- Home
- Karnataka Districts
- ದಾಂಡೇಲಿ ರೆಸಾರ್ಟ್ನಲ್ಲಿ ಜಿಪ್ ಲೈನ್ ತುಂಡಾಗಿ 40 ಅಡಿ ಎತ್ತರದಿಂದ ಬಿದ್ದ ಪ್ರವಾಸಿಗ; 15 ದಿನದ ಬಳಿಕ FIR ದಾಖಲು!
ದಾಂಡೇಲಿ ರೆಸಾರ್ಟ್ನಲ್ಲಿ ಜಿಪ್ ಲೈನ್ ತುಂಡಾಗಿ 40 ಅಡಿ ಎತ್ತರದಿಂದ ಬಿದ್ದ ಪ್ರವಾಸಿಗ; 15 ದಿನದ ಬಳಿಕ FIR ದಾಖಲು!
ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್ನಲ್ಲಿ ಜಿಪ್ಲೈನ್ ಆಡುವಾಗ ಸುರಕ್ಷತಾ ಬೆಲ್ಟ್ ತುಂಡಾಗಿ ಪ್ರವಾಸಿಗರೊಬ್ಬರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 15 ದಿನದ ಬಳಿಕ ರೆಸಾರ್ಟ್ ಸಿಬ್ಬಂದಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ದಾಂಡೇಲಿಯಲ್ಲಿ ಜಿಪ್ಲೈನ್ ದುರಂತ
ಉತ್ತರ ಕನ್ನಡ (ಜು.21): ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ದಾಂಡೇಲಿಯಲ್ಲಿ ಜು.3ರಂದು ಭೀಕರ ಅವಘಡವೊಂದು ಸಂಭವಿಸಿದೆ. ಇಲ್ಲಿನ ಸ್ಟರ್ಲಿಂಗ್ ರಿವರ್ ರೆಸಾರ್ಟ್ನಲ್ಲಿ (Sterling River Resort) ಜಿಪ್ ಲೈನ್ (Zip-line) ಆಟವಾಡುತ್ತಿದ್ದಾಗ ಸುರಕ್ಷತಾ ಬೆಲ್ಟ್ (Safety Belt) ತುಂಡಾಗಿ ಪ್ರವಾಸಿಗರೊಬ್ಬರು ಸುಮಾರು 40 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು (Viral Video), ನೋಡಿದವರ ಎದೆ ಝಲ್ಲೆನ್ನುವಂತಿದೆ.
ಏನಿದು ಘಟನೆ?:
ವಿಜಯಪುರ (Vijayapura) ನಗರದ ನಿವಾಸಿ ಕುಬೇರ ಸುರಪುರ (Kuber Surpur, 40) ಅವರು ಕಳೆದ ಜುಲೈ 3 ರಂದು ತಮ್ಮ ಸಹೋದರ ಪ್ರಶಾಂತ್ ಅವರೊಂದಿಗೆ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್ಗೆ ಪ್ರವಾಸಕ್ಕೆ ಬಂದಿದ್ದರು. ರೆಸಾರ್ಟ್ನಲ್ಲಿ ಸಾಹಸ ಕ್ರೀಡೆಯಾದ ಜಿಪ್ ಲೈನ್ ಆಡುತ್ತಿದ್ದಾಗ, ಹಠಾತ್ತಾಗಿ ಜಿಪ್ ಲೈನ್ ಲಾಕ್ (Lock Cut) ಕಟ್ ಆಗಿದೆ. ಪರಿಣಾಮ ಕುಬೇರ ಅವರು 30 ರಿಂದ 40 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದಿದ್ದಾರೆ.
ಸಹೋದರನ ಮೊಬೈಲ್ನಲ್ಲಿ ಸೆರೆಯಾಯ್ತು ಲೈವ್ ವಿಡಿಯೋ:
ಕುಬೇರ ಅವರು ಜಿಪ್ ಲೈನ್ನಲ್ಲಿ ಬರುತ್ತಿದ್ದ ದೃಶ್ಯವನ್ನು ಅವರ ಸಹೋದರ ಪ್ರಶಾಂತ್ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದರು. ಖುಷಿಯಿಂದ ಕಿರುಚುತ್ತಾ ಬರುತ್ತಿದ್ದ ಕುಬೇರ, ಕ್ಷಣಾರ್ಧದಲ್ಲಿ ಬೆಲ್ಟ್ ತುಂಡಾಗಿ ಕೆಳಕ್ಕೆ ಬೀಳುವ ದೃಶ್ಯ ಕಂಡು ಪ್ರಶಾಂತ್ ಬೆಚ್ಚಿಬಿದ್ದಿದ್ದಾರೆ. ಈ ಅಪಘಾತದಲ್ಲಿ ಕುಬೇರ ಅವರ ಎರಡೂ ಕೈ ಮತ್ತು ಎರಡೂ ಕಾಲುಗಳ ಎಲುಬು ಮುರಿದಿದ್ದು (Multiple Fractures), ನರಗಳಿಗೂ ಗಂಭೀರ ಹಾನಿಯಾಗಿದೆ.
ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ರೆಸಾರ್ಟ್ ಸಿಬ್ಬಂದಿ ನಿರ್ಲಕ್ಷ್ಯದ ಆರೋಪ:
ರೆಸಾರ್ಟ್ ಸಿಬ್ಬಂದಿಯ ನಿರ್ಲಕ್ಷ್ಯವೇ (Staff Negligence) ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದ ರೆಸಾರ್ಟ್ ಮ್ಯಾನೇಜ್ಮೆಂಟ್ (Resort Management), ಈಗ ಸ್ಪಂದಿಸುತ್ತಿಲ್ಲ ಎಂದು ಗಾಯಾಳುವಿನ ಕುಟುಂಬದವರು ದೂರಿದ್ದಾರೆ. ಸದ್ಯ ಕುಬೇರ ಅವರು ಮೀರಜ್ ಆಸ್ಪತ್ರೆಯಲ್ಲಿ (Miraj Hospital) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹಾಸಿಗೆ ಹಿಡಿದಿದ್ದಾರೆ.
ಪೊಲೀಸ್ ದೂರು ಮತ್ತು ಎಫ್ಐಆರ್:
ಈ ಘಟನೆಗೆ ಸಂಬಂಧಿಸಿದಂತೆ ಜುಲೈ 21 ರಂದು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Dandeli Rural Police Station) ಪ್ರಕರಣ ದಾಖಲಾಗಿದೆ. ರೆಸಾರ್ಟ್ ಮಾಲೀಕ ಉಸ್ಮಾನ್ ವಹಾಬ್, ಸಿಬ್ಬಂದಿಗಳಾದ ರಾಘವೇಂದ್ರ ಶೆಟ್ಟಿ ಮತ್ತು ಪವನ್ ಎಂಬುವವರ ಮೇಲೆ ಬಿಎನ್ಎಸ್ (BNS 2023) ಕಾಯ್ದೆಯಡಿ ವಿವಿಧ ಕಲಂಗಳಲ್ಲಿ ಕೇಸ್ ದಾಖಲಿಸಲಾಗಿದೆ. ಸಾಹಸ ಕ್ರೀಡೆಗಳ ಹೆಸರಿನಲ್ಲಿ ಪ್ರವಾಸಿಗರ ಪ್ರಾಣದ ಜೊತೆ ಆಟವಾಡುತ್ತಿರುವ ರೆಸಾರ್ಟ್ಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

