ಸಿಂಹ ಕಂಡು ರಂಘಾಯಣ ರಘುಗೆ ನಡುಕ, ಮಧ್ಯರಾತ್ರಿ ಸಿಂಹ ಗುಡಾರ ಕೆರೀತಾ ಇತ್ತು: ರಂಗಾಯಣ ರಘು ಫುಲ್ ಭಯ!
ರೊಮ್ಯಾಂಟಿಕ್ ಡ್ರಾಮಾ ಬಾನದಾರಿಯಲ್ಲಿ ಚಿತ್ರದ ಟ್ರೈಲರ್ ರಿಲೀಸ್. ಕೀನ್ಯಾದಲ್ಲಿ ಚಿತ್ರೀಕರಣ ಹೇಗಿತ್ತು ಎಂದು ರಿವೀಲ್ ಮಾಡಿದ ರಘು...
ಸೆ. 28ಕ್ಕೆ ಸಿನಿಮಾ ಬಿಡುಗಡೆ ಬಾನದಾರಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್, ರುಕ್ಮಿಣಿ ವಸಂತ್, ರೇಶ್ಮಾ ಮತ್ತು ರಂಗಾಯನ ರಘು ನಟಿಸಿರುವ ಸಿನಿಮಾ.
‘ಅನಿಮಲ್ಸ್ ಆರ್ ಕಮಿಂಗ್, ನೋ ಪ್ರಾಬ್ಲಂ ಅನ್ನುತ್ತಿದ್ದ ಕೀನ್ಯಾದ ಆ ಗೈಡ್. ನಮಗೋ ತೀರಾ ಸಮೀಪದಲ್ಲಿ ಜೀಪಿಗೆ ಮೈ ಒರೆಸುತ್ತ ನಿಂತ ಸಿಂಹ ಕಂಡು ತೊಳ್ಳೆಯಲ್ಲಿ ನಡುಕ'
ಇದರ ನಡುವೆ ಗಣೇಶ್, ಅದು ರೊಮ್ಯಾಂಟಿಕ್ ಆಗಿ ನನ್ ಕಡೆಗೇ ನೋಡ್ತಿದೆ, ಇಳೀಲಾ ಅಂತಿದ್ದರು. ಇದೆಲ್ಲ ಮುಗಿದು ರಾತ್ರಿ ನೆಮ್ಮದಿಯಿಂದ ನಿದ್ದೆ ಹೋಗೋಣ ಅಂದರೆ ಸಿಂಹವೊಂದು ಬಯಲಲ್ಲಿ ಹಾಕಿದ್ದ ನಮ್ಮ ಗುಡಾರವನ್ನು ಕೆರೀತಿತ್ತು. ಜೀವ ಕೈಯಲ್ಲಿ ಹಿಡಿದು ನಡುಗುತ್ತಾ ಕೂತಿದ್ದೆ.’
‘ಬಾನದಾರಿಯಲಿ’ ಟ್ರೇಲರ್ ಲಾಂಚ್ ವೇಳೆ ರಂಗಾಯಣ ರಘು ಬಿಚ್ಚಿಟ್ಟ ಕೀನ್ಯಾ ನೆನಪುಗಳಿವು. ಈ ಸಿನಿಮಾ ಸೆ.28ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾ ಟೀಮ್ ಕೀನ್ಯಾ ಶೂಟಿಂಗ್ ಗುಂಗಲ್ಲೇ ಇದ್ದಂತಿದ್ದರು.
ನಾಯಕ ಗಣೇಶ್ ಸಹ ಕೀನ್ಯಾದ ತಮಾಷೆಯ ಘಟನೆ ಹಂಚಿಕೊಂಡು ನಂತರ ಸಿನಿಮಾ ಬಗ್ಗೆ ಮಾತನಾಡಿದರು. ‘ಇದು ನನ್ನ ಚಿತ್ರ ಜೀವನದಲ್ಲಿ ಬೇರೆ ಥರದ ಕಥೆ. ಈ ಸಿನಿಮಾ ನಿರ್ದೇಶಕ ಪ್ರೀತಂ ಗುಬ್ಬಿ ಹಾಗೂ ನಾನು ಕ್ಲಾಸ್ಮೇಟ್ಸ್.
ಪ್ರೀತಂಗೆ ಸಂಜೆ ಹೊತ್ತು ಚೆನ್ನಾಗಿ ಮಿಕ್ಸಿಂಗ್ ಮಾಡೋದು ಗೊತ್ತು. ಸಿನಿಮಾದಲ್ಲೂ ನಗು, ಅಳುವನ್ನು ಭರ್ಜರಿಯಾಗಿ ಮಿಕ್ಸ್ ಮಾಡ್ತಾನೆ’ ಅಂದರು.
ನಾಯಕಿ ರುಕ್ಮಿಣಿ ವಸಂತ್ ಅವರನ್ನು ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಪುಟ್ಟಿ ಪಾತ್ರದಿಂದಲೇ ಕೂಗಿ ಕರೆದು ಶಿಳ್ಳೆ, ಚಪ್ಪಾಳೆಗಳ ಮೂಲಕ ಯಾವ ಹೀರೋಗೂ ಕಡಿಮೆ ಇಲ್ಲದಂತೆ ಪ್ರೇಕ್ಷಕರು ಸ್ವಾಗತಿಸಿದ್ದು ವಿಶೇಷವಾಗಿತ್ತು. ರುಕ್ಮಿಣಿ ಈ ಸಿನಿಮಾದಲ್ಲಿನ ಲೀಲಾ ಪಾತ್ರಕ್ಕಾಗಿ ಸರ್ಫಿಂಗ್ ಕಲಿತ ಅನುಭವ ಹಂಚಿಕೊಂಡರು.
ಮತ್ತೋರ್ವ ನಾಯಕಿ ರೀಷ್ಮಾ ನಾಣಯ್ಯ ತಾನು ಕಾದಂಬರಿ ಎಂಬ ಪಾತ್ರದಲ್ಲಿ ನಟಿಸಿರೋದಾಗಿ ಹೇಳಿದರು. ನಿರ್ದೇಶಕ ಪ್ರೀತಂ ಗುಬ್ಬಿ ಈ ಸಿನಿಮಾ ಕೆಲಸ ಪ್ರಯುಕ್ತ ಚೆನ್ನೈಯಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಗೈರಾಗಿದ್ದರು. ನಿರ್ಮಾಪಕ ಶ್ರೀವಾರಿ ಗೋಪಿ, ಸಿನಿಮಾ ವಿತರಕ ಯೋಗಿ ಜಿ ರಾಜ್, ಸಿನಿಮಾಟೋಗ್ರಾಫರ್ ಅಭಿಲಾಷ್ ಕಲ್ಲತ್ತಿ ಇದ್ದರು.