- Home
- Karnataka Districts
- Bengaluru: ಬಿಡದಿಗಿಂತ ದೇವನಹಳ್ಳಿ ರೈತರಿಗೆ ಬಂಪರ್; ಪ್ರತಿ ಎಕರೆಗೆ ₹2.70 ಕೋಟಿ ಪರಿಹಾರಕ್ಕೆ KIADB ಶಿಫಾರಸು!
Bengaluru: ಬಿಡದಿಗಿಂತ ದೇವನಹಳ್ಳಿ ರೈತರಿಗೆ ಬಂಪರ್; ಪ್ರತಿ ಎಕರೆಗೆ ₹2.70 ಕೋಟಿ ಪರಿಹಾರಕ್ಕೆ KIADB ಶಿಫಾರಸು!
ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿ ಕೈಗಾರಿಕೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನಿಗೆ ಎಕರೆಗೆ ₹2.70 ಕೋಟಿ ಪರಿಹಾರ ನಿಗದಿಪಡಿಸಲಾಗಿದೆ. ಈ ಗ್ರಾಮಗಳ ರೈತರಿಗೆ ನಗದು ಪರಿಹಾರ ಅಥವಾ ಅಭಿವೃದ್ಧಿಪಡಿಸಿದ ಕೈಗಾರಿಕಾ ಜಾಗವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕೆಐಎಡಿಬಿ (KIADB) ನೀಡಿದೆ.

ಬೆಂಗಳೂರು (ಜೂ.24): ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲ್ಲೂಕಿನ ರೈತರ ಭೂಮಿಗೆ ಈಗ ಬಂಗಾರದ ಬೆಲೆ ಬಂದಿದೆ. ಕೈಗಾರಿಕಾ ಉದ್ದೇಶಕ್ಕಾಗಿ ರೈತರು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಲು ಒಪ್ಪಿರುವ ಜಮೀನಿಗೆ ಎಕರೆಗೆ ಬರೋಬ್ಬರಿ 2.70 ಕೋಟಿ ರೂಪಾಯಿ ಪರಿಹಾರ ನೀಡಲು ಭೂದರ ನಿರ್ಧಾರಣಾ ಸಲಹಾ ಸಮಿತಿಯು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (KIADB) ಶಿಫಾರಸು ಮಾಡಿದೆ. ಇದು ದೇವನಹಳ್ಳಿ ಭಾಗದಲ್ಲೇ ಈವರೆಗೆ ನಿಗದಿಪಡಿಸಲಾದ ಅತ್ಯಂತ ಹೆಚ್ಚಿನ ಪರಿಹಾರ ದರವಾಗಿದೆ.
ಯಾವ ಗ್ರಾಮಗಳ ಭೂಮಿ ಸ್ವಾಧೀನ?
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಗೋಕರೆಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 120 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಗುರುತಿಸಲಾಗಿದೆ. ಈ ಜಮೀನನ್ನು ರೈತರು ತಾವಾಗಿಯೇ ಬಿಟ್ಟುಕೊಡಲು ಸಮ್ಮತಿಸಿದ್ದು, ಕೆಐಎಡಿಬಿ ಕಾಯ್ದೆಯನ್ವಯ ಜೂನ್ 16ರಂದೇ ಅಂತಿಮ ಅಧಿಸೂಚನೆ ಹೊರಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು.
ರೈತರಿಗೆ ಎರಡು ಆಯ್ಕೆಗಳು:
ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ಎ.ಎನ್. ರಘುನಂದನ್ ಅಧ್ಯಕ್ಷತೆಯಲ್ಲಿ ನಡೆದ ಭೂಮಾಲೀಕರ ಜಂಟಿ ಸಭೆಯಲ್ಲಿ ಪರಿಹಾರದ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು. ರೈತರಿಗೆ ಇಲ್ಲಿ ಎರಡು ರೀತಿಯ ಆಯ್ಕೆಗಳನ್ನು ನೀಡಲಾಗಿದೆ:
ನಗದು ಪರಿಹಾರ: ಪ್ರತಿ ಎಕರೆಗೆ 2.70 ಕೋಟಿ ರೂಪಾಯಿ ಹಣವನ್ನು ನೇರವಾಗಿ ಪಡೆಯಬಹುದು.
ಅಭಿವೃದ್ಧಿಪಡಿಸಿದ ಜಾಗ: ಹಣದ ರೂಪದಲ್ಲಿ ಪರಿಹಾರ ಬೇಡವೆಂದಾದಲ್ಲಿ, ಪ್ರತಿ ಎಕರೆ ಕೃಷಿ ಜಮೀನಿಗೆ ಪ್ರತಿಯಾಗಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಬಡಾವಣೆಯಲ್ಲಿ 10,781 ಚದರ ಅಡಿ ಜಾಗವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ಸರ್ಕಾರದ ಆಶಯ ಮತ್ತು ಮುಂದಿನ ಹಂತ:
'ಸಂತ್ರಸ್ತ ರೈತರಿಗೆ ನ್ಯಾಯಯುತ ಮತ್ತು ಆಕರ್ಷಕ ಪರಿಹಾರ ನೀಡಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ದೇವನಹಳ್ಳಿಯ ಈ ಭಾಗದಲ್ಲಿ ಈ ದರವು ಐತಿಹಾಸಿಕವಾಗಿದ್ದು, ರೈತರ ಹಿತಾಸಕ್ತಿಯನ್ನು ಕಾಪಾಡಲಾಗಿದೆ' ಎಂದು ರಘುನಂದನ್ ತಿಳಿಸಿದ್ದಾರೆ. ಪ್ರಸ್ತುತ ಸಮಿತಿಯು ನೀಡಿರುವ ಈ ಶಿಫಾರಸನ್ನು ಕೆಐಎಡಿಬಿ ಮಂಡಳಿಯ ಅಂತಿಮ ಅನುಮೋದನೆಗೆ ಕಳುಹಿಸಿಕೊಡಲಾಗುವುದು. ಮಂಡಳಿಯ ಒಪ್ಪಿಗೆ ಸಿಕ್ಕ ತಕ್ಷಣ ಪರಿಹಾರ ವಿತರಣಾ ಪ್ರಕ್ರಿಯೆ ಆರಂಭವಾಗಲಿದೆ.
ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಸೂರಜ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದು, ರೈತರ ಅಹವಾಲುಗಳನ್ನು ಆಲಿಸಿದರು. ಈ ನಿರ್ಧಾರದಿಂದ ದೇವನಹಳ್ಳಿಯ ಕೈಗಾರಿಕಾ ವಲಯದ ಬೆಳವಣಿಗೆಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.

