- Home
- Life
- Relationship
- ವಿವಾಹ ವದಂತಿ ನಡುವೆ ಒಟ್ಟಿಗೆ ರವಿಶಂಕರ ಗುರೂಜಿ ಆಶೀರ್ವಾದ ಪಡೆದ ತೇಜಸ್ವಿ ಸೂರ್ಯ, ಗಾಯಕಿ ಶಿವಶ್ರೀ
ವಿವಾಹ ವದಂತಿ ನಡುವೆ ಒಟ್ಟಿಗೆ ರವಿಶಂಕರ ಗುರೂಜಿ ಆಶೀರ್ವಾದ ಪಡೆದ ತೇಜಸ್ವಿ ಸೂರ್ಯ, ಗಾಯಕಿ ಶಿವಶ್ರೀ
ಆರ್ಟ್ ಆಫ್ ಲಿವಿಂಗ್ನ ಭಾವ್-2025 ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಒಟ್ಟಿಗೆ ಕಾಣಿಸಿಕೊಂಡು ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದಿದ್ದಾರೆ. ವಿವಾಹದ ವದಂತಿಗಳ ನಡುವೆ ಈ ಘಟನೆ ಗಮನ ಸೆಳೆದಿದೆ. ಶಿವಶ್ರೀ ಅವರು ಕಾರ್ಯಕ್ರಮದಲ್ಲಿ ಹಾಡನ್ನು ಹಾಡಿದ್ದಾರೆ.

ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ನಡೆದ ಭಾವ್-2025ರ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರು ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿರುವ ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದ ಅವರು ಒಟ್ಟಿಗೆ ಕೈ-ಕೈ ಹಿಡಿದುಕೊಂಡು ಬಂದು ಒಟ್ಟಿಗೆ ವೇದಿಕೆ ಮೇಲಿದ್ದ ರವಿಶಂಕರ ಗುರೂಜಿ ಅವರ ಆಶೀರ್ವಾದ ಪಡೆದಿದ್ದಾರೆ.
ಆರ್ಟ್ ಆಫ್ ಲಿವಿಂಗ್ನಲ್ಲಿ ನಡೆಯುತ್ತಿರುವ ಕಾರ್ಯಕ್ರಮ ವೊಂದರಲ್ಲಿ ಭಾಗಿಯಾದ ಈ ಜೋಡಿ, ಒಟ್ಟಾಗಿ ವೇದಿಕೆ ಮೇಲೆ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದು ಗಮನ ಸೆಳೆದಿದೆ. ತೇಜಸ್ವಿ ಸೂರ್ಯ ಹಾಗೂ ಚೆನ್ನೈ ಮೂಲದ ಗಾಯಕಿ ಶಿವಶ್ರೀ ಅವರು ಪರಸ್ಪರ ಕೈ ಹಿಡಿಯಲಿದ್ದು, ವಿವಾಹ ಮಾತುಕತೆ ನಡೆದಿದೆ ಎಂದು ಹೇಳಲಾಗಿತ್ತು.
ಈ ಬಗ್ಗೆ ಸುದ್ದಿಗಳು ಹರಿದಾಡಿದ್ದರೂ ತೇಜಸ್ವಿ ಸೂರ್ಯ ಅಥವಾ ಶಿವಶ್ರೀ ಸೇರಿದಂತೆ ಇಬ್ಬರ ಕುಟುಂಬಗಳಿಂದ ಯಾವುದೇ ಅಧಿಕೃತಿ ಮಾಹಿತಿ ಘೋಷಣೆಯಾಗಿರಲಿಲ್ಲ. ಆದರೆ ಈಗ ಒಟ್ಟಾಗಿ ರವಿಶಂಕರ ಗುರೂಜಿ ಅವರ ಆಶೀರ್ವಾದ ಪಡೆದಿರುವುದು ವಿವಾಹ ವದಂತಿಗಳಿಗೆ ಪುಷ್ಟಿ ನೀಡಿದೆ.
ಆರ್ಟ್ ಆಫ್ ಲಿಂಗ್ನಲ್ಲಿ ನಡೆದ ಭಾವ್-2025 ಕಾರ್ಯಕ್ರಮದಲ್ಲಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ಹಾಡನ್ನು ಹಾಡಿದ್ದಾರೆ. ಇದಕ್ಕೆ ವೇದಿಕೆ ಮುಂದಿದ್ದ ಸಭಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ನಡೆದ ಭಾವ್-2025ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ವೇಳೆ ರವಿಶಂಕರ ಗುರೂಜಿ ಕೂಡ ಉಪಸ್ಥಿತರಿದ್ದರು.
ರಾಮಮಂದಿರ ಲೋಕಾರ್ಪಣೆಗೂ ಮೊದಲು ಶಿವಶ್ರೀ ಅವರು ಹಾಡಿದ 'ಪೂಜಿಸಲೆಂದೆ ಹೂಗಳ ತಂದೇ' ಹಾಡು ವೈರಲ್ ಆಗಿತ್ತು. ಸ್ವತಃ ಪ್ರಧಾನಮಂತ್ರಿ ಮೋದಿ ಅವರು ಶಿವಶ್ರೀ ಗಾಯನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.