- Home
- Karnataka Districts
- ಬರಗಾಲ ನಡುವೆಯೂ ತುಂಬಿದ ರಾಜ್ಯದ ಮೊದಲ ಆಣೆಕಟ್ಟು; ಶಿವಮೊಗ್ಗದ ತುಂಗಾ ಜಲಾಶಯದಿಂದ ನೀರು ಬಿಡುಗಡೆ!
ಬರಗಾಲ ನಡುವೆಯೂ ತುಂಬಿದ ರಾಜ್ಯದ ಮೊದಲ ಆಣೆಕಟ್ಟು; ಶಿವಮೊಗ್ಗದ ತುಂಗಾ ಜಲಾಶಯದಿಂದ ನೀರು ಬಿಡುಗಡೆ!
ರಾಜ್ಯದಲ್ಲಿ ಆವರಿಸಿರುವ ಬರಗಾಲದ ಛಾಯೆಯ ನಡುವೆಯೂ ಮಲೆನಾಡಿನಲ್ಲಿ ಸುರಿದ ಭಾರೀ ಮಳೆಯಿಂದ ಶಿವಮೊಗ್ಗದ ಗಾಜನೂರು ತುಂಗಾ ಜಲಾಶಯವು ಈ ಮುಂಗಾರಿನಲ್ಲಿ ರಾಜ್ಯದಲ್ಲೇ ಮೊದಲು ಭರ್ತಿಯಾಗಿದೆ. ಧಾರಾಕಾರ ಮಳೆಯಿಂದ ಒಳಹರಿವು ಹೆಚ್ಚಾಗಿದ್ದು, ಡ್ಯಾಂನಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.

ಶಿವಮೊಗ್ಗ (ಜು.06): ಮಲೆನಾಡಿನ ಜೀವನಾಡಿ ಎಂದೇ ಕರೆಯಲ್ಪಡುವ ಶಿವಮೊಗ್ಗ ಜಿಲ್ಲೆಯ ಗಾಜನೂರು ತುಂಗಾ ಜಲಾಶಯವು ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲೇ ಮೊದಲು ಭರ್ತಿಯಾದ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಮೂರು ದಿನಗಳಿಂದ ಜಲಾನಯನ ಪ್ರದೇಶಗಳಾದ ಶೃಂಗೇರಿ, ತೀರ್ಥಹಳ್ಳಿ ಹಾಗೂ ಆಗುಂಬೆ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದ್ದು, ಡ್ಯಾಂ ಸಂಪೂರ್ಣ ಭರ್ತಿಯಾಗಿದೆ.
ಜಲಾಶಯದ ಸದ್ಯದ ಸ್ಥಿತಿ:
ಗಾಜನೂರು ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಆಗಿದ್ದು, ಸದ್ಯದ ಮಟ್ಟ 588.21 ಮೀಟರ್ ತಲುಪಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 3.24 ಟಿಎಂಸಿ ಇದ್ದು, ಪ್ರಸ್ತುತ 3.20 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಕೆಲವು ದಿನಗಳಿಂದ ಒಳಹರಿವು 20,565 ಕ್ಯೂಸೆಕ್ನಿಂದ 25,376 ಕ್ಯೂಸೆಕ್ ವರೆಗೆ ಏರಿಳಿತವಾಗುತ್ತಿದೆ.
ನದಿಗೆ ನೀರು ಬಿಡುಗಡೆ:
ಜುಲೈ 4 ರಿಂದಲೇ ಜಲಾಶಯದಿಂದ ನೀರನ್ನು ಹೊರಬಿಡಲು ಆರಂಭಿಸಲಾಗಿದೆ. ಆರಂಭದಲ್ಲಿ 12 ಕ್ರಸ್ಟ್ ಗೇಟ್ಗಳ ಮೂಲಕ ಸುಮಾರು 22,822 ಕ್ಯೂಸೆಕ್ ವರೆಗೆ ನೀರನ್ನು ಹರಿಸಲಾಗಿತ್ತು. ಸದ್ಯ 8 ಕ್ರೆಸ್ಟ್ ಗೇಟ್ ಮೂಲಕ 13,558 ಕ್ಯೂಸೆಕ್ ನೀರನ್ನು ತುಂಗಭದ್ರಾ ಜಲಾಶಯದ ಕಡೆಗೆ ಬಿಡಲಾಗುತ್ತಿದೆ. ಮಳೆ ಅಬ್ಬರ ಮುಂದುವರಿದಲ್ಲಿ ಹೊರಹರಿವಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಜನತೆಗೆ ಎಚ್ಚರಿಕೆ:
ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ತುಂಗಾ ನದಿ ಪಾತ್ರದ ಕೆಳಭಾಗದ ನಿವಾಸಿಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ನದಿ ದಡದಲ್ಲಿರುವ ಜನರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಹಳ್ಳ-ಕೊಳ್ಳಗಳು ಮತ್ತು ನಾಲೆಯ ಆಸುಪಾಸಿಗೆ ಜಾನುವಾರುಗಳನ್ನು ಬಿಡಬಾರದು ಎಂದು ಆಡಳಿತ ಮಂಡಳಿ ಆದೇಶಿಸಿದೆ.
ಯೆಲ್ಲೋ ಅಲರ್ಟ್ ಘೋಷಣೆ:
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದ್ದು, ಜನರು ಅನಗತ್ಯವಾಗಿ ನದಿ ತೀರಕ್ಕೆ ತೆರಳದಂತೆ ಮತ್ತು ಪ್ರವಾಸಿಗರು ಜಲಪಾತಗಳ ಬಳಿ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ.

