ತ್ಯಾಜ್ಯ ವಿದ್ಯುತ್ ಘಟಕಕ್ಕೆ ಸಿಎಂ ಯಡಿಯೂರಪ್ಪ ಶಂಕು
ಬೆಂಗಳೂರು(ಡಿ.03): ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಬಿಡದಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 11.5 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯದ ‘ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ’ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಿಂದ ವರ್ಚುಯಲ್ ಕಾರ್ಯಕ್ರಮದ ಮೂಲಕ ಶಿಲಾನ್ಯಾಸ ನೆರವೇರಿಸಿದ ಅವರು, ರಾಜ್ಯದಲ್ಲೇ ಪ್ರಪ್ರಥಮವಾಗಿ ಹೆಚ್ಚಿನ ಸಾಮರ್ಥ್ಯದ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಬೆಂಗಳೂರಿನಲ್ಲಿ ನಿತ್ಯ 5,000 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ತ್ಯಾಜ್ಯದಿಂದ ಜೈವಿಕ ಇಂಧನ, ಕಾಂಪೋಸ್ಟ್ ಗೊಬ್ಬರ, ತ್ಯಾಜ್ಯ ವಿದ್ಯುತ್ ಉತ್ಪಾದನೆ ಮೂಲಕ ಕಡಿಮೆ ಖರ್ಚಿನೊಂದಿಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಬಹುದು. ಎಲ್ಲರೂ ಹಸಿ ಹಾಗೂ ಒಣ ಕಸ ಬೇರ್ಪಡಿಸಿ ನೀಡಿ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದರು.
ಬಿಡದಿಯ ಕರ್ನಾಟಕ ವಿದ್ಯುತ್ ನಿಗಮದ ಜಾಗದಲ್ಲಿ ನಿತ್ಯ 600 ಟನ್ ತ್ಯಾಜ್ಯವನ್ನು ಸಂಸ್ಕರಿಸಿ 11.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿದೆ. ಇದರಿಂದ ಬಿಬಿಎಂಪಿಯ ಶೇ.25ರಷ್ಟು ಮಿಶ್ರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿದಂತಾಗಲಿದೆ.
ಘಟಕದಿಂದ 80.59 ಮಿಲಿಯನ್ ಯೂನಿಟ್ನಷ್ಟುವಿದ್ಯುತ್ ಜನತೆಗೆ ಲಭ್ಯವಾಗಲಿದೆ. ಘಟಕಕ್ಕೆ 260 ಕೋಟಿ ರು. ವೆಚ್ಚ ಮಾಡಲಾಗುತ್ತಿದ್ದು, ಕೆಪಿಸಿಎಲ್ ಹಾಗೂ ಬಿಬಿಎಂಪಿ ತಲಾ ಅರ್ಧ ವೆಚ್ಚವನ್ನು ಭರಿಸಲಿದೆ ಘಟಕ 2022ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಈ ಘಟಕದಿಂದ ಪ್ರತಿ ವರ್ಷ ಬಿಬಿಎಂಪಿಗೆ 14 ಕೋಟಿ ರು. ಉಳಿತಾಯವಾಗಲಿದೆ ಎಂದು ಹೇಳಿದರು.
ಈ ಯೋಜನೆಗೆ ಕೇಂದ್ರ ಸರ್ಕಾರ ಗರಿಷ್ಠ ಶೇಕಡಾ 35 ಹಾಗೂ ರಾಜ್ಯ ಸರ್ಕಾರ ಗರಿಷ್ಠ ಶೇಕಡಾ 23.3 ರಷ್ಟು ಪೋತ್ಸಾಹ ಧನವನ್ನು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ಹೇಳಿದರು.