- Home
- Entertainment
- Sandalwood
- ಜೈ ಹನುಮಾನ್ ಮುಹೂರ್ತ ಬೆನ್ನಲ್ಲೇ ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಭೇಟಿ, ರಾಯರ ಕುರಿತು ಸಿನಿಮಾ ಮಾಡ್ತಾರಾ ಡಿವೈನ್ ಸ್ಟಾರ್, ಹೇಳಿದ್ದೇನು?
ಜೈ ಹನುಮಾನ್ ಮುಹೂರ್ತ ಬೆನ್ನಲ್ಲೇ ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಭೇಟಿ, ರಾಯರ ಕುರಿತು ಸಿನಿಮಾ ಮಾಡ್ತಾರಾ ಡಿವೈನ್ ಸ್ಟಾರ್, ಹೇಳಿದ್ದೇನು?
Rishab Shetty Visits Mantralayam ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಗುರು ವೈಭವೋತ್ಸವದ ಸಂಭ್ರಮಕ್ಕೆ ಸ್ಯಾಂಡಲ್ವುಡ್ ಸ್ಟಾರ್ ರಿಷಭ್ ಶೆಟ್ಟಿ ಭೇಟಿ ನೀಡಿದ್ದು, ಈ ಸುಂದರ ಕ್ಷಣಗಳ ಫೋಟೋ ಗ್ಯಾಲರಿ ಮತ್ತು ವರದಿ ಇಲ್ಲಿದೆ ನೋಡಿ!

ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ
ರಾಯಚೂರು ಜಿಲ್ಲೆಯ ಮಂತ್ರಾಲಯದಲ್ಲಿ ಗುರು ವೈಭವೋತ್ಸವದ ಸಂಭ್ರಮ ಮನೆಮಾಡಿದೆ. ಈ ಪವಿತ್ರ ಕಾರ್ಯಕ್ರಮದ ಅಂಗವಾಗಿ ಮಂತ್ರಾಲಯಕ್ಕೆ ಭೇಟಿ ನೀಡಿದ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ, ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದರು.
ರಾಯರ ಬೃಂದಾವನದ ಮುಂದೆ ರಿಷಬ್ ಶೆಟ್ಟಿ ನಮನ
ಮಠಕ್ಕೆ ಆಗಮಿಸಿದ ರಿಷಭ್ ಶೆಟ್ಟಿ ಅವರು ರಾಯರ ಬೃಂದಾವನದ ಮುಂದೆ ಭಕ್ತಿಯಿಂದ ಕುಳಿತು ದರ್ಶನ ಪಡೆದರು. ರಾಯರ ಹುಟ್ಟುಹಬ್ಬದಂದೇ ಮಂತ್ರಾಲಯಕ್ಕೆ ಬಂದಿರುವುದು ತಮಗೆ ಲಭಿಸಿದ ದೊಡ್ಡ ಸೌಭಾಗ್ಯ ಎಂದು ಅವರು ಈ ವೇಳೆ ಸಂತಸ ಹಂಚಿಕೊಂಡರು.
ಪರಿಮಳ ತೀರ್ಥದಲ್ಲಿ ವೈಭವದ ತೆಪ್ಪೋತ್ಸವ ರಿಷಬ್ ಶೆಟ್ಟಿ ಭಾಗಿ
ರಾಯರ ದರ್ಶನದ ನಂತರ ನಡೆದ ವೈಭವೋಪೇತ 'ಪರಿಮಳ ತೀರ್ಥ'ದ ತೆಪ್ಪೋತ್ಸವದಲ್ಲಿ ರಿಷಭ್ ಶೆಟ್ಟಿ ಭಾಗಿಯಾದರು. ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ತುಂಗಭದ್ರಾ ನದಿಯ ತಟದಲ್ಲಿ ಈ ದೃಶ್ಯ ನೋಡುಗರ ಕಣ್ಮನ ಸೆಳೆಯಿತು.
ಶ್ರೀ ಸುಬುಧೇಂದ್ರ ತೀರ್ಥರ ಜೊತೆ ಸಮಾಲೋಚನೆ
ತೆಪ್ಪೋತ್ಸವದ ಸಂದರ್ಭದಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳೊಂದಿಗೆ ರಿಷಭ್ ಶೆಟ್ಟಿ ಕಾಣಿಸಿಕೊಂಡರು. ಶ್ರೀಗಳ ಆಶೀರ್ವಾದ ಪಡೆದು, ಮಠದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಮಂತ್ರಾಲಯಕ್ಕೆ ಬಂದರೆ ಸಿಗುವ ಖುಷಿಯೇ ಬೇರೆ ಎಂದ ರಿಷಬ್ ಶೆಟ್ಟಿ
ಮಾಧ್ಯಮಗಳೊಂದಿಗೆ ಮಾತನಾಡಿದ ರಿಷಭ್, "ಮಂತ್ರಾಲಯಕ್ಕೆ ಬಂದಾಗಲೆಲ್ಲ ಮನಸ್ಸಿಗೆ ಶಾಂತಿ ಸಿಗುತ್ತದೆ. ರಾಯರ ದರ್ಶನ ಪಡೆಯುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ನಾವು ಯಾವಾಗಲೂ ರಾಯರ ದರ್ಶನಕ್ಕೆ ಬರುತ್ತಿರುತ್ತೇವೆ" ಎಂದು ಭಾವುಕರಾಗಿ ನುಡಿದರು.
'ಜೈ ಹನುಮಾನ್' ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟ ರಿಷಬ್ ಶೆಟ್ಟಿ
ಬಹುನಿರೀಕ್ಷಿತ 'ಜೈ ಹನುಮಾನ್' ಚಿತ್ರದ ಬಗ್ಗೆ ಮಾತನಾಡಿದ ಅವರು, "ನಿನ್ನೆ ಅಷ್ಟೇ ಸಿನಿಮಾದ ಮುಹೂರ್ತ ನೆರವೇರಿದೆ. ಇನ್ನು ಶೂಟಿಂಗ್ ಆರಂಭವಾಗಬೇಕಿದೆ. ಹನುಮಂತನ ಬಗ್ಗೆ ಒಂದು ಅದ್ಭುತ ಸಿನಿಮಾವನ್ನು ಮಾಡುತ್ತಿದ್ದೇವೆ, ಇದರಲ್ಲಿ ಒಳ್ಳೆಯ ವಿಚಾರಗಳು ಇರಲಿವೆ" ಎಂದರು.
ದೈವ ಮತ್ತು ಪಾತ್ರಗಳ ಆಯ್ಕೆಯ ಬಗ್ಗೆ ಸ್ಪಷ್ಟನೆ ನೀಡಿದ ರಿಷಬ್ ಶೆಟ್ಟಿ
ಸಿನಿಮಾ ಆಯ್ಕೆಯ ಬಗ್ಗೆ ಉತ್ತರಿಸಿದ ರಿಷಭ್, 'ಮೂಲತಃ ನಾವು ಕಲಾವಿದರು. ನಿರ್ದೇಶಕರು ಕಥೆ ಹೇಳಿದಾಗ, ಪಾತ್ರ ಮತ್ತು ಕಥೆ ಇಷ್ಟವಾದರೆ ಖಂಡಿತ ಸಿನಿಮಾ ಮಾಡುತ್ತೇವೆ. ಒಳ್ಳೆಯ ನಿರ್ಮಾಪಕರು ಸಿಕ್ಕಾಗ ಇಂತಹ ಪಾತ್ರಗಳನ್ನು ಮಾಡುವ ಆಸೆ ಪ್ರತಿಯೊಬ್ಬ ಕಲಾವಿದನಿಗೂ ಇರುತ್ತದೆ' ಎಂದು ತಿಳಿಸಿದರು.
ರಾಯರ ಕುರಿತ ಸಿನಿಮಾ ಮಾಡುತ್ತಾರಾ ರಿಷಬ್?
ರಾಯರ ಕುರಿತು ಸಿನಿಮಾ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಂತ್ರಾಲಯದ ರಾಯರ ಬಗ್ಗೆ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ, ಅದು ತುಂಬಾ ಕಷ್ಟದ ಕೆಲಸ. ಸದ್ಯಕ್ಕೆ ಏನೂ ಹೇಳಲಾಗದು, ಮುಂದಿನ ದಿನಗಳಲ್ಲಿ ನೋಡೋಣ’ ಎಂದು ಪ್ರತಿಕ್ರಿಯಿಸಿದರು.
ಪ್ರೇಕ್ಷಕರಿಗೆ ಟೀಸರ್ ಮೂಲಕ ಸಿಗಲಿದೆ ಉತ್ತರ
'ಜೈ ಹನುಮಾನ್' ಚಿತ್ರದಿಂದ ಜನರು ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ, ಸಿನಿಮಾದ ಟೀಸರ್ ಮತ್ತು ಟ್ರೈಲರ್ ಬಿಡುಗಡೆಯಾದಾಗ ಜನರಿಗೆ ಅದರ ವೈಭವ ತಿಳಿಯಲಿದೆ. ಖಂಡಿತವಾಗಿಯೂ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾ ಇದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಶ್ಮಿಕಾ ಮದುವೆ ಬಗ್ಗೆ ರಿಷಬ್ ಶೆಟ್ಟಿ ಮೌನವೇ ಉತ್ತರ
ಇದೇ ವೇಳೆ ನಟಿ ರಶ್ಮಿಕಾ ಮಂದಣ್ಣ ಅವರ ಮದುವೆ ಆಹ್ವಾನ ಪತ್ರಿಕೆ ಬಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ರಿಷಭ್ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪ್ರಶ್ನೆಯನ್ನು ನಸುನಗುತ್ತಲೇ ದಾಟಿದ ಅವರು ಮಂತ್ರಾಲಯದಿಂದ ನಿರ್ಗಮಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

