ಸಿಎಂ ಸಿದ್ದರಾಮಯ್ಯ ಕಾರಿಗೆ ಅಡ್ಡ ಮಲಗಿ ರೈತನ ಆಕ್ರೋಶ; ಕಾಲಿನಿಂದ ಒದ್ದ ಪೊಲೀಸರು!
ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಕಾರಿಗೆ ರೈತ ಮುಖಂಡ ಬಲ್ಲೂರು ರವಿಕುಮಾರ್ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಮನವಿ ಸಲ್ಲಿಸಲು ಅವಕಾಶ ನೀಡದೆ ಅವರ ಮೇಲೆ ಹಲ್ಲೆ ನಡೆಸಿದ್ದಕ್ಕೆ ರೈತ ಮುಖಂಡ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ರೈತರ ಮನವಿ ಸ್ವೀಕರಿಸಿದರು.

ದಾವಣಗೆರೆ (ಜೂ. 16): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾವಣಗೆರೆ ಜಿಲ್ಲಾ ಪ್ರವಾಸದಲ್ಲಿದ್ದ ವೇಳೆ, ರೈತರ ಮನವಿಗೆ ಸ್ಪಂದಿಸದ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡ ಬಲ್ಲೂರು ರವಿಕುಮಾರ್ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಅವಕಾಶ ಕೊಡದೇ ಪೊಲೀಸರಿಂದ ತಳ್ಳಲ್ಪಟ್ಟಿದ್ದು, ಒಬ್ಬರು ಕಾಲಿನಿಂದ ಒದ್ದಿದ್ದಾರೆ. ಇದರಿಂದ ಆಕ್ರೋಶಗೊಂಡ ರವಿಕುಮಾರ್ ನೇರವಾಗಿ ಸಿಎಂ ಸಾಗುತ್ತಿದ್ದ ಕಾರಿಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯು ದಾವಣಗೆರೆ ಹೆದ್ದಾರಿ ಪಕ್ಕದಲ್ಲಿರುವ ಪ್ರವಾಸಿ ಮಂದಿರದ ಬಳಿ ನಡೆದಿದೆ. ರೈತ ಮುಖಂಡ ರವಿಕುಮಾರ್ ಅವರು ತಮ್ಮ ಪ್ರದೇಶದ ಕೆರೆ ತುಂಬಿಸುವುದು ಹಾಗೂ ಹೂಳೆತ್ತುವ ಸಮಸ್ಯೆ ಕುರಿತು ಮನವಿ ನೀಡಲು ಬಂದಿದ್ದರು. ಆದರೆ ಭದ್ರತಾ ಸಿಬ್ಬಂದಿ ಅವರನ್ನು ತಡೆದು, ಅವರ ಮೇಲೆ ಕಾಲಿನಿಂದ ಒತ್ತಿದ್ದಾರೆ ಎಂಬ ಆರೋಪ ಹೊರಸಾಗಿದೆ.
ಇದಕ್ಕೆ ಕೋಪಗೊಂಡ ರವಿಕುಮಾರ್, 'ಪೊಲೀಸರು ಮಾನವೀಯತೆ ಇಲ್ಲದೆ ವರ್ತಿಸುತ್ತಿದ್ದಾರೆ. ರೈತರ ಕಳವಳವನ್ನು ಹಗುರವಾಗಿ ತೆಗೆದುಕೊಳ್ಳಲಾಗುತ್ತಿದೆ' ಎಂದು ಜೋರಾಗಿ ಕಿಡಿಕಾರಿದರು. ತಕ್ಷಣವೇ ಸಿಎಂ ಸಿದ್ದರಾಮಯ್ಯ ಅವರು ಕಾರು ನಿಲ್ಲಿಸಿ, ರೈತ ಮುಖಂಡರನ್ನು ತಮ್ಮ ಬಳಿ ಕರೆಸಿ ಮಾತುಕತೆ ನಡೆಸಿದರು.
ಪ್ರತಿಭಟನೆ ನಂತರ ಸಿಎಂ ಅವರು ರೈತ ಮುಖಂಡನ ಮನವಿಯನ್ನು ಸ್ವೀಕರಿಸಿದರು ಹಾಗೂ ಪೊಲೀಸರ ವಿರುದ್ಧ ನಡೆದಿರುವ ವರ್ತನೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ರೈತ ಮುಖಂಡನ ನೇತೃತ್ವದಲ್ಲಿ ಹಲವು ರೈತರು ಪ್ರತಿಭಟನೆ ಮುಂದುವರೆಸಿದ್ದು, ಭದ್ರತಾ ಸಿಬ್ಬಂದಿಯ ವಿರೋಧವಾಗಿ ಘೋಷಣೆಗಳನ್ನು ಕೂಗಿದರು. 'ಕೇವಲ ಮನವಿ ಸಲ್ಲಿಸಲು ಬಂದಿರುವ ರೈತರಿಗೆ ಈ ರೀತಿಯ ವರ್ತನೆ ಮಾಡಲಾಗುತ್ತಿರುವುದು ಸರಿಯಾದ ನಡೆಯಲ್ಲ. ನಾವು ನ್ಯಾಯಕ್ಕಾಗಿ ಹೋರಾಡುತ್ತೇವೆ' ಎಂದು ರೈತ ಮುಖಂಡರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.