ಒಬ್ಬಂಟಿಯಾದ್ರಾ ಆನಂದ್ ಸಿಂಗ್? ಉಳಿದವರು ಸೈಲೆಂಟ್: ರಾಜಕೀಯ ಜೀವನ ಅಂತ್ಯ?
ಕರ್ನಾಟಕ ಸಚಿವ ಸಂಪುಟ ರಚನೆಯಾದ ಬಳಿಕ ತಾವು ಬಯಸಿದ ಖಾತೆ ಸಿಗದಿರುವುದಕ್ಕೆ ಅನೇಕ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಜಯನಗರ ಶಾಸಕ ಆನಂದ್ ಸಿಂಗ್ ಬಹಿರಂಗವಾಗೇ ರಾಜೀನಾಮೆ ಮಾತುಗಳನ್ನಾಡಿದ್ದಾರೆ. ಅವರನ್ನು ಸಮಾಧಾನಪಡಿಸುವ ಪ್ರಯತ್ನಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಾಲದೆಂಬಂತೆ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾಗಿದ್ದ, ಕಾಂಗ್ರೆಸ್ ಬಿಟ್ಟು ಕಮಲ ಪಾಳಯಕ್ಕೆ ಬಂದಿದ್ದ ಆರಂಭದಿಂದಲೂ ಒಗ್ಗಟ್ಟು ಪ್ರದರ್ಶಿಸುತ್ತಿದ್ದ ಮಿತ್ರ ಮಂಡಳಿಯೂ ಈ ವಿಚಾರದಲ್ಲಿ ಮೌನ ತಾಳಿದೆ. ಸದ್ಯ ಆನಂದ್ ಸಿಂಗ್ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಅವರು ವೇಣುಗೋಪಾಲ ದೇವಸ್ಥಾನದಲ್ಲಿ ಪೂಜೆ ನಡೆಸಿ, ಅಲ್ಲಿಂದ ನೇರವಾಗಿ ಸಿಎಂ ಬೊಮ್ಮಾಐಇ ಭೇಟಿಯಾಘಲು ಬೆಂಗಳೂರಿಗೆ ತೆರಳಿದ್ದಾರೆ. ಅದಕ್ಕೂ ಮುನ್ನ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ಆನಂದ್ ಸಿಂಗ್ ಹೇಳಿದ್ದೇನು?
ವೇಣುಗೋಪಾಲ ದೇವಸ್ಥಾನದಲ್ಲಿ ಪೂಜೆ ನಡೆಸಿ ಮಾತನಾಡಿದ ಆನಂದ್ ಸಿಂಗ್ ‘ನನ್ನ ರಾಜಕೀಯ ಜೀವನ ಅಂತ್ಯವಾಗಬಹುದೊ ಅಥವಾ ಮತ್ತೆ ಹೊಸದಾಗಿ ಆರಂಭವಾಗಬಹುದೊ ಎನ್ನುವುದು ವೇಣುಗೋಪಾಲ ನಿರ್ಧರಿಸುತ್ತಾನೆ. ಅದನ್ನು ಕಾದು ನೋಡೋಣ ಎಂದಿದ್ದಾರೆ.
‘ನಾನು ಐದು ವರ್ಷ ಸಮಾಜ ಸೇವೆ, 15 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಇದೇ ದೇವಸ್ಥಾನದಿಂದ. ಈಗ ಅದು ಇಲ್ಲೇ ಅಂತ್ಯವಾಗುತ್ತೋ ಗೊತ್ತಿಲ್ಲ. ಎಲ್ಲವೂ ಕೃಷ್ಣನ ಆಶೀರ್ವಾದದ ಮೇಲೆ ನಿರ್ಧರಿಸಿದೆ’
ಒಳ್ಳೆತನ, ಒಳ್ಳೆಯ ವಿಚಾರಗಳಿಗೆ ಮುಂದೆ ಇಟ್ಟ ಹೆಜ್ಜೆ ಇಂದೆ ಇಡಬೇಡ. ಅದಕ್ಕೆ ನೀನು ಬಲಿಯಾದರೂ ಪರವಾಗಿಲ್ಲ ಎಂದು ದೇವರು ವಿಶ್ವಾಸ ತುಂಬಿದ್ದಾರೆ. ನನಗೆ ಯಾರ ರಕ್ಷಣೆಯೂ ಇಲ್ಲದಿದ್ದರೂ ಕೃಷ್ಣನ ಆಶೀರ್ವಾದ ಇದೆ. ಮಹಾಭಾರತದಲ್ಲಿ ಅರ್ಜುನನಿಗೆ ಕೃಷ್ಣನ ಶ್ರೀರಕ್ಷೆ ಇರಲಿಲ್ಲವೇ? ಆತ ನನ್ನ ಬೆನ್ನ ಹಿಂದೆಯೂ ನಿಲ್ಲುತ್ತಾನೆ ಎಂಬ ಭರವಸೆ ಇದೆ.
ನಾನು ಯಾರ ಬಳಿ ಏನು ಮನವಿ ಮಾಡಿಕೊಳ್ಳಬೇಕಿತ್ತೊ ಮಾಡಿಕೊಂಡಿದ್ದೇನೆ. ನಾಲ್ಕು ಗೋಡೆಗಳ ಮಧ್ಯೆ ನನ್ನ ಭಾವನೆ, ಕ್ಷೇತ್ರದ ಭವಿಷ್ಯದ ಬಗ್ಗೆ ಹೇಳಿರುವೆ. ಬಹಿರಂಗವಾಗಿ ಎಲ್ಲೂ ಮಾತನಾಡಿಲ್ಲ. ಪಕ್ಷ ಹಾಗೂ ನಾಯಕರಿಗೆ ಮುಜುಗರ ತರುವ ಹೇಳಿಕೆ ಕೊಟ್ಟಿಲ್ಲ. ಭವಿಷ್ಯದಲ್ಲಿಯೂ ಕೊಡುವುದಿಲ್ಲ
ನನಗೆ ನಮ್ಮ ನಾಯಕರು, ಪಕ್ಷದ ಮೇಲೆ ವಿಶ್ವಾಸ ಇದೆ. ಆದರೆ, ಅವರಿಗೆ ನನ್ನ ಮೇಲೆ ವಿಶ್ವಾಸವಿದೆಯೊ ಇಲ್ಲವೊ ಎಂಬ ಅನುಮಾನ ಬರುತ್ತಿದೆ. ರಾಜಕೀಯದಲ್ಲಿದ್ದು ದುಡ್ಡು ಮಾಡುವುದು, ಕೊಳ್ಳೆ ಹೊಡೆಯಲು ಬಂದಿಲ್ಲ. ನಾನು ತಪ್ಪು ಹೇಳಿದರೆ ಕೃಷ್ಣ ಶಿಕ್ಷೆ ಕೊಡಲಿ. ಎಲ್ಲ ರಾಜಕಾರಣಿಗಳು ಕೆಟ್ಟವರಲ್ಲ. ನಾನು ಯಾವ ಗುಂಪಿನಲ್ಲಿ ಸೇರುತ್ತೇನೆ ಎನ್ನುವುದು ಜನ ಹೇಳಬೇಕು. ನಾನೇ ಹೇಳಿದರೆ ಸರಿ ಇರುವುದಿಲ್ಲ. ನಾನೇ ನನ್ನ ಬಗ್ಗೆ ಸರ್ಟಿಫಿಕೇಟ್ ಕೊಡುವುದು ಸೂಕ್ತವಲ್ಲ
ಭೇಟಿಯಾಗುವಂತೆ ಮುಖ್ಯಮಂತ್ರಿಯವರ ಕಡೆಯಿಂದ ಕರೆ ಬಂದಿದೆ. ಇಂದು ಅಥವಾ ನಾಳೆ ಬೆಂಗಳೂರಿಗೆ ಹೋಗಿ, ಅವರನ್ನು ಭೇಟಿ ಮಾಡುತ್ತೇನೆ. ಈಗಾಗಲೇ ಅವರಿಗೆ ಏನು ಹೇಳಬೇಕಿತ್ತೋ ಎಲ್ಲ ಹೇಳಿದ್ದೇನೆ. ನನ್ನ ಆ ಮಾತುಗಳಿಗೆ ಈಗಲೂ ಬದ್ಧನಾಗಿದ್ದೇನೆ
ನನಗೆ ಅಸಮಾಧಾನ ಆಗಿದೆ ಎಂದು ಈಗಾಗಲೇ ಹೇಳಿರುವೆ. ಬ್ಲ್ಯಾಕ್ಮೇಲ್ ಮಾಡುವ ತಂತ್ರ ನನ್ನದಲ್ಲ. ಹೇಳಿರುವುದನ್ನು ಕೇಳಿಸಿಕೊಂಡು ಅರ್ಥ ಮಾಡಿಕೊಳ್ಳುವವರು ಬೇಕು. ಅಕಸ್ಮಾತ್ ನನ್ನ ತಪ್ಪಿದ್ದರೆ ತಿದ್ದುಕೊಳ್ಳುವೆ. ನನ್ನ ಪಕ್ಷದ ಹಿರಿಯ ನಾಯಕರು ಮಾಧ್ಯಮಗಳಿಗೆ ರಾಜಕೀಯ ಹೇಳಿಕೆ ಕೊಡದಂತೆ ತಿಳಿಸಿದ್ದಾರೆ. ಆದರೆ, ನಾನು ಎಲ್ಲಿಯೂ ರಾಜಕೀಯದ ಬಗ್ಗೆ ಮಾತನಾಡಿಲ್ಲ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜತೆಗೂ ಚರ್ಚೆ ಮಾಡಿ ನನ್ನ ಅನಿಸಿಕೆ ತಿಳಿಸಿದ್ದೇನೆ. ಯಡಿಯೂರಪ್ಪನವರು ಮೂರು ಸಲ ನನ್ನ ಖಾತೆ ಬದಲಿಸಿದ್ದರು. ಆದರೆ, ನನ್ನ ಬಗ್ಗೆ ಯೋಚನೆ ಮಾಡುವಂತೆ ಅಷ್ಟೇ ಹೇಳಿದ್ದೆ ಹೊರತು ಒತ್ತಡ ಹಾಕಿರಲಿಲ್ಲ. ಏಕೆಂದರೆ ಅವರು ಕೇಳದೆಯೇ ಎಲ್ಲ ಕೊಟ್ಟಿದ್ದಾರೆ. ವಿಜಯನಗರ ಜಿಲ್ಲೆ ಮಾಡಿದರು. ಕ್ಷೇತ್ರಕ್ಕೆ ಏತ ನೀರಾವರಿ ಯೋಜನೆ ಮಂಜೂರು ಮಾಡಿದರು. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದರೆ ಅವರಿಗೆ ಈ ರೀತಿ ಕೇಳುತ್ತಿರಲಿಲ್ಲ