- Home
- Entertainment
- Sandalwood
- ಮನೆಯಲ್ಲಿ ಏನೇ ಕಳುವಾದ್ರೂ ನಾನೇ ಅಂತಿದ್ರು: ನನ್ನ ಕುದುರೆ ಅಂತ ಕರೀತಿದ್ರು- ಬಾಲ್ಯಕ್ಕೆ ಜಾರಿದ ಅಶ್ವಿನಿ ಪುನೀತ್
ಮನೆಯಲ್ಲಿ ಏನೇ ಕಳುವಾದ್ರೂ ನಾನೇ ಅಂತಿದ್ರು: ನನ್ನ ಕುದುರೆ ಅಂತ ಕರೀತಿದ್ರು- ಬಾಲ್ಯಕ್ಕೆ ಜಾರಿದ ಅಶ್ವಿನಿ ಪುನೀತ್
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು 'ನಾ ಕಂಡ ಅಪ್ಪು' ಸಂದರ್ಶನದಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಕಳೆದ ದಿನಗಳು, 'ಕುದುರೆ' ಎಂಬ ಅಡ್ಡಹೆಸರು, ಮತ್ತು ಮರ ಹತ್ತಿ ಹಣ್ಣು ಕೀಳುತ್ತಿದ್ದ ತುಂಟಾಟದ ಕ್ಷಣಗಳನ್ನು ಅವರು ಮೆಲುಕು ಹಾಕಿದ್ದಾರೆ.

ಬಾಲ್ಯದ ನೆನಪು
ಅಗಲಿದ ಮೇಲೂ ಇನ್ನೂ ಅಸಂಖ್ಯ ಹೃದಯಗಳಲ್ಲಿ ಮನೆಮಾಡಿಕೊಂಡು ಇರುವವರು, ಎಷ್ಟೋ ಕನ್ನಡಿಗರ ಹೃದಯದಲ್ಲಿ ಇನ್ನೂ ಜೀವಂತವಾಗಿ ಇರುವವರು ನಟ ಪುನೀತ್ ರಾಜ್ಕುಮಾರ್. ಬದುಕಿದ್ದಾಗ ಎಷ್ಟೋ ಮನೆಗೆ ಬೆಳಕಾಗಿದ್ದವರು ಅವರು. ಇದೀಗ ಅವರ ಹಾದಿಯಲ್ಲಿಯೇ ಸಾಗುತ್ತಿರುವವರು ಅವರ ಪತ್ನಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneet Rajkumar). ಇದೀಗ ಅಶ್ವಿನಿ ಅವರು 'ಪಿಆರ್ಕೆ ಸ್ಟಾರ್ ಫ್ಯಾನ್ಡಮ್' ಯುಟ್ಯೂಬ್ ಚಾನೆಲ್ನಲ್ಲಿ ಆ್ಯಂಕರ್ ಅನುಶ್ರೀ ಅವರ ಜೊತೆಗೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನಾ ಕಂಡ ಅಪ್ಪು ಹೆಸರಿನಲ್ಲಿ ಈ ಸಂದರ್ಶನವನ್ನು ನಡೆಸಲಾಗಿದ್ದು, ಇದರಲ್ಲಿ ಅಶ್ವಿನಿ ಅವರು, ಇದುವರೆಗೆ ಯಾರಿಗೂ ಗೊತ್ತಿಲ್ಲ ಹಲವಾರು ವಿಷಯಗಳನ್ನು ತೆರೆದಿಟ್ಟಿದ್ದಾರೆ.
50-60 ಮಂದಿ ಇದ್ವಿ
ನಮ್ಮದು ಚಿಕ್ಕಮಂಗಳೂರು ಹತ್ರಾ ನಮ್ಮೂರು ಕುಶಾವರ ಅಂತ. ದೊಡ್ಡ ಫ್ಯಾಮಿಲಿ. 50 -60 ಮಂದಿ ಇದ್ವಿ. ನಾನು ಚಿಕ್ಕವಳು ಇರುವಾಗ ಸಿಕ್ಕಾಪಟ್ಟೆ ನಾಟಿ. ಕುದುರೆ ಅಂತಾನೇ ನನ್ನನ್ನು ಕರೆಯುತ್ತಿದ್ದರು. ನನಗೆ ಒಬ್ಬ ಸಹೋದರ, ಒಬ್ಬ ಸಹೋದರಿ. ಸಹೋದರಿ ಆಸ್ಟ್ರೇಲಿಯಾದಲ್ಲಿ ಇದ್ದಾಳೆ. ನಾನು ಹುಟ್ಟಿದ್ದು ಮೈಸೂರಿನಲ್ಲಾದರೂ ಮೂರು ವರ್ಷ ಇದ್ದಾಗಲೇ ಬೆಂಗಳೂರಿಗೆ ಬಂದಿದ್ದರಿಂದ ಇಲ್ಲಿಯೇ ಎಲ್ಲಾ ಶಿಕ್ಷಣ ನಡೆದದ್ದು ಎನ್ನುವುದಾಗಿ ಅಶ್ವಿನಿ ಹೇಳಿದ್ದಾರೆ.
ಟಾಮ್ಬಾಯ್ ಅಂತಿದ್ರು
ನನ್ನನ್ನು ಟಾಮ್ಬಾಯ್ ಎನ್ನುತ್ತಿದ್ದರು. ಸಿಕ್ಕಾಪಟ್ಟೆ ತುಂಟಿಯಾಗಿದ್ದೆ. ರಜೆ ಬಂದಾಗ ಊರಿಗೆ ಕಸಿನ್ಸ್ ಕರ್ಕೊಂಡು ಹೋಗ್ತಿದ್ದೆ. ಅಲ್ಲಿ ಮರಗಳಲ್ಲಿ ಹಣ್ಣು ಇತ್ಯಾದಿ ಏನೇ ಕಳುವಾದ್ರೂ ಮೊದಲು ನನ್ನ ಹೆಸರೇ ಬರ್ತಿತ್ತು. ಮರ ಹತ್ತಿ ಹಲಸಿನಕಾಯಿ, ಅದೂ ಇದೂ ಎಲ್ಲಾ ಕೊಯ್ದು ಬಿಡ್ತಿದ್ದೆ. ಅದಕ್ಕೆ ಮನೆಯಲ್ಲಿ ಏನಾದ್ರೂ ಕಾಣೆಯಾಗಿದೆ ಎಂದರೆ ನನ್ನದೇ ಕಿತಾಪತಿ ಎಂದು ಮನೆಯವರಿಗೆಲ್ಲಾ ಗೊತ್ತಾಗುತ್ತಿತ್ತು ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಅಶ್ವಿನಿ.
ಆ ಸೀಕ್ರೆಟ್ ಹೇಳಲ್ಲ
ಒಮ್ಮೆ ಕಾಫಿ ಎಸ್ಟೇಟ್ನಲ್ಲಿ ಇದ್ದ ಹಲಸಿನ ಹಣ್ಣಿನ ಮರ ಹತ್ತಿ ಕಾಯಿಯಾಗಿರುವ ಹಲಸನ್ನೇ ಕೊಯ್ದು ಬೈಸಿಕೊಂಡಿರುವ ಬಗ್ಗೆಯೂ ನೆನಪು ಮಾಡಿಕೊಂಡಿದ್ದಾರೆ ಅಶ್ವಿನಿ. ಅದನ್ನು ನಾನು ಮಾಡೇ ಇಲ್ಲ ಎಂದೆ. ನನ್ನ ಕಸಿನ್ಸ್ ಕೂಡ ನನಗೆ ಸಪೋರ್ಟ್ ಮಾಡಿದ್ರು ಎಂದು ನೆನಪಿಸಿಕೊಂಡಿದ್ದಾರೆ. ಈಗಲೂ ಮೂರು ತಿಂಗಳಿಗೆ ಒಮ್ಮೆ ಎಲ್ಲಾ ಕಸಿನ್ಸ್ ಮೀಟ್ ಆಗ್ತೀವಿ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕ್ತೀವಿ ಎಂದಿದ್ದಾರೆ. ಆದರೆ ನಿಮ್ಮ ಕಸಿನ್ಸ್ ನಿಮ್ಮ ಬಾಲ್ಯದ ಯಾವ ದಿನಗಳನ್ನು ಹೆಚ್ಚಾಗಿ ನೆನಪಿಸಿಕೊಳ್ತಾರೆ ಎಂದು ಅನುಶ್ರೀ (Anchor Anushree) ಕೇಳಿದಾಗ ಇಲ್ಲಪ್ಪಾ ಅವೆಲ್ಲಾ ತುಂಬಾ ಸೀಕ್ರೆಟ್, ಹೇಳಲ್ಲಾ ಎಂದು ಜೋರಾಗಿ ನಕ್ಕಿದ್ದಾರೆ ಅಶ್ವಿನಿ.
ಕ್ರೀಡೆಯಲ್ಲಿ ಆಸಕ್ತಿ
ಗಲ್ಲಿ ಕ್ರಿಕೆಟ್ ತುಂಬಾ ಪ್ರೀತಿ, ಕ್ರೀಡೆಗಳಲ್ಲಿ ಆಸಕ್ತಿ, ಬ್ಯಾಡ್ಮಿಂಟನ್ ಕೂಡ ಆಡ್ತಿದ್ದೆ. ಸ್ಕೂಲ್ನಲ್ಲಿಯೂ ಟಾಪ್ ಅಂತೇನೂ ಇರಲಿಲ್ಲ. ಫಸ್ಟ್ ಕ್ಲಾಸ್ ಬರ್ತಿದ್ದೆ ಅಷ್ಟೇ. ಕಾಲೇಜಿಗೆ ಬಂದ ಮೇಲೆ ಓದು ಹೆಚ್ಚಾಯ್ತು. ಗಣಿತ ಇಷ್ಟ ಇರಲಿಲ್ಲ. ನೌಕರಿ ಮಾಡುವ ಆಸೆ ಇತ್ತು. ಆಮೇಲೆ ಇಂಗ್ಲೀಷ್ ಸಾಹಿತ್ಯದಲ್ಲಿ ಮಾಸ್ಟರ್ಸ್ ಮಾಡಿದ್ದೆ. ಅದಾದ ಮೇಲೆ ಪುನೀತ್ ಸಿಕ್ಕರು. ಅವರು ಸಿಗುವ ಮುಂದೆ ಎರಡು ವರ್ಷ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಎಚ್ಆರ್ ಮಾರ್ಕೆಂಟಿಂಗ್ನಲ್ಲಿ ಕೆಲಸ ಮಾಡಿದ್ದೆ ಎಂದು ಆ ದಿನಗಳ ಬಗ್ಗೆ ಅಶ್ವಿನಿ ಹೇಳಿದ್ದಾರೆ.
ಸಿನಿಮಾ ಅಷ್ಟೊಂದು ನೋಡ್ತಿರಲಿಲ್ಲ
ಬಾಲ್ಯದಲ್ಲಿ ಸಿನಿಮಾ ಅಂತೇನೂ ಅಷ್ಟಾಗಿ ನೋಡ್ತಿರಲಿಲ್ಲ. ಆದ್ರೆ ಅಪ್ಪ-ಅಮ್ಮ ಅಪ್ಪಾಜಿ ಸಿನಿಮಾ ಬಂದಾಗ ನೋಡ್ತಿದ್ರು.ರೇಡಿಯೋ ಕೇಳೋದು ಹೆಚ್ಚಾಗಿತ್ತು. ನಮ್ಮ ತಂದೆ ಬೆಟ್ಟದ ಹೂವು ಸಿನಿಮಾಗೆ ಕರ್ಕೊಂಡು ಹೋಗಿದ್ದು ನೆನಪಿದೆ. ಆದರೂ ಸಿನಿಮಾ ಅಷ್ಟೊಂದು ನೋಡುತ್ತಿರಲಿಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

