ಅಂದು BSY, ಇಂದು ಡಿಕೆಶಿ: ಸಿಎಂ ಬದಲಾವಣೆ ಚರ್ಚೆ ನಡುವೆಯೇ ಗುಟ್ಟಾಗಿ ದೇವಾಲಯಕ್ಕೆ ಡಿಸಿಎಂ ಭೇಟಿ
DCM DK Shivakumar And Temple Visiting: ಡಿಸಿಎಂ ಡಿಕೆ ಶಿವಕುಮಾರ್ ದೇವಾಲಯಕ್ಕೆ ಖಾಸಗಿ ಭೇಟಿ ನೀಡಿದ್ದಾರೆ. ಈ ಹಿಂದೆ ಬಿಎಸ್ ಯಡಿಯೂರಪ್ಪ ಸಹ ಸಿಎಂ ಆಗುವ ಮುನ್ನ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಸಿಎಂ ಬದಲಾವಣೆ ಚರ್ಚೆ ನಡುವೆ ಡಿಕೆಶಿ ಭೇಟಿ ಕುತೂಹಲ ಮೂಡಿಸಿದೆ.

ರಾಜ್ಯ ರಾಜಕಾರಣದಲ್ಲಿ ಸಂಚಲನ
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಐದು ವರ್ಷಕ್ಕೆ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇತ್ತ ಆಷಾಢ ಶುಕ್ರವಾರದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದ ಡಿಸಿಎಂ ಡಿಕೆ ಶಿವಕುಮಾರ್, ಪ್ರಯತ್ನಗಳಿಗಿಂತ ಪ್ರಾರ್ಥನೆಯಲ್ಲಿ ನಂಬಿಕೆ ಇಟ್ಟಿರೋದಾಗಿ ಹೇಳಿದ್ದರು.
ಖಾಸಗಿಯಾಗಿ ಭೇಟಿ
ಡಿಕೆ ಶಿವಕುಮಾರ್ ಅವರ ಈ ಮಾತುಗಳು ಅಸಮಾಧಾನಾ ಎಂಬ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿ ಬಂದಿದ್ದವು. ಈ ಎಲ್ಲಾ ಬೆಳವಣಿಗೆ ನಡುವೆ ಇಂದು ಖಾಸಗಿ ಹಾಸನ ಜಿಲ್ಲೆಯ ದೇವಾಲಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಖಾಸಗಿಯಾಗಿ ಭೇಟಿ ನೀಡಿದ್ದಾರೆ.
ಯಾವುದು ಈ ದೇವಸ್ಥಾನ? ಎಲ್ಲಿದೆ ಈ ದೇವಸ್ಥಾನ ಗೊತ್ತಾ?
ಈ ಹಿಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪಟ್ಟಕ್ಕೇರುವ ಮುನ್ನ ಈ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಈ ದೇವಸ್ಥಾನಕ್ಕೆ ಯಾವುದೇ ಭದ್ರತೆ ಇಲ್ಲದೇ ಆಗಮಿಸಿದ್ದ ಡಿಕೆ ಶಿವಕುಮಾರ್ ದರ್ಶನ ಪಡೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರೋ ಡಿಕೆ ಶಿವಕುಮಾರ್, ಅಮವಾಸ್ಯೆ ಹಿನ್ನೆಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಯಾವುದು ಈ ದೇವಸ್ಥಾನ? ಎಲ್ಲಿದೆ ಈ ದೇವಸ್ಥಾನ ಗೊತ್ತಾ?
ನವಿಲೆ ಗ್ರಾಮದಲ್ಲಿರುವ ನಾಗೇಶ್ವರ ದೇವಾಲಯ
ಹೌದು, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನವಿಲೆ ಗ್ರಾಮದಲ್ಲಿರುವ ನಾಗೇಶ್ವರ ದೇವಾಲಯಕ್ಕಿಂದು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಯಾವುದೇ ಭದ್ರತೆ ಇಲ್ಲದೆ ಖಾಸಗಿ ಕಾರಿನಲ್ಲಿ ಬಂದು ನಾಗದೇವರಿಗೆ ಪೂಜೆ ಸಲ್ಲಿಕೆ ಮಾಡಿ, ನಾಗೇಶ್ವರ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಸಿಎಂ ಬದಲಾವಣೆ ಚರ್ಚೆ ಸಂದರ್ಭದಲ್ಲಿ ಡಿಕೆ ಶಿವವಕುಮಾರ್ ಅವರ ಈ ದೇವಾಲಯ ಭೇಟಿ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಆಗೊ ಮೊದಲು ನವಿಲೆ ನಾಗೇಶ್ವರನ ಆಶೀರ್ವಾದ ಪಡೆದುಕೊಂಡಿದ್ದರು. ಒಂದು ವಾರದ ಹಿಂದೆಯಷ್ಟೇ ದೇವಾಲಯದ ಕಾರ್ಯಕ್ರಮಕ್ಕೆ ಆಗಮಿಸುವಂತೆ ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಗಿತ್ತು.
ಡಿಕೆ ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ
ಕೆಲ ದಿನಗಳ ಹಿಂದೆ ಮೈಸೂರಿನ ಸಮಾವೇಶದಿಂದ ಡಿಕೆ ಶಿವಕುಮಾರ್ ಅರ್ಧಕ್ಕೆ ಹೊರಟು ಬಂದಿದ್ದರು. ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಡಿಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ಕೆಲವರು ನೆನಪಿಸಿರೋದು ಅವರು ವೇದಿಕೆಯಲ್ಲಿ ಇಲ್ವಲ್ಲಾ ಎಂದಿದ್ದರು. ಅಚ್ಚರಿ ಎಂಬಂತೆ ಮರುದಿನವೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೊತೆಯಾಗಿ ಒಂದೇ ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದರು. ಈ ವೇಳೆ ಮೈಸೂರಿನ ಸಮಾವೇಶದಲ್ಲಿ ನಡೆದ ಬೆಳವಣಿಗೆ ಕುರಿತು ಇಬ್ಬರು ಸ್ಪಷ್ಟನೆ ನೀಡಿದ್ದರು.
ಮುಡಾ ಕೇಸ್ನಲ್ಲಿ ರಿಲೀಫ್
ಕಳೆದ ಒಂದು ವರ್ಷದಿಂದ ಮುಡಾ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿತ್ತು. ಪತ್ನಿ ಪಾರ್ವತಿ ಹೆಸರಿನಲ್ಲಿ ಅಕ್ರಮವಾಗಿ ನಿವೇಶನ ಪಡೆದುಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿತ್ತು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ವಿಪಕ್ಷಗಳು ಸಿದ್ದರಾಮಯ್ಯರ ರಾಜೀನಾಮೆಗೆ ಆಗ್ರಹಿಸಿದ್ದವು. ಇದೀಗ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮುಡಾ ಪ್ರಕರಣ ಮುಖ್ಯಮಂತ್ರಿ ಪಟ್ಟಕ್ಕೇನೆ ಕಂಟಕದ ಛಾಯೆ ಆವರಿಸುವಂತೆ ಮಾಡಿತ್ತು.