ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ 'ಕಾಂತಾರ' ಲೀಲಾ; ಅಭಿಷೇಕ್ ಅಂಬರೀಶ್ಗೆ ಜೋಡಿಯಾದ ಸಪ್ತಮಿ ಗೌಡ
ಕಾಂತಾರ ಸಿನಿಮಾ ಬಳಿಕ ಸಪ್ತಮಿ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ, ನಾಯಕ ಯಾರು ಎನ್ನುವ ಪ್ರಶ್ನೆ ಎದುರಾಗಿತ್ತು. ಇದೀಗ ಎಲ್ಲಾ ಪ್ರಶ್ನೆ ಹಾಗೂ ಕುತೂಹಲಗಳಿಗೆ ತೆರೆಬಿದ್ದಿದೆ.
ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟಿ ಸಪ್ತಮಿ ಗೌಡ ಅವರಿಗೆ ಅವಕಾಶಗಳ ಸುರಿಮಳೆಯೇ ಬರುತ್ತಿದೆ. ಆದರೆ ಸಪ್ತಮಿ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿ ಕೊಳ್ಳುತ್ತಿದ್ದಾರೆ. ಕಾಂತಾರ ಬಳಿಕ ಸಪ್ತಮಿ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ, ನಾಯಕ ಯಾರು ಎನ್ನುವ ಪ್ರಶ್ನೆ ಎದುರಾಗಿತ್ತು. ಇದೀಗ ಎಲ್ಲಾ ಪ್ರಶ್ನೆ ಹಾಗೂ ಕುತೂಹಲಗಳಿಗೆ ತೆರೆಬಿದ್ದಿದೆ.
ಕಾಂತಾರ ಸೂಪರ್ ಸಕ್ಸಸ್ ಬಳಿಕ ಸಪ್ತಮಿ ಗೌಡ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಅಲ್ಲದೇ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ. ಕಾಂತಾರ ಲೀಲಾ ಮುಂದಿನ ಸಿನಿಮಾ ಅಭಿಷೇಕ್ ಅಂಬರೀಷ್ ಜೊತೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆ ಸುದ್ದಿ ಈಗ ನಿಜವಾಗಿದ್ದು ಅಭಿಷೇಕ್ ಜೊತೆ ಸಪ್ತಮಿ ರೊಮ್ಯಾನ್ಸ್ ಮಾಡುತ್ತಿದ್ದಾರೆ.
ಅಭಿಷೇಕ್ ಅಂಬರೀಶ್ ಮತ್ತು ಸಪ್ತಮಿ ಗೌಡ ಅಭಿನಯದ ಹೊಸ ಸಿನಿಮಾದ ಮುಹೂರ್ತ ಸೋಮವಾರ ಬೆಳಿಗ್ಗೆ ನಗರದ ಶ್ರೀ ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ಯಶಸ್ವಿಯಾಗಿ ನೆರವೇರಿದೆ. ಅಂದಹಾಗೆ ಈ ಸಿನಿಮಾಗೆ ಕಾಳಿ ಎಂದು ಹೆಸರಿಡಲಾಗಿದೆ. ವಿಶೇಷ ಎಂದರೆ ಚಿತ್ರಕ್ಕೆ ಎಸ್. ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.
ಕಾಳಿ ಸಿನಿಮಾ 1990ರ ದಶಕದ ಕಾವೇರಿ ಗಲಭೆಯ ಹಿನ್ನೆಲೆಯಲ್ಲಿ ನಡೆಯುವ ಚಿತ್ರವಾಗಿದೆ. ನಿರ್ದೇಶಕ ಕೃಷ್ಣ ಅವರ ಪತ್ನಿ ಸ್ವಪ್ನಾ ಕೃಷ್ಣ ತಮ್ಮ RRR ಮೋಷನ್ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಾಣ ಮಾಡುತ್ತಿದ್ದಾರೆ.
ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರವನ್ನು ನಿರ್ಮಿಸುವ ಮೂಲಕ ಪ್ರಾರಂಭವಾದ RRR ಮೋಷನ್ ಪಿಕ್ಚರ್ಸ್ ಸಂಸ್ಥೆಯು, ಆ ನಂತರ ಪುನೀತ್ ರಾಜ್ಕುಮಾರ್ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಘೋಷಿಸಿತ್ತು. ಆದರೆ, ಪುನೀತ್ ಅವರ ಅಕಾಲಿಕ ನಿಧನದಿಂದಾಗಿ, ಸಂಸ್ಥೆಯ ಎರಡನೇ ನಿರ್ಮಾಣವನ್ನು ಅವರಿಗೇ ಅರ್ಪಿಸಲಾಗುವುದು. 3ನೇ ಸಿನಿಮಾ ಕಾಳಿಯಾಗಿದೆ.
ಕಾಳಿ ಚಿತ್ರಕ್ಕೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಟಗರು' 'ಸಲಗ' ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಚರಣ್ ರಾಜ್ ಈ ಚಿತ್ರದ ಸಂಗೀತ ನೀಡುತ್ತಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ ಮತ್ತು 'ಕೆಜಿಎಫ್' ಖ್ಯಾತಿಯ ಚಂದ್ರಮೌಳಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುುತ್ತಿದ್ದಾರೆ. 2023ರ ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.