ಹಳ್ಳಿ ಹೈದನಾದ ಡಿಸಿಎಂ: ಪೈಲಟ್ ದೇಸೀ ಲುಕ್ಗೆ ನೆಟ್ಟಿಗರು ಫುಲ್ ಫಿದಾ
ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಹಾಗೂ ಡಿಸಿಎಂ ಸಚಿನ್ ಪೈಲಟ್ ದೇಸೀ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಹಳ್ಳಿಯೊಂದರಲ್ಲಿ ಪೈಲಟ್ ತನ್ನ ಬೆಂಬಲಿಗರ ನಡುವೆ ಮಂಚವೊಂದರ ಮೇಲೆ ಹಳ್ಳಿ ಹೈದನಂತೆ ಕುಳಿತು ಹರಟೆ ಹೊಡೆದಿದ್ದಲ್ಲದೇ, ಗ್ರಾಮಸ್ಥರು ತಯಾರಿಸಿದ್ದ ಅಡುಗೆ ಸೇವಿಸಿ. ರಾತ್ರಿ ಹೊತ್ತು ಅದೇ ಮಂಚದಲ್ಲಿ ಚಂದ್ರನನ್ನು ನೋಡುತ್ತಾ ನಿದ್ದೆಗೆ ಜಾರಿರುವ ಫೋಟೋಗಳು ಭಾರೀ ವೈರಲ್ ಆಗಿವೆ. ರಾಜಸ್ಥಾನದ ಕಸೇಲಾ ಹಳ್ಳಿಯ ರೈತ ಜಯ್ ಕಿಶನ್ ಮನೆಯಲ್ಲಿ ಹಳ್ಳಿ ಹೈದನಾದ ಡಿಸಿಎಂ ಫೋಟೋಗಳು ಇಲ್ಲಿವೆ ನೋಡಿ.
ಒಂದೆಡೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ದಿಲ್ಲಿಗೆ ಹಾರಿ, ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುವುದರಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಇತ್ತ ಯುವ ನಾಯಕ, ಡಿಸಿಎಂ ಹಳ್ಳಿಗಳಿಗೆ ಭೇಟಿ ನೀಡಿ ಜನರ ನಡುವೆ ಸಮಯ ಕಳೆಯುತ್ತಿದ್ದಾರೆ.
ಭಾನುವಾರದಂದು ಡಿಸಿಎಂ ಸಂಚೌರಾದ ಕಸೇಲಾ ಹಳ್ಳಿಯ ಜನರನ್ನು ಭೇಟಿಯಾಗಿದ್ದಾರೆ.
ರೈತ ಜಯ್ ಕಿಶನ್ ಮನೆಯಲ್ಲಿ ಉಳಿದುಕೊಂಡ ಸಚಿನ್ ಪೈಲಟ್ ರನ್ನು ಹಳ್ಳಿಯ ಜನರು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಎರಡು ವರ್ಷದ ಹಿಂದೆಯೂ ಸಚಿನ್ ಈ ಹಳ್ಳಿಗೆ ಭೇಟಿ ನೀಡಿದ್ದರು.
ರೈತನ ಮನೆಯಲ್ಲೇ ತಯಾರಾದ ಸಾದಾ ಊಟವನ್ನು ಸೇವಿಸಿದ ಸಚಿನ್ ಪೈಟಲ್, ಸೋಮವಾರದಂದು ಹಳ್ಳಿಯ ಜನರ ಬಳಿ ತೆರಳಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕೃತಜ್ಞತೆ ಸಲ್ಲಿಸಿದ್ದಾರೆ.
ಮಾರ್ವಾಡಾ ಪ್ರವಾಸಕ್ಕೆಂದು ಬಂದಿದ್ದ ಸಚಿನ್ ಪೈಲಟ್ ಒಂದು ದಿನವನ್ನು ಸಂಚೌರಾದ ಸಮೀಪದಲ್ಲಿರುವ ಕಸೇಲಾ ಹಳ್ಳಿಗೆ ಭೇಟಿ ನೀಡಿ ರೈತರೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಇದೇ ವೇಳೆ ತನ್ನ ಹಳೆ ಗೆಳೆಯ ಜಯ್ ಕಿಶನ್ ಬಿಶ್ನೋಯಿ ಭೇಟಿಯಾಗಿ, ಅವರೊಂದಿಗೇ ಗದ್ದೆಯಲ್ಲಿ ಮಂಚದ ಮೇಲೆ ಹಳ್ಳಿ ಹೈದನಂತೆ ಕುಳಿತು ಊಟ ಮಾಡಿದ್ದಾರೆ.
ಜನಸಾಮಾನ್ಯರನ್ನು ಭೇಟಿಯಾಗುವುದರೊಂದಿಗೆ ಅಧಿಕಾರಿಗಳನ್ನೂ ಭೇಟಿಯಾಗಿದ್ದಾರೆ.
ಜನಸಾಮಾನ್ಯರನ್ನು ಭೇಟಿಯಾಗಿ ಅವರ ಸಮಸ್ಯೆ ಆಲಿಸಿದ ಡಿಸಿಎಂ ಪೈಲಟ್ ಅಧಿಕಾರಿಗಳ ಸಭೆ ನಡೆಸಿ ಜನರ ಸಮಸ್ಯೆ ಶೀಘ್ರವಾಗಿ ನಿವಾರಿಸುವಂತೆ ಆದೇಶಿಸಿದ್ದಾರೆ.
ಸೋಮವಾರ ಮುಂಜಾನೆ ಎದ್ದ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಜನ ಸಾಮಾನ್ಯರಂತೆ ಬೇವಿನ ಕಡ್ಡಿಯಲ್ಲೇ ಹಲ್ಲುಜ್ಜಿದ್ದಾರೆ. ಜನ ನಾಯಕನ ಈ ದೇಸೀ ಲುಕ್ ಗ್ರಾಮಸ್ಥರಿಗೆ ಬಹಳಷ್ಟು ಇಷ್ಟವಾಗಿದೆ.
ಕಳೆದ 2 ವರ್ಷಗಳ ಹಿಂದೆ ಪೈಲಟ್ ತನ್ನ ಗೆಳೆಯ ಜಯ್ ಕಿಶನ್ ಗೆ ನೀಡಿದ ಮಾತಿನಂತೆ ಮತ್ತೆ ಹಳ್ಳಿಗೆ ಭೇಟಿ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಸಚಿನ್ ಪೈಲಟ್ ಕೇವಲ ಒಬ್ಬ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಂದು ಕಸೇಲಾಗೆ ಭೇಟಿ ನೀಡಿದ್ದ ಅವರು ಇದೇ ಗದ್ದೆಯಲ್ಲಿ ರಾತ್ರಿ ಕಳೆದಿದ್ದರು. ಇಂದು ಡಿಸಿಎಂ ಆಗಿರುವ ಸಚಿನ್ ಹಳ್ಳಿಗೆ ಭೇಟಿ ನೀಡುವುದನ್ನು ಮಾತ್ರ ಮರೆತಿಲ್ಲ.
ಭಾನುವಾರದಂದು ಕೊಂಚವೂ ವಿಶ್ರಾಂತಿ ಪಡೆಯದ ಸಚಿನ್ ಪೈಲಟ್ ಜನರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಸಂಜೆಯಾಗುತ್ತಿದ್ದಂತೆಯೇ ಗದ್ದೆಗೆ ಮರಳಿದ ಅವರು ಹಳ್ಳಿ ಹೈದನಾಗಿದ್ದಾರೆ. ಈ ಮೂಲಕ ಹಳ್ಳಿ ಜನರು ಹಾಗೂ ಸರ್ಕಾರದ ನಡುವಿನ ಅಂತರ ಕಡಿಮೆಗೊಳಿಸುವ ಯತ್ನ ನಡೆಸಿದ್ದಾರೆ.
ಇದು ಎರಡು ವರ್ಷಗಳ ಹಿಂದೆ ಸಚಿನ್ ಪೈಲಟ್ ತನ್ನ ಗೆಳೆಯನ ಮನೆಗೆ ಭೇಟಿ ನೀಡಿ, ಹಳ್ಳಿಯಲ್ಲಿ ಉಳಿದುಕೊಂಡ ಫೋಟೋ.