- Home
- Karnataka Districts
- Mysuru: ನಾಳೆ ಮದುವೆ, ಇಂದು ಮದುಮಗಳು-ತಂದೆ-ತಾಯಿ ಮೂವರೂ ಸಾವು! ಡ್ರೈವರ್ ಕಿರುಕುಳಕ್ಕೆ ಕುಟುಂಬವೇ ಸರ್ವನಾಶ!
Mysuru: ನಾಳೆ ಮದುವೆ, ಇಂದು ಮದುಮಗಳು-ತಂದೆ-ತಾಯಿ ಮೂವರೂ ಸಾವು! ಡ್ರೈವರ್ ಕಿರುಕುಳಕ್ಕೆ ಕುಟುಂಬವೇ ಸರ್ವನಾಶ!
ಮೈಸೂರಿನ ಟಿ.ನರಸೀಪುರದಲ್ಲಿ, ಮದುವೆಗೆ ಸಿದ್ಧವಾಗಿದ್ದ ಯುವತಿ ಮತ್ತು ಆಕೆಯ ಪೋಷಕರು ಆ*ತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪರಿಚಯಸ್ಥ ಯುವಕನೊಬ್ಬನ ನಿರಂತರ ಕಿರುಕುಳ ಮತ್ತು ಮಾನಹಾನಿಯಿಂದ ನೊಂದು ಈ ಕುಟುಂಬ ಸಾವಿಗೆ ಶರಣಾಗಿದ್ದು, ಈ ಘಟನೆಯು ಗ್ರಾಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರು (ಜೂ.22): ಸಂಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲಿ ಇಂದು ಸ್ಮಶಾನ ಮೌನ ಆವರಿಸಿದೆ. ನಾಳೆ ಹಸೆಮಣೆ ಏರಬೇಕಿದ್ದ ಮದುಮಗಳು ಮತ್ತು ಆಕೆಯ ತಂದೆ-ತಾಯಿ ಶವವಾಗಿ ಬಿದ್ದಿದ್ದಾರೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದ ಈ ದಾರುಣ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಪರಿಚಯಸ್ಥ ಯುವಕನೊಬ್ಬನ ಅತಿಯಾದ ಕಿರುಕುಳ ಮತ್ತು ಮಾನಸಿಕ ಹಿಂಸೆಗೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆಯ ವಿವರ:
ಗ್ರಾಮದ ನಿವಾಸಿಗಳಾದ ಶಿವಣ್ಣ (54), ನಾಗರತ್ನ (44) ಮತ್ತು ಅವರ ಪುತ್ರಿ ರಕ್ಷಿತಾ (21) ಆ*ತ್ಮ*ಹತ್ಯೆ ಮಾಡಿಕೊಂಡ ದುರ್ದೈವಿಗಳು. ಇವರ ಸಾವಿಗೆ ಇದೇ ಗ್ರಾಮದ ಉಲ್ಲಾಸ್ ಗೌಡ ಎಂಬ ಯುವಕ ನೀಡಿದ ಮಾನಸಿಕ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ರಕ್ಷಿತಾಗೆ ಮೂರು ತಿಂಗಳ ಹಿಂದೆಯಷ್ಟೇ ಮದುವೆ ನಿಶ್ಚಯವಾಗಿತ್ತು. ಜೂನ್ 23 ಮತ್ತು 24 ರಂದು ಮದುವೆ ಸಮಾರಂಭ ನಡೆಯಬೇಕಿತ್ತು. ಮದುವೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು.
ಕಿರಾತಕನ ಕಿರುಕುಳ:
ಆರೋಪಿ ಉಲ್ಲಾಸ್ ಗೌಡ ಮೃತ ಶಿವಣ್ಣ ಅವರ ಬಳಿ ಟ್ರ್ಯಾಕ್ಟರ್ ಓಡಿಸುತ್ತಿದ್ದು, ಕುಟುಂಬದವರೊಂದಿಗೆ ಒಡನಾಟ ಹೊಂದಿದ್ದ. ಆದರೆ ಕಳೆದ ಒಂದು ವಾರದಿಂದ ರಕ್ಷಿತಾಳನ್ನು ತನಗೆ ಮದುವೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದ. 'ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ, ಅವಳನ್ನು ನನಗೇ ಕೊಡಬೇಕು' ಎಂದು ನೇರವಾಗಿ ತಂದೆಯನ್ನೇ ಕೇಳಿದ್ದ. ಇದಕ್ಕೆ ಶಿವಣ್ಣ ಅವರು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೂ ಕೇಳದ ಉಲ್ಲಾಸ್, ಮದುವೆ ನಿಶ್ಚಯವಾಗಿದ್ದ ಹುಡುಗನಿಗೆ ರಕ್ಷಿತಾಳ ಫೋಟೋ ಮತ್ತು ಮೆಸೇಜ್ಗಳನ್ನು ಕಳುಹಿಸಿ ವಿಕೃತಿ ಮೆರೆದಿದ್ದಾನೆ.
ಪಂಚಾಯತಿ ಆದರೂ ಬಿಡದ ಹಠ:
ಈ ವಿಚಾರವಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ಕೂಡ ನಡೆದಿತ್ತು. ಪಂಚಾಯತಿಯಲ್ಲಿ ಉಲ್ಲಾಸ್ ಬಳಿ ಇದ್ದ ಫೋಟೋಗಳನ್ನು ವಾಪಸ್ ಪಡೆದುಕೊಳ್ಳಲಾಗಿತ್ತು. ಆದರೆ, ತನ್ನ ಹಠ ಬಿಡದ ಉಲ್ಲಾಸ್, ಮದುವೆ ಆಗಲಿರುವ ಹುಡುಗನಿಗೆ ನೇರವಾಗಿ ಮಾಹಿತಿ ನೀಡಿ ಮಾನಹಾನಿ ಮಾಡಿದ್ದನು. ಇದರಿಂದ ತೀವ್ರ ನೊಂದ ಕುಟುಂಬ, ಬಾಳೆಹಣ್ಣಿನಲ್ಲಿ ವಿಷದ ಟ್ಯೂಬ್ ಬೆರೆಸಿ ಸೇವಿಸಿ ಸಾವಿಗೆ ಶರಣಾಗಿದೆ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಉಲ್ಲಾಸ್ ಹೆಸರನ್ನು ಉಲ್ಲೇಖಿಸಲಾಗಿದೆ.
ರೊಚ್ಚಿಗೆದ್ದ ಗ್ರಾಮಸ್ಥರು - ಪೊಲೀಸ್ ಜೊತೆ ಸಂಘರ್ಷ:
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ಸಂಬಂಧಿಕರು ರೊಚ್ಚಿಗೆದ್ದಿದ್ದಾರೆ. ಆರೋಪಿ ಉಲ್ಲಾಸ್ ಗೌಡನನ್ನು ಬಂಧಿಸುವವರೆಗೂ ಮೃತದೇಹಗಳನ್ನು ಸ್ಥಳದಿಂದ ಸರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಪೊಲೀಸರು ಮೃತದೇಹಗಳನ್ನು ಆಂಬ್ಯುಲೆನ್ಸ್ಗೆ ಶಿಫ್ಟ್ ಮಾಡಲು ಯತ್ನಿಸಿದಾಗ ಗ್ರಾಮಸ್ಥರು ಮುತ್ತಿಗೆ ಹಾಕಿ ತಡೆದರು. ರಾಜಕೀಯ ಮುಖಂಡ ಸಿ.ಟಿ. ಕುಮಾರ್ ಸ್ಥಳಕ್ಕೆ ಆಗಮಿಸಿ ಮನವೊಲಿಸಲು ಯತ್ನಿಸಿದರೂ ಗ್ರಾಮಸ್ಥರು ಕಿಂಚಿತ್ತೂ ಬಗ್ಗಲಿಲ್ಲ. ಆಕ್ರೋಶ ಹೆಚ್ಚಾದ ಕಾರಣ ಪೊಲೀಸರು ಕಳುಹಿಸಿದ್ದ ಆಂಬ್ಯುಲೆನ್ಸ್ಅನ್ನು ಅರ್ಧ ದಾರಿಯಿಂದಲೇ ವಾಪಸ್ ಕರೆಸಬೇಕಾಯಿತು.
ಅಜ್ಜಿಯ ಕಣ್ಣೀರು:
'ನನ್ನ ಮೊಮ್ಮಗಳು ಮದುವೆಗೆ ಸಿದ್ಧವಾಗಿದ್ದಳು. ಆದರೆ ಆ ಕಿರಾತಕ ಅವಳ ಮಾನ ತೆಗೆದಿದ್ದಾನೆ. ನನ್ನ ಅಳಿಯನ ಜೊತೆಯೇ ಇದ್ದು ಬೆನ್ನಿಗೆ ಚೂರಿ ಹಾಕಿದ್ದಾನೆ. ಅವನಿಗಾದ ಕಿರುಕುಳಕ್ಕೆ ಈ ಮೂವರು ಬಲಿಯಾಗಿದ್ದಾರೆ, ಅವನಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಮೃತಳ ಅಜ್ಜಿ ಚಿನ್ನಮ್ಮ ಕಣ್ಣೀರು ಹಾಕಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

