ಶೀಘ್ರದಲ್ಲಿಯೇ ವಿಜಯಪುರ–ತಿರುಪತಿ ನಡುವೆ ನೇರ ರೈಲು ಸೇವೆ : ಟ್ರೈನ್ ರೂಟ್ ಯಾವುದು?
ವಿಜಯಪುರ ಮತ್ತು ತಿರುಪತಿ ನಡುವೆ ನೇರ ರೈಲು ಸಂಚಾರದ ಬಹುಕಾಲದ ಬೇಡಿಕೆಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಂಸದ ನಾರಾಯಣಸಾ ಕೆ. ಭಾಂಡೆಗೆ ಅವರ ಮನವಿಯನ್ನು ಮುಂದಿನ ಕ್ರಮಕ್ಕಾಗಿ ರವಾನಿಸಲಾಗಿದ್ದು, ಉತ್ತರ ಕರ್ನಾಟಕದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

ವಿಜಯಪುರ ಮತ್ತು ತಿರುಪತಿ ನಡುವೆ ನೇರ ರೈಲು
ವಿಜಯಪುರ ಮತ್ತು ತಿರುಪತಿ ನಡುವೆ ನೇರ ರೈಲು ಸಂಚಾರದ ಬೇಡಿಕೆಗೆ ಭಾರತೀಯ ರೈಲ್ವೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ರಾಜ್ಯಸಭಾ ಸದಸ್ಯರಾಗಿರುವ ನಾರಾಯಣಸಾ ಕೆ. ಭಾಂಡೆಗೆ ಅವರ ಪತ್ರಕ್ಕೆ ಮಹತ್ವದ ಸ್ಪಂದನೆ ದೊರೆತಿದೆ. ಈ ಬಗ್ಗೆ ಸಂಸದರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಂದು ಮಹತ್ವದ ಹೆಜ್ಜೆ
ವಿಜಯಪುರ–ತಿರುಪತಿ ನೇರ ರೈಲು ಸೇವೆ ಆರಂಭಿಸುವ ಕುರಿತು ನಾನು ರೈಲ್ವೆ ಇಲಾಖೆಗೆ ಸಲ್ಲಿಸಿದ್ದ ಮನವಿಗೆ ಮಹತ್ವದ ಸ್ಪಂದನೆ ದೊರೆತಿದೆ. ದಕ್ಷಿಣ ಮಧ್ಯ ರೈಲ್ವೆ (South Central Railway), ಸಿಕಂದರಾಬಾದ್ ಕಚೇರಿಯು ನನ್ನ ಮನವಿಯನ್ನು ಸಂಬಂಧಿತ ದಕ್ಷಿಣ ಕರಾವಳಿ ರೈಲ್ವೆ (South Coast Railway), ವಿಶಾಖಪಟ್ಟಣಂ ವಿಭಾಗಕ್ಕೆ ಮುಂದಿನ ಪರಿಶೀಲನೆ ಹಾಗೂ ಅಗತ್ಯ ಕ್ರಮಕ್ಕಾಗಿ ರವಾನಿಸಿದೆ ಎಂದು ಸಂಸದರು ಹೇಳಿದ್ದಾರೆ.
ನಾರಾಯಣಸಾ ಕೆ. ಭಾಂಡೆಗೆ ಹೇಳಿಕೆ
ಉತ್ತರ ಕರ್ನಾಟಕದ ಭಕ್ತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿರುವ ಈ ರೈಲು ಸೇವೆ ಸಾಕಾರಗೊಳ್ಳುವ ದಿಸೆಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ವಿಜಯಪುರ–ತಿರುಪತಿ ನೇರ ರೈಲು ಸೇವೆ ಮಂಜೂರಾಗುವವರೆಗೆ ನನ್ನ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ. ಈ ಸೇವೆ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ ಎಂಬ ವಿಶ್ವಾಸವಿದೆ. ಜನರ ಆಶಯಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ ಎಂದು ನಾರಾಯಣಸಾ ಕೆ. ಭಾಂಡೆಗೆ ಹೇಳಿದ್ದಾರೆ.
ಇದನ್ನೂ ಓದಿ: ನೆಲಮಂಗಲ ಬಳಿ ಕೆಟ್ಟು ನಿಂತ ರೈಲಿನಿಂದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪರದಾಟ
ವಿಜಯಪುರ To ತಿರುಪತಿ ಮಾರ್ಗ?
ಮಾರ್ಗ 1: ವಿಜಯಪುರದಿಂದ ಆರಂಭವಾಗುವ ಈ ಪ್ರಯಾಣ ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆಆಲೂರು, ಗದಗ ಜಂಕ್ಷನ್, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್ ಮಾರ್ಗವಾಗಿ ತಿರುಪತಿ ತಲುಪಬಹುದಾಗಿದೆ.
ಮಾರ್ಗ 2: ಒಂದು ವೇಳೆ ಕಲಬುರಗಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ವಿಜಯಪುರದಿಂದ ವಾಯ ಹುಟುಗಿ ಜಂಕ್ಷನ್ನಿಂದ ಕಲಬುರಗಿ, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ, ರಾಣಿಗುಂಟಾ ಜಂಕ್ಷನ್ ಮಾರ್ಗವಾಗಿ ತಿರುಪತಿ ತಲುಪಬಹುದಾಗಿದೆ. ಆದ್ರೆ ಭಾರತೀಯ ರೈಲ್ವೆ ಇಲಾಖೆ ಯಾವ ಮಾರ್ಗ ಮತ್ತು ಎಲ್ಲೆಲ್ಲಿ ನಿಲುಗಡೆಯನ್ನು ಹೊಂದಲಿದೆ ಎಂಬುದರ ಬಗ್ಗೆ ಅಧಿಕೃತವಾದ ಮಾಹಿತಿ ಹೊರ ಬಂದಿಲ್ಲ.
ಇದನ್ನೂ ಓದಿ: ಮುರಡೇಶ್ವರ-ಕಾಚಿಗುಡು ರೈಲು ಇನ್ಮುಂದೆ ಕುಮಟಾಗೆ ವಿಸ್ತರಣೆ- ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ

