ರವಿಚಂದ್ರನ್ ಹೊಸ ಚಿತ್ರ 'ಗೌರಿ'; ಕ್ಲಾಪ್ ಮಾಡಿದ ಶಿವಣ್ಣ!
ಕ್ರೇಜಿ ಸ್ಟಾರ್ ಸಿನಿಮಾ ಮುಹೂರ್ತದಲ್ಲಿ ಭಾಗಿಯಾದ ಹ್ಯಾಟ್ರಿಕ್ ಹೀರೋ. ಬೆಂಗಳೂರಿನ ಮಹಾಲಕ್ಷ್ಮಿ ದೆವಸ್ಥಾನದಲ್ಲಿ ಪೂಜೆ...
ಅನೀಶ್ ನಿರ್ದೇಶನದಲ್ಲಿ ರವಿಚಂದ್ರನ್ ನಟನೆಯಲ್ಲಿ ಸೆಟ್ಟೇರಿರುವ ಹೊಸ ಚಿತ್ರ ‘ಗೌರಿ’. ಇದಕ್ಕೆ ಬಿ/ಎಚ್ ಶಂಕರ್ ಎಂಬ ಟ್ಯಾಗ್ಲೈನ್ ಇದೆ. ಈ ಸಿನಿಮಾದ ಮುಹೂರ್ತ ಬೆಂಗಳೂರಿನ ಮಹಾಲಕ್ಷ್ಮೇ ದೇವಸ್ಥಾನದಲ್ಲಿ ನಡೆಯಿತು.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಚಂದ್ರನ್, ‘ಗೌರಿ ಸಿನಿಮಾವನ್ನು ಹೇಳಿ ಅರ್ಥ ಮಾಡಿಸಲಾಗದು, ನೋಡಿ ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಇದು ರೆಗ್ಯುಲರ್ ಸಿನಿಮಾ ಅಲ್ಲ.
ಕೇವಲ ಮೂರೇ ಜನ ಕಲಾವಿದರಿರುತ್ತಾರೆ. ಪ್ರಾಣಿಗಳೆಲ್ಲ ಇರುತ್ತವೆ. ದಾಂಡೇಲಿಯಲ್ಲಿ ಶೂಟಿಂಗ್ ನಡೆಯಲಿದೆ. ಜ.20ರಿಂದ ಚಿತ್ರೀಕರಣ ಆರಂಭ.
ಹೊಸ ವರ್ಷದ ಆರಂಭದಲ್ಲೇ ಪರ್ಫಾರ್ಮೆನ್ಸ್ಗೆ ಅವಕಾಶ ಇರುವ ಪಾತ್ರ ಸಿಕ್ಕಿದೆ. ಈಗ ಹೊಸ ಬಗೆಯ ಸಿನಿಮಾಗಳ ಕಾಲ. ಇಂಥಾ ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸೋದು ಖುಷಿ ಕೊಟ್ಟಿದೆ’ ಎಂದರು.
ನಿರ್ದೇಶಕ ಅನೀಶ್, ‘ದಾಂಡೇಲಿಯಲ್ಲಿ ರಿಯಲ್ ಹುಲಿಯನ್ನು ಬಳಸಿ ಶೂಟಿಂಗ್ ಮಾಡುವ ಪ್ಲಾನ್ ಇದೆ. ದಟ್ಟಕಾಡಿನಲ್ಲಿ ಚಿತ್ರೀಕರಣ ನಡೆಯಲಿದೆ. ಇದರಲ್ಲಿ ಗಂಡ ಹೆಂಡತಿ ಸಂಬಂಧವನ್ನು ವಿಭಿನ್ನ ನೆಲೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ತಾಂತ್ರಿಕವಾಗಿ ಹಲವು ಹೊಸ ಪ್ರಯೋಗಗಳನ್ನು ಮಾಡುತ್ತಿದ್ದೇವೆ’ ಎಂದರು.
ನಾಯಕಿ ಬರ್ಕಾ, ‘ಇದು ನನ್ನ ಮೊದಲ ದಕ್ಷಿಣ ಭಾರತೀಯ ಚಿತ್ರ. ರವಿಚಂದ್ರನ್ ಅವರಂಥಾ ಕಲಾವಿದರ ಜೊತೆ ನಟಿಸಲು ಹೆಮ್ಮೆ ಅನಿಸುತ್ತೆ’ ಎಂದರು. ನಿರ್ಮಾಪಕರಾದ ಎನ್ ಎಸ್ ರಾಜ್ಕುಮಾರ್, ವಿ ಎಸ್ ರಾಜ್ಕುಮಾರ್ ಹಾಗೂ ಚಿತ್ರತಂಡದವರು ಹಾಜರಿದ್ದರು.