- Home
- Sports
- IND vs ENG: ಟೀಂ ಇಂಡಿಯಾ ಹೆಡ್ ಕೋಚಿಂದ್ ಬಿಗ್ ಮೇಸೇಜ್; ವೈಭವ್ ಸೇರಿ ಇನ್ನೋರ್ವಗೆ ಶಾಕ್? ಇನ್ನಿಬ್ಬರಿಗೆ ಮಾಡು ಇಲ್ಲವೇ, ಮಡಿ!
IND vs ENG: ಟೀಂ ಇಂಡಿಯಾ ಹೆಡ್ ಕೋಚಿಂದ್ ಬಿಗ್ ಮೇಸೇಜ್; ವೈಭವ್ ಸೇರಿ ಇನ್ನೋರ್ವಗೆ ಶಾಕ್? ಇನ್ನಿಬ್ಬರಿಗೆ ಮಾಡು ಇಲ್ಲವೇ, ಮಡಿ!
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯ ಭಾರತಕ್ಕೆ 'ಮಾಡು ಇಲ್ಲವೇ ಮಡಿ' ಸನ್ನಿವೇಶ ಸೃಷ್ಟಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡವು, ಬ್ಯಾಟಿಂಗ್ ಬಲಪಡಿಸಲು ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಿದೆ ಎನ್ನಲಾಗಿದೆ. ಈ ಕುರಿತು ಗಂಭೀರ್ ಮಹತ್ವದ ಸುಳಿವು ನೀಡಿದ್ದಾರೆ.

ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ!
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ನಾಲ್ಕನೇ ಪಂದ್ಯ ಗುರುವಾರ ಬ್ರಿಸ್ಟಲ್ನಲ್ಲಿ ನಡೆಯಲಿದ್ದು, ಇದು ಟೀಮ್ ಇಂಡಿಯಾಗೆ 'ಡೂ ಆರ್ ಡೈ' ಪಂದ್ಯವಾಗಿ ಪರಿಣಮಿಸಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ಅಂತ್ಯಗೊಂಡ ಬಳಿಕ ಉಳಿದ ಎರಡು ಪಂದ್ಯಗಳಲ್ಲಿ ಭಾರತ ಸೋಲು ಕಂಡಿದೆ. ಹೀಗಾಗಿ ಸರಣಿ ಜೀವಂತವಾಗಿಡಬೇಕಾದರೆ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
ವಿಫಲವಾದ್ರಾ ಅಯ್ಯರ್!
ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಅಯ್ಯರ್ ನಾಯಕತ್ವ ವಹಿಸಿಕೊಂಡ ನಂತರ ಭಾರತ ಕಳೆದ ಐದು ಟಿ20 ಪಂದ್ಯಗಳಲ್ಲಿ ಒಂದನ್ನೂ ಗೆಲ್ಲದಿರುವುದು ತಂಡದ ಮೇಲೆ ಹೆಚ್ಚುವರಿ ಒತ್ತಡ ತಂದಿದೆ. ಅದರಲ್ಲೂ ಮೂರನೇ ಟಿ20ಯಲ್ಲಿ ಕೇವಲ 76 ರನ್ಗಳಿಗೆ ಆಲೌಟ್ ಆದ ಬ್ಯಾಟಿಂಗ್ ವೈಫಲ್ಯ ತಂಡದ ಆಯ್ಕೆ ಸಮಿತಿಗೆ ಹಾಗೂ ಕೋಚಿಂಗ್ ಸ್ಟಾಫ್ಗೆ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಪರಿಣಾಮವಾಗಿ ನಾಲ್ಕನೇ ಟಿ20ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆಗಳು ಬಹುತೇಕ ಖಚಿತ ಎನ್ನಲಾಗುತ್ತಿದೆ.
ವೈಭವ್ ಸಹ ವಿಫಲ!
ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಆರಂಭ ನೀಡಲು ವಿಫಲರಾಗಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ. ಸಂಜು ತಂಡಕ್ಕೆ ಮರಳಿದರೆ ಟಾಪ್ ಆರ್ಡರ್ಗೆ ಸ್ಥಿರತೆ ಸಿಗುವುದರ ಜೊತೆಗೆ ಪವರ್ಪ್ಲೇನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಆಯ್ಕೆಯೂ ಲಭ್ಯವಾಗಲಿದೆ. ಅದರಲ್ಲೂ ಟೀಂ ಇಂಡಿಯಾ ಹೆಡ್ ಕೋಚ್ ಸಂಜು ಆಡಿಸುವ ಕುರಿತು ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಹೊರಗುಳಿತಾರಾ ತಿಲಕ್!
ಇನ್ನೊಂದೆಡೆ, ಟೀಮ್ ಮ್ಯಾನೇಜ್ಮೆಂಟ್ ವೈಭವ್ ಅವರನ್ನು ಉಳಿಸಿಕೊಂಡೇ ಸಂಜು ಅವರನ್ನು ತಂಡದಲ್ಲಿ ಆಡಿಸಲು ನಿರ್ಧರಿಸಿದರೆ, ಅಭಿಷೇಕ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆಯೂ ಇದೆ. ಮತ್ತೊಂದೆಡೆ ಮೂವರು ಬ್ಯಾಟರ್ಗಳಿಗೂ ಅವಕಾಶ ನೀಡಬೇಕೆಂದರೆ ಸತತವಾಗಿ ರನ್ ಗಳಿಸಲು ವಿಫಲವಾಗುತ್ತಿರುವ ತಿಲಕ್ ವರ್ಮಾ ಅವರನ್ನು ಹೊರಗಿಡುವ ಆಯ್ಕೆ ಪರಿಗಣಿಸಲಾಗುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ಅವರ ಬ್ಯಾಟಿಂಗ್ ಪ್ರಭಾವ ಬೀರದ ಕಾರಣ ಈ ನಿರ್ಧಾರಕ್ಕೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ.
ಸಂಜು ಸೇರ್ಪಡೆಯಾದರೆ ಸುಧಾರಿಸಲಿದೆ ಬ್ಯಾಟಿಂಗ್ ಲೈನ್ಅಪ್!
ಸಂಜು ಸ್ಯಾಮ್ಸನ್ ತಂಡಕ್ಕೆ ಸೇರ್ಪಡೆಯಾದರೆ ಬ್ಯಾಟಿಂಗ್ ಲೈನ್ಅಪ್ನಲ್ಲಿ ಎಡ-ಬಲಗೈ ಬ್ಯಾಟರ್ಗಳ ಸಮತೋಲನವೂ ಸುಧಾರಿಸಲಿದೆ. ಪ್ರಸ್ತುತ ಟಾಪ್ ಆರ್ಡರ್ನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮಾತ್ರ ಬಲಗೈ ಬ್ಯಾಟರ್ ಆಗಿದ್ದು, ಉಳಿದವರು ಎಡಗೈ ಬ್ಯಾಟರ್ಗಳಾಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಎದುರಾಳಿ ತಂಡದ ಸ್ಪಿನ್ ದಾಳಿಯನ್ನು ಎದುರಿಸಲು ಬಲ-ಎಡ ಸಂಯೋಜನೆ ಪ್ರಮುಖ ತಂತ್ರವಾಗಿ ಪರಿಣಮಿಸುತ್ತದೆ.
ಗಂಭೀರ್ ಹೇಳಿದ್ದೇನು?
ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಸಂಜು ಸ್ಯಾಮ್ಸನ್ ಅವರ ಪುನರಾಗಮನದ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ. ಸಂಜು ಸಂಪೂರ್ಣ ಫಿಟ್ ಆಗಿದ್ದು, ಯಾವುದೇ ಹಂತದಲ್ಲಿ ಪ್ಲೇಯಿಂಗ್ ಇಲೆವೆನ್ಗೆ ಮರಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದರಿಂದ ನಾಲ್ಕನೇ ಪಂದ್ಯದಲ್ಲಿ ಸಂಜು ಅವಕಾಶ ಪಡೆಯುವ ಸಾಧ್ಯತೆ ಇನ್ನಷ್ಟು ಬಲಗೊಂಡಿದೆ.
ಬೌಲಿಂಗ್ನಲ್ಲೂ ಬದಲಾವಣೆ ಸಾಧ್ಯತೆ!
ಬೌಲಿಂಗ್ ವಿಭಾಗದಲ್ಲಿಯೂ ಬದಲಾವಣೆ ಸಾಧ್ಯತೆ ಇದೆ. ಪ್ರಮುಖ ಲೆಗ್-ಸ್ಪಿನ್ನರ್ ವರುಣ್ ಚಕ್ರವರ್ತಿ ಇತ್ತೀಚಿನ ಪಂದ್ಯಗಳಲ್ಲಿ ವಿಕೆಟ್ ಪಡೆಯಲು ಹಾಗೂ ರನ್ ನಿಯಂತ್ರಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅಥವಾ ಯುವ ಸ್ಪಿನ್ನರ್ ಸೂರ್ಯಾಂಶ್ ಶೆಡ್ಜ್ ಅವರಿಗೆ ಅವಕಾಶ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವಾಷಿಂಗ್ಟನ್ ತಂಡಕ್ಕೆ ಹೆಚ್ಚುವರಿ ಬ್ಯಾಟಿಂಗ್ ಆಳವನ್ನೂ ಒದಗಿಸಬಲ್ಲ ಕಾರಣ ಅವರಿಗೆ ಆದ್ಯತೆ ಸಿಗುವ ಸಾಧ್ಯತೆ ಹೆಚ್ಚಿದೆ.ವೇಗದ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಹೊಸ ಚೆಂಡಿನ ಜವಾಬ್ದಾರಿ ವಹಿಸುವ ನಿರೀಕ್ಷೆಯಿದ್ದು, ಪ್ರಿನ್ಸ್ ಯಾದವ್ ಡೆತ್ ಓವರ್ಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಮಧ್ಯಮ ಓವರ್ಗಳಲ್ಲಿ ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ (ಅಥವಾ ವರುಣ್ ಚಕ್ರವರ್ತಿ) ಸ್ಪಿನ್ ದಾಳಿಯನ್ನು ಮುನ್ನಡೆಸುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
