ಶಕ್ತಿ ಯೋಜನೆ 500ನೇ ಕೋಟಿ ಮಹಿಳಾ ಪ್ರಯಾಣಿಕರಿಗೆ ಪಿಂಕ್ ಟಿಕೆಟ್ ಕೊಟ್ಟ ಸಿಎಂ ಸಿದ್ದರಾಮಯ್ಯ!
ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯು 500 ಕೋಟಿ ಮಹಿಳಾ ಪ್ರಯಾಣಿಕರ ಮೈಲಿಗಲ್ಲನ್ನು ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 500ನೇ ಕೋಟಿ ಪ್ರಯಾಣಿಕರಿಗೆ ಸ್ವತಃ ಟಿಕೆಟ್ ನೀಡಿ ಸನ್ಮಾನಿಸಿದರು. ಈ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ ಕಾರಣವಾಗಿದೆ.

ಬೆಂಗಳೂರು (ಜು.14): ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ 'ಶಕ್ತಿ ಯೋಜನೆ'ಯು ದಿನಾಂಕ 11-06-2023 ರಿಂದ ಜಾರಿಗೆ ಬಂದಿದ್ದು, ಜುಲೈ 14 ನೇ 2025 ಕ್ಕೆ 500 ಕೋಟಿ ಮಹಿಳಾ ಪ್ರಯಾಣಿಕರ ಟ್ರಿಪ್ ಅನ್ನು ತಲುಪುವ ಮುಖಾಂತರ ದೇಶದಲ್ಲೇ ಹೊಸ ಮೈಲಿಗಲ್ಲನ್ನು ತಲುಪಲಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 500ನೇ ಕೋಟಿಯ ಮಹಿಳಾ ಪ್ರಯಾಣಿಕರಿಗೆ ತಾವೇ ಸ್ವತಃ ಬಸ್ ಪ್ರಯಾಣದ ಉಚಿತ ಟಿಕೆಟ್ ಹಾಗೂ ಆನೆಯ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡುವ ಮೂಲಕ ಶಕ್ತಿ ಯೋಜನೆ ಯಶಸ್ಸು ಹೀಗೇ ಮುಂದುವರಿಯಲ್ಲಿ ಎಂದು ಆಶಿಸಿದರು.
ಶಕ್ತಿಯೋಜನೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗುತ್ತಿರುವುದಿಂದ ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಆರೋಗ್ಯ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಶಕ್ತಿ ಯೋಜನೆಯು ಅಭೂತಪೂರ್ವ ಯಶಸ್ಸನ್ನು ಕಂಡು ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಯೋಜನೆಯಾಗಿ ಮುಂದುವರೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ 500 ನೇ ಕೋಟಿ ಟಿಕೇಟ್ ಅನ್ನು ಸಾಂಕೇತಿಕವಾಗಿ ಇಂದು ವಿತರಿಸಿದ್ದು, ಶಕ್ತಿ ಯೋಜನೆಯಲ್ಲಿ ಇಲ್ಲಿಯವರೆಗೂ ರೂ.12,669 ಕೋಟಿ ಮಹಿಳಾ ಟಿಕೇಟ್ ಮೌಲ್ಯವಾಗಿದೆ.
ನಗರ, ಸಾಮಾನ್ಯ, ವೇಗದೂತ ಬಸ್ಸುಗಳಲ್ಲಿ ರಾಜ್ಯದ್ಯಾಂತ ರಾಜ್ಯದ ನಿವಾಸಿಗಳಾ ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಶಕ್ತಿ ಯೋಜನೆಗೆ ಮುನ್ನ ಸಾರಿಗೆ ಬಸ್ಸುಗಳಲ್ಲಿ ಪ್ರತಿ ದಿನ 85.84 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು, ಈಗ 1.17 ಕೋಟಿ ಜನರು ಪ್ರತಿ ದಿನ ಪ್ರಯಾಣಿಸುತ್ತಿದ್ದಾರೆ. ಸಾರಿಗೆ ನಿಗಮಗಳನ್ನು ಸದೃಡಗೊಳಿಸಲು, ಹೊಸ ಬಸ್ಸುಗಳ ಸೇರ್ಪಡೆ ಮತ್ತು ನೇಮಕಾತಿಗೆ ಚಾಲನೆ ನೀಡಲಾಗಿದೆ.
ಹೊಸ ಬಸ್ಸುಗಳ ಸೇರ್ಪಡೆ ಮತ್ತು ನೇಮಕಾತಿಯು ಸಂಪೂರ್ಣ ಸ್ಥಗಿತಗೊಂಡಿತ್ತು.ಕಳೆದ ಎರಡು ವರುಷದಲ್ಲಿ 5800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿತು. ಈಗಾಗಲೇ ನಾಲ್ಕು ನಿಗಮಗಳಲ್ಲಿ 5049 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ. ಅದೇ ರೀತಿ 9000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಲಾಗಿದೆ. ಈಗಾಗಲೇ 6700 ಹೊಸ ನೇಮಕಾತಿ ಮತ್ತು 1000 ಅನುಕಂಪದ ನೇಮಕಾತಿ ಪೂರ್ಣಗೊಳಿಸಲಾಗಿದೆ. ಒಟ್ಟು 10000 ನೇಮಕಾತಿ ಸಾರಿಗೆ ನಿಗಮದಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿ ಚಾಲನೆ ದೊರಕಿದೆ. ಶಕ್ತಿ ಫೂರ್ವ 21164 ಅನುಸೂಚಿಗಳಿದ್ದು, ಶಕ್ತಿ ನಂತರ 23635 ಕ್ಕೆ ಹೆಚ್ಚಳವಾಗಿದೆ.
ಅದೇ ರೀತಿ ಶಕ್ತಿ ಪೂರ್ವ ಒಟ್ಟು ಬಸ್ಸುಗಳು 23948 ಇದ್ದದ್ದು ನಂತರ 26130 ಕ್ಕೆ ಏರಿಕೆಯಾಗಿದೆ. ಹಳೆಯ 2828 ವಾಹನಗಳನ್ನು ಬದಲಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ನಾಲ್ಕೂ ಸಾರಿಗೆ ನಿಗಮಗಳಿಗೆ 185 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳು ಸಾರಿಗೆ ನಿಗಮಗಳಿಗೆ ಲಭಿಸಿರುತ್ತದೆ.
ವಿಶೇಷ ಬಸ್ ಪೂಜಾ ಕಾರ್ಯಕ್ರಮ, ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ, ತಾಲ್ಲೂಕು ಮತ್ತು ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಬಸ್ ಪೂಜೆ ನೆರವೇರಿಸಿ ಸಿಹಿ ಹಂಚಿ ಸಾಂಕೇತಿಕವಾಗಿ ಅಚರಣೆ ಮಾಡಿ, ಮಹಿಳಾ ಪ್ರಯಾಣಿಕರಿಗೆ ಬಸ್ನಲ್ಲಿ ಸ್ವಾಗತದ ರೂಪದಲ್ಲಿ ಗುಲಾಬಿ ಹೂಗಳ ವಿತರಣೆ. ಒಡಲ ಧ್ವನಿ ಸ್ತ್ರೀ ಸಂಘ ವಿಜಯಪುರವರು ಶಕ್ತಿ ಯೋಜನೆಯಿಂದ ಸಾವಯವ ರೊಟ್ಟಿ, ಹೋಳಿಗೆ ತಯಾರಿಸಿ ಬೆಂಗಳೂರಿಗೆ ಮಾರಾಟ ಮಾಡಿ ಲಕ್ಷಾಂತರ ರೂ ವಹಿವಾಟು ನಡೆಸಲಾಗಿದ್ದು, ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ, ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ರೊಟ್ಟಿ ನೀಡಿ ಗೌರವ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ 500ನೇ ಕೋಟಿ ಪಿಂಕ್ ಟಿಕೆಟ್ ವಿತರಣೆ ಮತ್ತು ಬಸ್ಸಿನಲ್ಲಿದ್ದ ಮಹಿಳೆಯರು, ವಿದ್ಯಾರ್ಥಿನಿಯರು, ಹಿರಿಯ ನಾಗರಿಕರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು 30 ಮಹಿಳಾ ಪ್ರಯಾಣಿಕರಿಗೆ ಇಳಕಲ್ ಸೀರೆ ನೀಡಿ ಗೌರವಿಸಿದರು. 500ನೇ ಕೋಟಿ ಶಕ್ತಿ ಟಿಕೇಟ್ ಪಡೆದ ಮಹಿಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲು ಹೊದಿಸಿ, ಹಾರ ಹಾಕಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.