ಮಹಾಂತೇಶ್ ಬೀಳಗಿ ಸಾವು; ಚಾಲಕ ಆಂಥೋನಿ ರಾಜ ವಿರುದ್ಧ FIR ದಾಖಲು
ಕಲಬುರಗಿಯಲ್ಲಿ ನಡೆದ ಭೀಕರ ಕಾರ್ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನರಾಗಿದ್ದಾರೆ. ಚಾಲಕನ ಅತಿವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೆಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಮಹಾಂತೇಶ್ ಬೀಳಗಿ ಕಾರ್ ಅಪಘಾತ
ಕಲಬುರಗಿ: ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಾರ್ ಅಪಘಾತದಲ್ಲಿ ಮೃತರಾಗಿದ್ದಾರೆ. ಈ ಪ್ರಕರಣ ಸಂಬಂಧ ಚಾಲಕ ಆರೋಕಿಯಾ ಆಂಥೋನಿ ರಾಜ ವಿರುದ್ದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚಾಲಕನ ವಿರುದ್ಧ ಎಫ್ಐಆರ್
ಮಹಾಂತೇಶ್ ಬೀಳಗಿ ಸಂಬಂಧಿ ಬಸವರಾಜ್ ಕಮರಟಗಿ ಎಂಬವರು ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಜೇವರ್ಗಿ ಠಾಣೆಯ ಪೊಲೀಸರು ಚಾಲಕ ಆರೋಕಿಯಾ ಆಂಥೋನಿ ರಾಜ ವಿರುದ್ದ 281 , 125(A)125(B)106 ಬಿಎನ್ಎಸ್ ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಅಪಘಾತಕ್ಕೆ ಕಾರಣ ಏನು?
ಚಾಲಕನ ಅತಿವೇಗ ಅಜಾರೋಗತೆಕತೆಯಿಂದ ಅಪಘಾತ ಸಂಭವಿಸಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ. ರಸ್ತೆ ಬದಿಯ ಬ್ರಿಡ್ಜ್ ಗೆ ಕಾರು ಡಿಕ್ಕಿಯಾಗಿ ನಾಲ್ಕೈದು ಬಾರಿ ಕಾರ್ ಪಲ್ಟಿಯಾಗಿದೆ. ಕಾರ್ ಪಲ್ಟಿಯಾದ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ರೆ, ಆಸ್ಪತ್ರೆಯಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಾವನ್ನಪ್ಪಿದ್ದಾರೆ. ಕಾರ್ ಚಾಲಕ ಆಂಥೋನಿ ರಾಜ್ ಸಹ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಅಂತಿಮ ದರ್ಶನಕ್ಕೆ ವ್ಯವಸ್ಥೆ
ಅಪಘಾತದಲ್ಲಿ ಮೃತರಾದ ಮಹಾಂತೇಶ್ ಬೀಳಗಿ ಮೃತದೇಹವನ್ನು ರಾಮದುರ್ಗಕ್ಕೆ ತೆಗೆದುಕೊಂಡು ಬರಲಾಗಿದೆ. ರಾಮದುರ್ಗದ ಪಂಚಗಟಿಮಠ ಶಾಲಾ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಹಿರಿಯ ಅಧಿಕಾರಿಗಳು, ರಾಜಕೀಯ ಮುಖಂಡರು ಆಗಮಿಸಿ ಮಹಾಂತೇಶ್ ಬೀಳಗಿ ಅವರ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಶಾಲಾ ವಾಹನ ಟ್ರಕ್ ನಡುವೆ ಡಿಕ್ಕಿ, ಗಾಯಗೊಂಡ 8 ಮಕ್ಕಳ ಆಸ್ಪತ್ರೆ ದಾಖಲು
ಸಂತಾಪ ಸೂಚಿಸಿದ ಸಿಎಂ
ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ನೋವುಂಟು ಮಾಡಿದೆ. ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ಮಹಾಂತೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಕಡೆಗಳಲ್ಲಿಯೂ ತಮ್ಮ ದಕ್ಷತೆಯಿಂದಾಗಿ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

