ್ವಂಸಗೊಂಡಿದೆ. ಅಪಾಯದ ಸಮಯದಲ್ಲಿ ಮನೆಯವರು ಒಳಗೆ ಇಲ್ಲದಿರುವುದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಬಸ್ನಲ್ಲಿ ಹೋಗುತ್ತಿದ್ದ ಪ್ರಯಾಣಿಕರಲ್ಲಿ 10ಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ತಿಪಟೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ:
ಘಟನೆಯ ಮಾಹಿತಿ ತಿಳಿದ ತಕ್ಷಣ ತಿಪಟೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕ್ಕೆ ಕ್ರಮ ಕೈಗೊಂಡಿದ್ದಾರೆ. ಬಸ್ ಅಪಘಾತದ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನಚಾಲಕರಲ್ಲಿ ಭಯದ ಮನೋಭಾವ ವ್ಯಕ್ತವಾಗಿದೆ.
ಅತೀವ ವೇಗ ಮತ್ತು ವಾಹನದ ತಾಂತ್ರಿಕ ದೋಷಗಳು ಜೀವಕ್ಕೆ ಅಪಾಯ ತರಬಹುದು. ಸಾರ್ವಜನಿಕರು ಹಾಗೂ ಸಾರಿಗೆ ಇಲಾಖೆ ಈ ಘಟನೆಯಿಂದ ಪಾಠ ಕಲಿಯಬೇಕು.