6 ವರ್ಷಗಳ ನಂತರ ನನ್ನ ಚಿತ್ರ ಬಿಡುಗಡೆ ಆಗುತ್ತಿದೆ: ಶ್ರೀನಗರ ಕಿಟ್ಟಿ
ಪಾವನಾ ಮತ್ತು ಶ್ರೀನಗರ ಕಿಟ್ಟಿ ಅಭಿನಯಿಸಿರುವ ಗೌಳಿ ಸಿನಿಮಾ ಫೆಬ್ರವರಿ 24ರಂದು ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಟೀಸರ್ಗೆ ಅಪಾರ ಮೆಚ್ಚುಗೆ ವ್ಯಕ್ತಿವಾಗುತ್ತಿದೆ...
ನನ್ನ ನಟನೆಯ ಸಿನಿಮಾ ತೆರೆಗೆ ಬಂದಿದ್ದು 2017ರಲ್ಲಿ. ‘ಗೌಳಿ’ ನನ್ನ ಮತ್ತೆ ಕರೆದುಕೊಂಡು ಬರುತ್ತಿದೆ. ಈ ಸಿನಿಮಾ ಮೇಲೆ ದೊಡ್ಡ ಭರವಸೆ ಇದೆ. ಒಂದು ರೀತಿಯಲ್ಲಿ ಇದು ನನ್ನ ಮರು ಜೀವದ ಸಿನಿಮಾ.
ಹೀಗೆ ಹೇಳಿದ್ದು ನಟ ಶ್ರೀನಗರ ಕಿಟ್ಟಿಅವರು. ಇತ್ತೀಚೆಗೆ ನಡೆದ ‘ಲಂಕಾಸುರ’ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದು ಶ್ರೀನಗರ ಕಿಟ್ಟಿ, ಇದೇ ಫೆ.24ರಂದು ತೆರೆಗೆ ಬರುತ್ತಿರುವ ತಮ್ಮ ‘ಗೌಳಿ’ ಚಿತ್ರದ ಬಗ್ಗೆ ಹೇಳಿದರು.
ರಘು ಸಿಂಗಮ್ ನಿರ್ಮಾಣ, ಸೂರ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಗೌಳಿ’ ಸಮುದಾಯದ ಸುತ್ತ ಸಾಗುವ ಈ ಕತೆಯಲ್ಲಿ ರಂಗಾಯಣ ರಘು, ಪಾವನಾ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಟ್ರೇಲರ್ ಬಿಡುಗಡೆ ಆಗಿದ್ದು, ‘ಇದು ಶ್ರೀನಗರ ಕಿಟ್ಟಿಸಿನಿಮಾನಾ’ ಎಂದು ಅಚ್ಚರಿ ಪಡುವಂತೆ ಮೇಕಿಂಗ್ ಸಿನಿಮಾ ಎನಿಸಿಕೊಂಡಿದೆ.
ಬಿಡುಗಡೆಗೆ ಸಜ್ಜಾಗುತ್ತಿರುವ ತಮ್ಮ ಈ ಚಿತ್ರದ ಬಗ್ಗೆ ಮಾತನಾಡಿದ ಶ್ರೀನಗರ ಕಿಟ್ಟಿ, ‘ತುಂಬಾ ಎಕ್ಸೈಟ್ ಆಗಿದ್ದೇನೆ. ಈ ಸಿನಿಮಾ ಮಾಡುವಾದ ಸ್ಕ್ರೀನ್ ಮೇಲೆ ನಾನು ಇಷ್ಟುಚೆನ್ನಾಗಿ ಕಾಣಿಸಿಕೊಳ್ಳುತ್ತೇನೆ ಅಂತ ನಾನೇ ನಿರೀಕ್ಷೆ ಮಾಡಿರಲಿಲ್ಲ.
ತುಂಬಾ ಅನುಭವಿಸಿ ಮಾಡಿದ ಪಾತ್ರ. ನನಗೇ ಹತ್ತಿರವಾದ ಪಾತ್ರ. ತುಂಬಾ ತಡವಾಗಿ ನನಗೆ ಇಂಥ ಕಾಡುವ ಪಾತ್ರ ಸಿಕ್ಕಿದೆ ಅನಿಸುತ್ತಿದೆ. ‘ಮತ್ತೆ ಮುಂಗಾರು’, ‘ಸವಾರಿ’ ಚಿತ್ರಗಳ ನಂತರ ‘ಗೌಳಿ’ ಮೂಲಕ ಮತ್ತೆ ಮರಳುತ್ತಿದ್ದೇನೆ.
ಚಿತ್ರದ ಮೇಕಿಂಗ್, ಟೀಸರ್, ನನ್ನ ಲುಕ್ಕುಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ಫೆ.24ರಂದು ಸಿನಿಮಾ ಬರುತ್ತಿದೆ. ಸಿನಿಮಾ ನೋಡಿದ ಮೇಲೆ ಈ ನಿರೀಕ್ಷೆಗಳು ಸುಳ್ಳಾಗಲ್ಲ ಎನ್ನುವ ಭರವಸೆ ಕೊಡುತ್ತೇನೆ’