- Home
- Karnataka Districts
- ಡಿಸಿಎಂ ತವರಲ್ಲಿ 12 ಜೀತ ಕಾರ್ಮಿಕರ ರಕ್ಷಣೆ; ಪ್ರಪಂಚವನ್ನೇ ನೋಡದೆ 20 ವರ್ಷ ಕಲ್ಲು ಕ್ವಾರಿಯಲ್ಲಿ ಕೆಲಸ!
ಡಿಸಿಎಂ ತವರಲ್ಲಿ 12 ಜೀತ ಕಾರ್ಮಿಕರ ರಕ್ಷಣೆ; ಪ್ರಪಂಚವನ್ನೇ ನೋಡದೆ 20 ವರ್ಷ ಕಲ್ಲು ಕ್ವಾರಿಯಲ್ಲಿ ಕೆಲಸ!
ತುಮಕೂರು ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 12 ಕಾರ್ಮಿಕರನ್ನು ಅಧಿಕಾರಿಗಳ ತಂಡ ರಕ್ಷಿಸಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ತುಮಕೂರು (ಜು.22): ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಎರಡು ದಶಕಗಳಿಂದ ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ (Illegal Stone Quarrying) ಜೀತಕ್ಕಿದ್ದ 12 ಮಂದಿ ಕಾರ್ಮಿಕರನ್ನು ಅಧಿಕಾರಿಗಳ ತಂಡ ಸಿನಿಮೀಯ ಮಾದರಿಯಲ್ಲಿ ದಾಳಿ ನಡೆಸಿ ರಕ್ಷಿಸಿದೆ.
20 ವರ್ಷಗಳ ಸುದೀರ್ಘ ನರಕಯಾತನೆ:
ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ (KRS, Mandya) ಮೂಲದ ಕಾರ್ಮಿಕರನ್ನು ಈ ಗಣಿ ಮಾಲೀಕರು ಮುಂಗಡ ಹಣ (Advance Money) ನೀಡಿ ಈ ಹಿಂದೆ ಕರೆತಂದಿದ್ದರು. ಅಂದಿನಿಂದ ಇಂದಿನವರೆಗೆ, ಅಂದರೆ ಬರೋಬ್ಬರಿ 20 ವರ್ಷಗಳಿಂದ ಈ ಕಾರ್ಮಿಕರನ್ನು ಜೀತಕ್ಕೆ (Bonded Labor) ದುಡಿಸಿಕೊಳ್ಳಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತುಮಕೂರಿನ ಕುಣಿಗಲ್ ತಾಲ್ಲೂಕಿನ (Kunigal Taluk) ಹುಲಿಯೂರುದುರ್ಗದ ಸಮೀಪದ ಪಾವಸಂದ್ರ ಗ್ರಾಮದ ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿದ್ದ ಈ ಅಕ್ರಮ ಗಣಿಗಾರಿಕೆಯಲ್ಲಿ ಕಾರ್ಮಿಕರಿಗೆ ಕನಿಷ್ಠ ಸ್ವಾತಂತ್ರ್ಯವೂ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ :
'ಮುಕ್ತಿ' (MUKTI NGO) ಎಂಬ ಸ್ವಯಂಸೇವಾ ಸಂಸ್ಥೆ ನೀಡಿದ ದೂರಿನ ಆಧಾರದ ಮೇಲೆ, ತುಮಕೂರು ಉಪವಿಭಾಗಾಧಿಕಾರಿ (Assistant Commissioner) ನಹಿದಾ ಜಮ್ ಜಮ್ ಅವರ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಇಬ್ಬರು ಮಕ್ಕಳು, ಐವರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿದಂತೆ ಒಟ್ಟು 12 ಕಾರ್ಮಿಕರನ್ನು ರಕ್ಷಿಸಲಾಗಿದೆ.
ರಕ್ಷಣೆಗೊಳಗಾದವರ ವಿವರ:
ರಕ್ಷಣೆಗೊಳಗಾದವರಲ್ಲಿ ಚೆಲುವಾ ಭೋವಿ (45), ಸರಸ್ವತಿ (40), ಪಳನಿ (50), ಸರೋಜಾ (40), ಸೌಮ್ಯ (40), ಪುರುಷೋತ್ತಮ (20), ರವಿ (20), ಪವಿತ್ರಾ (25), ಕೃಷ್ಣ (25), ಮಂಜುಳಾ (35), ಆರ್ಮುಗಮ್ (56) ಮತ್ತು ಭಾಗ್ಯಮ್ಮ (47) ಸೇರಿದ್ದಾರೆ. ಇವರೆಲ್ಲರನ್ನೂ ಸದ್ಯ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಅವರಿಗೆ ಸರ್ಕಾರಿ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲು:
ಈ ಅಕ್ರಮ ಗಣಿಗಾರಿಕೆ ಮತ್ತು ಜೀತ ಪದ್ಧತಿಯ (Jeeta System) ಕುರಿತು ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸರ್ಕಾರಿ ಜಮೀನಿನಲ್ಲಿ ಇಷ್ಟು ವರ್ಷಗಳ ಕಾಲ ಅಕ್ರಮವಾಗಿ ಗಣಿಗಾರಿಕೆ ಹೇಗೆ ನಡೆಯಿತು? ಅಧಿಕಾರಿಗಳ ಗಮನಕ್ಕೆ ಇದು ಏಕ ಬರಲಿಲ್ಲ? ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಜೀತ ಪದ್ಧತಿ ಕಾನೂನುಬಾಹಿರವಾಗಿದ್ದರೂ, ಇಂದಿನ ಕಾಲದಲ್ಲೂ ಇಂತಹ ದೌರ್ಜನ್ಯಗಳು ನಡೆಯುತ್ತಿರುವುದು ನಿಜಕ್ಕೂ ದುರಂತ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ (Legal Action) ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

